ಮೋದಿಯ ಆಡಳಿತದಲ್ಲಿ ದೇಶ ಅಮೃತ ಕಾಲದಲ್ಲಿದೆಯೋ? ಅನ್ಯಾಯದ ಕಾಲದಲ್ಲಿದೆಯೋ? ಜನರೇ ತೀರ್ಮಾನಿಸಲಿ: ಸಿಎಂ ಸಿದ್ದರಾಮಯ್ಯ

Update: 2024-02-10 13:37 GMT

ಬೆಂಗಳೂರು: ‘ಹತ್ತು ವರ್ಷಗಳ ನರೇಂದ್ರ ಮೋದಿಯವರ ಅನ್ಯಾಯ ಕಾಲದ ವಿವರಗಳನ್ನು ಅಂಕಿ-ಅಂಶಗಳ ಸಹಿತ ಕರ್ನಾಟಕ ರಾಜ್ಯದ ಜನತೆಯ ಮುಂದೆ ಇಟ್ಟಿದ್ದೇನೆ. ದೇಶವಿಂದು ಅಮೃತ ಕಾಲದಲ್ಲಿ ಇದೆಯೋ? ಅನ್ಯಾಯದ ಕಾಲದಲ್ಲಿ ಇದೆಯೋ? ಎಂದು ಜನರೇ ತೀರ್ಮಾನಿಸಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘10 ವರ್ಷಗಳ ಬಿಜೆಪಿ ಆಡಳಿತವನ್ನು ಮೋದಿಯವರು ಮತ್ತು ಬಿಜೆಪಿಯ ನಾಯಕರು ‘ಅಮೃತ ಕಾಲ’ ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ. ಈ ಅವಧಿಯಲ್ಲಿ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಶೋಷಿತರು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟ ಕಾರ್ಪಣ್ಯಗಳು ಐದರಿಂದ ಹತ್ತು ಪಟ್ಟು ಹೆಚ್ಚಾಗಿದೆ’ ಎಂದು ಹೇಳಿದ್ದಾರೆ.

‘10 ವರ್ಷಗಳ ಹಿಂದೆ ಮೋದಿ ಈ ದೇಶದ ಮತದಾರರಿಗೆ ನೀಡಿದ್ದ ಒಂದು ಭರವಸೆಯನ್ನು ಪೂರ್ಣ ಈಡೇರಿಸಿಲ್ಲ. ರೈತರ ಆದಾಯದ ದುಪ್ಪಟ್ಟು, ಯುವಜನರಿಗೆ ವಾರ್ಷಿಕ 2ಕೋಟಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಅಗ್ಗದ ದರದಲ್ಲಿ ಅಗತ್ಯವಸ್ತುಗಳ ಪೂರೈಕೆ ಭರವಸೆಗಳನ್ನು ನೀಡಿ ಮೋದಿಯವರು ಚುನಾವಣೆಯಲ್ಲಿ ಗೆದ್ದಿದ್ದರು. ಗೆದ್ದ ನಂತರ ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತು ದೇವರು-ಧರ್ಮದ ಹೆಸರಿನ ಭಾವನಾತ್ಮಕ ರಾಜಕಾರಣ, ಉದ್ಯಮಿಗಳ ತುಷ್ಟೀಕರಣದಲ್ಲಿ ಮುಳುಗಿ ಹೋಗಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News