ಕೋಲಾರ: ಶಾಲಾ ಆವರಣದಲ್ಲಿ ಬಾಲಕನ ಹತ್ಯೆ

Update: 2023-11-05 05:21 GMT

ಕಾರ್ತಿಕ್‌ ಸಿಂಗ್‌ - ಮೃತ ಬಾಲಕ

ಕೋಲಾರ: ನಗರದ ಪೇಟೆಚಾಮನಹಳ್ಳಿ ಸಮೀಪದ ಟೇಕಲ್‌ ರಸ್ತೆಯ ಬಾಪೂಜಿ ಶಾಲಾ ಆವರಣದಲ್ಲಿ ಬಾಲಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಕೋಲಾರದ ವೀರಾಂಜನೇಯ ನಗರದ ಅರುಣ್‌ ಸಿಂಗ್‌ ಮತ್ತು ಸುಶೀಲಾ ದಂಪತಿಯ ಪುತ್ರ ಕಾರ್ತಿಕ್‌ ಸಿಂಗ್‌ (17) ಹತ್ಯೆಗೀಡಾದ ಬಾಲಕ ಎಂದು ತಿಳಿದು ಬಂದಿದೆ.

ಕೊಲೆ ಮಾಡಿ, ಕಾನೂನು ಸಂಘರ್ಷಕ್ಕಿಡಾದ ಬಾಲಕರು ತಲೆಮರೆಸಿಕೊಂಡಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದ ಬೈಪಾಸ್ ರಸ್ತೆಯಲ್ಲಿರುವ ಎಸ್‌ಡಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್‌ನನ್ನು ಆರೋಪಿಗಳು ಶುಕ್ರವಾರ ರಾತ್ರಿ 8 ಗಂಟೆ ಹೊತ್ತಿಗೆ ಪೇಟೆಚಾಮನಹಳ್ಳಿ ಬಡಾವಣೆಯ ಶಾಲೆ ಅವರಣಕ್ಕೆ ಕರೆಸಿಕೊಂಡು ಹತ್ಯೆ ಮಾಡಿದ್ದಾರೆ. ಹತ್ಯೆಗೂ ಮುನ್ನ ಬಾಲಕನಿಗೆ ಚಿತ್ರ ಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರನೆಂದು ಹೇಳಲಾಗುತ್ತಿದೆ. ಇಬ್ಬರು ಬಾಲಕರ ಮೇಲೆ ಲಾಂಗ್‌ನಿಂದ ಹಲ್ಲೆನಡೆಸಿದ್ದ ಸಂಬಂಧ ಈ ಗ್ಯಾಂಗ್‌ನ ಕೆಲವರ ಮೇಲೆ ನಗರದ ಮಹಿಳಾ ಠಾಣೆಯಲ್ಲಿಈ ಹಿಂದೆ ಪ್ರಕರಣ ದಾಖಲಾಗಿತ್ತು. ಕೊಲೆಯಾದ ಕಾರ್ತಿಕ್‌ ಸಿಂಗ್‌ಗೆ ಹಿಂದೆಯೂ ಈ ಗ್ಯಾಂಗ್‌ ಕಿರುಕುಳ ನೀಡಿರುವ ಬಗ್ಗೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News