ಕೋಲಾರ | ಬಾಲಕನ ಅಪಹರಣ: ಗಂಟೆಯೊಳಗಡೆ ಆರೋಪಿಗಳನ್ನು ಬಂಧಿಸಿದ ಪೊಲೀಸರು

Update: 2023-09-14 16:10 GMT

ಬಂಧಿತ ಆರೋಪಿಗಳು

ಕೋಲಾರ, ಸೆ.14: ಐದು ವರ್ಷದ ಬಾಲಕನನ್ನು ಅಪಹರಣ ಮಾಡಿದ ಆರೋಪಿಗಳನ್ನು ಘಟನೆ ನಡೆದ ಗಂಟೆಯೊಳಗಡೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಬೇತಮಂಗಲದ ವೆಂಕಟೇಶ್ ಹಾಗೂ ಅರಹಳ್ಳಿಯ ಶ್ರೀಕಾಂತ್ ಎಂದು ಗುರುತಿಸಲಾಗಿದೆ.

ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ ಲೋಕೇಶ್ ಎಂಬುವವರ ಮಗ ಯಶ್ವಿತ್ ಗೌಡನನ್ನು ಗುರುವಾರ ಸಂಜೆ 5.30 ರ ಸುಮಾರಿಗೆ ಅಪಹರಣ ಮಾಡಲಾಗಿತ್ತು. ಶಾಲೆಯಿಂದ ಮನೆಗೆ ಬರುವ ವೇಳೆ ಬಸ್ಸಿನಿಂದ ಇಳಿಯುತ್ತಿದ್ದಂತೆ ಮನೆ ಬಳಿ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಪಹರಣ ಮಾಡಿದ್ದರು. 

ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಾರ್ಯಾಚರಣೆಗಿಳಿದ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು, ಶ್ರೀನಿವಾಸಪುರ ಹಾಗೂ ಗಡಿಯ ಆಂದ್ರ ಪ್ರದೇಶದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಪಹರಣಾಕಾರರು ಶ್ರೀನಿವಾಸಪುರ ರಸ್ತೆಯಲ್ಲಿ ಹೋಗಿರುವ ಮಾಹಿತಿ ಮೇರೆಗೆ ಅಪಹರಣಕಾರರ ಬೆನ್ನುಬಿದ್ದ ಪೊಲೀಸರು, ತಕ್ಷಣ ಶ್ರೀನಿವಾಸಪುರ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಶ್ರೀನಿವಾಸಪುರದ ಪಿಎಸ್​ಐ ಈಶ್ವರ್​, ಎಎಸ್​ಐ ಎಂ.ಡಿ.ನಾರಾಯಣಪ್ಪ, ಕೋಲಾರ ಗ್ರಾಮಾಂತರ ಠಾಣೆಯ ಸಿಪಿಐ ಲೋಕೇಶ್​ ಕುಮಾರ್​ ಅಪಹರಣಕಾರರ ಬೆನ್ನು ಬಿದ್ದಿದ್ದರು. ಅಪಹರಣಕಾರರು ಶ್ರೀನಿವಾಸಪುರ ತಾಲೂಕು ಸೋಮಯಾಜಪಲ್ಲಿ ಬಳಿ ಹೋಗುತ್ತಿರುವ ಮಾಹಿತಿ ಸಿಕ್ಕ ಹಿನ್ನೆಲೆ ಅಪಹರಣಕಾರರನ್ನು ಅಲ್ಲಿಯೇ ಬಂಧಿಸಿದ್ದಾರೆ. 

ಸದ್ಯ ಪೊಲೀಸರು ಮಗುವನ್ನು ಪೋಷಕರ ಬಳಿ ಒಪ್ಪಿಸಿದ್ದು, ಅಪಹರಣಕಾರರನ್ನು ಮತ್ತು ಅವರು ಬಳಸಿದ್ದ ಬೈಕ್​​ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್​ ಸಿಬ್ಬಂದಿಯ ಕಾರ್ಯವೈಖರಿಯನ್ನು ಕೋಲಾರ ಎಸ್ಪಿ ನಾರಾಯಣ್​ ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News