ಮಂಡ್ಯ: ಜೆಡಿಎಸ್ ಮುಖಂಡನ ಹತ್ಯೆಗೆ ಯತ್ನ

Update: 2023-08-12 07:18 GMT

ಜೆಡಿಎಸ್‌ ಮುಖಂಡ ಅಪ್ಪು ಗೌಡ 

ಮಂಡ್ಯ, ಆ.12: ಜೆಡಿಎಸ್ ಮುಖಂಡ ಅಪ್ಪು ಗೌಡರ ಮೇಲೆ ಬೆಳ್ಳಂಬೆಳಿಗ್ಗೆ ಗುಂಪೊಂದು ದಾಳಿ ಮಾಡಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಮದ್ದೂರು ಪಟ್ಟಣದಲ್ಲಿ ಶನಿವಾರ ವರದಿಯಾಗಿದೆ.

ಮದ್ದೂರಿನ ಹೊರವಲಯದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇವಾಲಯದ ಬಳಿ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರದಿಂದ ದಾಳಿ ಮಾಡಿದ್ದು, ಸ್ಥಳದಲ್ಲಿದ್ದವರು ದುಷ್ಕೃತ್ಯ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಅಪ್ಪಿ ಗೌಡರ ಕತ್ತು, ಹೊಟ್ಟೆ, ಕೈ ಹಾಗೂ ಬೆನ್ನಿಗೆ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶನಿವಾರ ಬೆಳಗ್ಗೆ ಪೂಜೆಗೆ ಹೋಗಿದ್ದ ಜೆಡಿಎಸ್ ಮುಖಂಡ ಅಪ್ಪು ಗೌಡ ಪೂಜೆ ಸಲ್ಲಿಸುತ್ತಿದ್ದ ವೇಳೆ ಮೇಲೆ ಐದಾರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾರೆನ್ನಲಾಗಿದೆ.

ದೇವಾಲಯದಲ್ಲಿದ್ದ ಪೊಲೀಸ್ ಮುಖ್ಯ ಪೇದೆ ಕುಮಾರಸ್ವಾಮಿ ಮತ್ತು ಭಕ್ತರ ಗುಂಪು ತಕ್ಷಣ ಎಚ್ಚೆತ್ತು ಸ್ಥಳದಲ್ಲಿದ್ದ ಕಲ್ಲುಗಳನ್ನು ತೂರಿದ್ದು, ದೊಣ್ಣೆಗಳನ್ನು ಹಿಡಿದು ದುಷ್ಕರ್ಮಿಗಳತ್ತ ಎಸೆದು ಓಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆನ್ನಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಅಪ್ಪು ಪಿ ಗೌಡರನ್ನ ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ದೇವಾಲಯದಲ್ಲಿದ್ದ ಭಕ್ತರ ಸಹಕಾರದಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯಕ್ಕೆ ರವಾನಿಸಿದ್ದಾರೆ.

ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರತಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜೆಗೆ ಬಂದಿದ್ದರು. ಈ ಘಟನೆಯಿಂದ ಭಕ್ತಾದಿಗಳು ಕೆಲಕಾಲ ಆತಂಕಕ್ಕೆ ಒಳಗಾಗಿರುವುದು ಕಂಡು ಬಂತು.

ಸ್ಥಳಕ್ಕೆ ಮದ್ದೂರು ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಇಡೀ ಕೃತ್ಯದ ಘಟನಾವಳಿಗಳು ದೇವಾಲಯದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೋಲೀಸರ ತನಿಖೆಯಿಂದ ಘಟನೆ ಬಗ್ಗೆ ತಿಳಿದುಬರಲಿದೆ.




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News