ಹಣ, ರಕ್ತ ಎರಡನ್ನೂ ಕೂಡಿಟ್ಟರೆ ತೊಂದರೆ ಹೆಚ್ಚು, ದಾನ ಮಾಡಿ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-12-09 13:12 GMT

ಬೆಂಗಳೂರು, ಡಿ.9: ಹಣವನ್ನು ಪೆಟ್ಟಿಗೆಯಲ್ಲಿ ಕೂಡಿಟ್ಟರೆ ಐಟಿ ದಾಳಿ ಸೇರಿದಂತೆ ನಾನಾ ತೊಂದರೆಗಳು ಬರುತ್ತವೆ. ಅದೇ ರೀತಿ ರಕ್ತವನ್ನು ದೇಹದಲ್ಲಿ ಕೂಡಿಟ್ಟರೂ ತೊಂದರೆ. ಹೀಗಾಗಿ ಎರಡನ್ನೂ ಆಗಾಗ್ಗೆ ದಾನ ಮಾಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕ್ ಶಾಖೆ ವತಿಯಿಂದ ಏರ್ಪಡಿಸಿದ್ದ 15ನೇ ವರ್ಷದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಣಕೊಟ್ಟು ಜೀವಪಡೆಯಲು ಆಗುವುದಿಲ್ಲ. ಆದ ಕಾರಣ ಜೀವ ಉಳಿಸುವ ರಕ್ತವನ್ನು ಸ್ವಯಂಪ್ರೇರಿತರಾಗಿ ದಾನ ಮಾಡಬೇಕು. ದೇಹದಲ್ಲಿ ರಕ್ತ ಕೂಡಿಟ್ಟುಕೊಂಡರೆ ಮಧುಮೇಹ, ಹೃದಯಾಘಾತ ಸೇರಿದಂತೆ ಅನೇಕ ರೋಗಗಳು ಬರುತ್ತವೆ ಎಂದರು.

ಬಡ ರೋಗಗಳಿಗೆ, ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವ ಮೂಲಕ ಅವರ ಆರೋಗ್ಯಕ್ಕೆ ನೆರವಾಗಬೇಕು, ರಕ್ತ ಮತ್ತು ಹಣ ಎರಡೂ ಸಮಾಜದಲ್ಲಿ ಸಮಪ್ರಮಾಣದಲ್ಲಿ ಬಳಕೆಯಾಗಬೇಕು. ಆಗ ಮಾತ್ರ ನಮ್ಮ ಸಮಾಜ ಆರೋಗ್ಯವಾಗಿರುತ್ತದೆ. ಬ್ಯಾಂಕಿನವರು ಸಹ ಹಣವನ್ನು ಕೂಡಿಟ್ಟುಕೊಳ್ಳದೆ, ಜನರ ನಡುವೆ ಹಂಚಬೇಕು. ಹಣದ ಹರಿವು ಹೆಚ್ಚಾದಷ್ಟು ಲಾಭ, ಇಲ್ಲದಿದ್ದರೆ ತೊಂದರೆಗಳು ಬರುತ್ತವೆ ಎಂದು ಅವರು ನುಡಿದರು.

ಕೋವಿಡ್ ಸಂದರ್ಭದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಯುವ ಸಮೂಹ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ್ದರು. ನನ್ನ ಮನೆಯಲ್ಲಿ ಇರುವ ಒಂದು ಪೊಟೊ ಗಮನಿಸಬಹುದು 40 ವರ್ಷಗಳ ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಗಳಾಗಿದ್ದ ವೇಳೆ ಅವರ ಹುಟ್ಟುಹಬ್ಬದ ಅಂಗವಾಗಿ ನಾನು ರಕ್ತದಾನ ಶಿಬಿರ ಆಯೋಜನೆ ಮಾಡಿದ್ದನ್ನು ನೆನಪಿಗೆ ಇರುವ ಪೊಟೋ ಇದೆ ಎಂದು ಡಿ.ಕೆ.ಶಿವಕುಮಾರ್ ಮೆಲುಕು ಹಾಕಿದರು.

ಕಳೆದ ವರ್ಷ ನನ್ನ ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಣೆ ಮಾಡದೆ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಆಚರಣೆ ಮಾಡಲಾಯಿತು. ಒಟ್ಟು 4 ಸಾವಿರ ಯುನಿಟ್ ರಕ್ತ ಸಂಗ್ರಹವಾಗಿತ್ತು. ಮಾನವನ ಜೀವ ಅತ್ಯಮೂಲ್ಯ, ರಕ್ತದಾನ ಮಾಡುವ ಮೂಲಕ ನಮ್ಮ ದೇಹದ ಆರೋಗ್ಯದಲ್ಲಿ ಆಗುವ ಬದಲಾವಣೆಗಳ ಬಗ್ಗೆ ನನಗೆ ಅರಿವಿದೆ. ನಾವು ಹಣ ಕೊಡಬಹುದು ಆದರೆ ಜೀವ ಕೊಡಲು ಸಾಧ್ಯವಿಲ್ಲ. ರಕ್ತದಾನ ಶಿಬಿರಗಳು ಈ ಕಾಲದ ತುರ್ತು ಕೆಲಸಗಳು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

2 ಸಾವಿರ ಶಾಲೆಗಳ ಅಭಿವೃದ್ದಿ: 2 ಸಾವಿರ ಗ್ರಾಮೀಣ ಶಾಲೆಗಳನ್ನು ಸಿಎಸ್‍ಆರ್ ಅನುದಾನದ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗುವುದು. ಈ ಬಗ್ಗೆ ಚಿಂತನೆ ಮಾಡಲಾಗಿದ್ದು, ಖಾಸಗಿ ಕಂಪೆನಿಗಳ ಆಡಳಿತ ಮಂಡಳಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಕರ್ನಾಟಕದ ಶಾಲೆಗಳಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದೆ. ಈಗಾಗಲೆ ಎಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜೊತೆ ಮಾತುಕತೆ ನಡೆಸಿ ಗ್ರಾಮೀಣ ಭಾಗದ ಒಂದೊಂದು ಶಾಲೆಗಳ ನಿರ್ವಹಣೆ ಮಾಡುವುದರ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಸರಕಾರದಿಂದ ಒಂದು ಸಮಿತಿ ರಚನೆ ಮಾಡಿ ಕಾರ್ಪೋರೇಟ್ ವಲಯದಿಂದ 2 ಸಾವಿರ ಶಾಲೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಯೋಜನೆ ರೂಪಿಸಲಾಗಿದೆ. ಕಂಪೆನಿಗಳು ಅವರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಶಾಲೆಗಳ ಉಸ್ತುವಾರಿ ನೋಡಿಕೊಳ್ಳಬಹುದು. ಸರಕಾರ ಸಮಾಜಮುಖಿ ಕೆಲಸಗಳಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ನೀವು ಆಯ್ಕೆ ಮಾಡಿಕೊಂಡ ಶಾಲೆಗಳ ಮುಂದೆ ಎಚ್‍ಡಿಎಫ್‍ಸಿ ಬ್ಯಾಂಕ್ ಅಭಿವೃದ್ದಿ ಪಡಿಸಿದ ಶಾಲೆ ಎಂದು ಹೆಸರಿಸಿಕೊಳ್ಳಬಹುದು. ಈ ಕಾರ್ಯಕ್ರಮವನ್ನು ತೆಲಂಗಾಣದ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಉಲ್ಲೇಖಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News