ಚೊಂಬು ಹಿಡಿದು ಪ್ರಧಾನಿ ಮೋದಿ ಬಳಿ ಭಿಕ್ಷೆ ಬೇಡುತ್ತಿರುವ ಸರ್ಕಾರ: ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

Update: 2024-04-20 17:19 GMT

ಮೈಸೂರು: ರಾಜ್ಯ ಸರ್ಕಾರವು ಚೊಂಬು ಹಿಡಿದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಭಿಕ್ಷೆ ಬೇಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಸುತ್ತೂರು ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಶನಿವಾರ ಭೇಟಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಸರ್ಕಾರದ ಖಜಾನೆ ಖಾಲಿಯಾಗಿದೆ. ಅದನ್ನು ದಯವಿಟ್ಟು ತುಂಬಿಸಿಕೊಡಿ ಎಂದು ಮೋದಿ ಅವರ ಬಳಿ ಕೇಳುತ್ತಿದ್ದಾರೆ. ಕೋವಿಡ್‌ ಸಂಕಷ್ಟದ ಕಾಲದಲ್ಲೂ ರಾಜ್ಯದ ಖಜಾನೆ ಸುಭಿಕ್ಷವಾಗಿತ್ತು. ಕಾಂಗ್ರೆಸ್‌‍ನ ಅಪಪ್ರಚಾರದ ನಡುವೆಯೂ ಬಿಜೆಪಿಯವರು ಖಜಾನೆಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟಿದ್ದರು. ಆದರೆ, ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದ ಮೇಲೆ ಖಾಲಿಯಾಗಿದೆ. ಕನ್ನಡಿಗರ ಕೈಗೆ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜನರು ಕಟ್ಟಿದ ತೆರಿಗೆ ಹಣವನ್ನೆಲ್ಲ ಸಂಪೂರ್ಣ ನುಂಗಿದ್ದೇವೆ. ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದೇವೆ ಎನ್ನುವ ಚಿಹ್ನೆಯನ್ನು ಅವರು ತೋರಿಸಿದ್ದಾರೆ ಎಂದು ಟೀಕಿಸಿದರು.

ಸಂಸದೆ ಸುಮಲತಾ ಅವರು ನನ್ನ ಪರವಾಗಿ ಹೇಳಿಕೆ ನೀಡಿದಾಕ್ಷಣ ಬೆಂಬಲ ಎಂದರ್ಥವೇ? ಹೇಳಿಕೆ ನೀಡದೆಯೂ ಬೆಂಬಲ ಕೊಡಬಹುದಲ್ಲವೇ? ಪ್ರಚಾರಕ್ಕೆ ಇನ್ನೂ ಕೆಲವು ದಿನಗಳು ಅವಕಾಶವಿದೆ. ಏನು ಮಾಡುತ್ತಾರೆ ನೋಡೋಣ. ಅವರು ಬಿಜೆಪಿ ಸೇರಿದ್ದಾರೆ. ನಾನು ಎನ್‌ಡಿಎ ಅಭ್ಯರ್ಥಿ. ಆದ್ದರಿಂದ ಅವರ ಸಹಕಾರ ಇರಲಿದೆ ಎಂದು ಹೇಳಿದರು. 

ಜೆಡಿಎಸ್‌‍ ಮುಗಿಸಬೇಕು ಎನ್ನುವುದೇ ಸಿದ್ದರಾಮಯ್ಯ ಗುರಿ. ಈ ಮಟ್ಟಕ್ಕೆ ಬರಲು ಹಾಗೂ ಅವರನ್ನು ಕಾಂಗ್ರೆಸ್‌‍ ಪಕ್ಷದವರು ಗುರುತಿಸಲು ಯಾವ ಪಕ್ಷ ಕಾರಣ ಎಂಬುದನ್ನು ಮರೆತಿದ್ದಾರೆ. ಏಣಿ ಹತ್ತಿಸಿದವರನ್ನೇ ಸರ್ವನಾಶ ಮಾಡುವುದು ಅವರ ಹುಟ್ಟು ಗುಣ. ಈಗ ಜೆಡಿಎಸ್‌‍ ಮುಗಿಸುತ್ತೇನೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌‍ ಸರ್ವನಾಶವಾಗಲಿದೆ ಎಂದು ಅವರೇ ಹೇಳೀಕೆ ನೀಡುವ ದಿನಗಳೇನು ದೂರವಿಲ್ಲ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಅಮಾಯಕ ಹೆಣ್ಣು ಮಗಳನ್ನು ಬಲಿ ತೆಗೆದುಕೊಂಡು, ಪ್ರಮಾಣಪತ್ರವನ್ನೂ ನೀಡಿದ್ದಾರೆ. ಗದಗದಲ್ಲಿ ಒಂದೇ ಕುಟುಂಬದ ನಾಲ್ವರು ಕೊಲೆಯಾಗಿದೆ. ಮೈಸೂರಿನಲ್ಲಿ ಮೋದಿ ಹಾಡು ಬರೆದನೆಂಬ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆದಿದೆ. ಕೊಡಗಿನಲ್ಲೂ ವ್ಯಕ್ತಿಯ ಕೊಲೆಯಾಗಿದೆ. ಪ್ರತಿ ನಿತ್ಯ ಒಂದಿಲ್ಲೊಂದು ಅಪರಾಧ ಪ್ರಕರಣ ನಡೆಯುತ್ತಿದೆ. ಪಾಕಿಸ್ತಾನ್‌ ಝಿಂದಾಬಾದ್‌ ಎಂದು ಕೂಗಿದವರ ಸಂತತಿಯನ್ನು ಬೆಳೆಸಲು ಈ ಸರ್ಕಾರ ಇದೆಯೇನೋ ಎನಿಸುತ್ತಿದೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News