ಎಂದೂ ಇಲ್ಲದ ಜಾತಿ ಪ್ರೇಮ ಈಗ ಯಾಕೆ: ಪ್ರದೀಪ್ ಶೆಟ್ಟರ್ ಗೆ ಮಹೇಶ ಟೆಂಗಿನಕಾಯಿ ತಿರುಗೇಟು
ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಎಂದಿಗೂ ಕೂಡ ಯಾವುದೇ ಜಾತಿಯನ್ನು ಕಡೆಗಣಿಸಿಲ್ಲ. ಎಂದೂ ಇಲ್ಲದ ಜಾತಿ ಪ್ರೇಮ ಇಂದು ಉಕ್ಕಿ ಹರಿಯುತ್ತಿರುವುದನ್ನು ನೋಡಿದರೇ ನಿಜಕ್ಕೂ ನನಗೆ ಮುಜುಗರ ಉಂಟಾಗುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಬಿಜೆಪಿಯ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಲಿಂಗಾಯತರಿಗೆ ಮಾತ್ರವಲ್ಲದೆ ಯಾವುದೇ ಜಾತಿ ಜನಾಂಗದವರನ್ನು ಬಿಜೆಪಿ ಕಡೆಗಣನೆ ಮಾಡಿಲ್ಲ. ಧಾರವಾಡ ಜಿಲ್ಲೆಯಲ್ಲಿಯೇ ಎಳು ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದೆ ಎಂದು ಅವರು ಹೇಳಿದರು.
ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದಲ್ಲದೇ ಸೂಕ್ತ ಸ್ಥಾನಮಾನವನ್ನು ಕೂಡ ನೀಡಿ ಗೌರವಯುತವಾಗಿ ನಡೆಸಿಕೊಂಡು ಬಂದಿದೆ. ರಾಜ್ಯದ ಇತಿಹಾಸವನ್ನು ನೋಡುವುದಾದರೇ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಅಲ್ಲದೆ ಯಾವುದೇ ರೀತಿಯಲ್ಲಿ ಕಡೆಗಣನೆ ಮಾಡಿಲ್ಲ ಎಂದು ಅವರು ಹೇಳಿದರು.