ಜಾಗತಿಕ ಸೆಮಿಕಂಡಕ್ಟರ್ ಕಂಪೆನಿಗಳ ಜೊತೆ ಎಂ.ಬಿ.ಪಾಟೀಲ್ ಸರಣಿ ಸಭೆ

Update: 2024-10-01 14:14 GMT

ನ್ಯೂಯಾರ್ಕ್ : ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅಮೆರಿಕಾಗೆ ಭೇಟಿ ನೀಡಿದ್ದು, ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಜಾಗತಿಕ ಕಂಪನಿಗಳ ಮುಖ್ಯಸ್ಥರ ಜೊತೆ ಸರಣಿ ಮಾತುಕತೆ ನಡೆಸಿದ್ದಾರೆ.

ಕರ್ನಾಟಕದ ಸೆಮಿಕಂಡಕ್ಟರ್ ಉದ್ದಿಮೆಗೆ ಚೇತರಿಕೆ ನೀಡುವ ಉದ್ದೇಶದಿಂದ, ಅಮೆರಿಕದ ಸೆಮಿಕಂಡಕ್ಟರ್ ವಲಯದ ನಾಲ್ಕು ಪ್ರಮುಖ ಕಂಪನಿಗಳಾದ ಯುಜೆನಸ್ ಟೆಕ್ನಾಲಜಿ, ಲ್ಯಾಮ್ ರಿಸರ್ಚ್, ಅಲ್ಫಾವೇವ್ ಸೆಮಿ ಮತ್ತು ಎಂಐಪಿಎಸ್ ಟೆಕ್ನಾಲಜೀಸ್‍ನ ಉನ್ನತ ಅಧಿಕಾರಿಗಳ ಜೊತೆ ಎಂ.ಬಿ.ಪಾಟೀಲ್ ಸಮಾಲೋಚನೆ ನಡೆಸಿದ್ದಾರೆ.

ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಈ ಉದ್ದಿಮೆಗಳ ಪ್ರಮುಖರಿಗೆ ಎಂ.ಬಿ.ಪಾಟೀಲ್, ಇದೇ ಸಂದರ್ಭದಲ್ಲಿ ಔಪಚಾರಿಕ ಆಹ್ವಾನವನ್ನೂ ನೀಡಿದ್ದಾರೆ.

ಯುಜೆನಸ್‍ನ ಸಿಇಒ ಜೆಡಬ್ಲ್ಯು ಕಿಮ್ ಅವರ ಜೊತೆಗಿನ ಸಭೆಯಲ್ಲಿ, ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದನ್ನು ವಿವರಿಸಿದ ಎಂ.ಬಿ.ಪಾಟೀಲ್, ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಸೆಮಿಕಂಡಕ್ಟರ್ ಉದ್ಯಮಕ್ಕೆ ನೆರವಾಗಲು, ಸುಧಾರಿತ ಸೆಮಿಕಂಡಕ್ಟರ್ ತಯಾರಿಕಾ ಉಪಕರಣಗಳನ್ನು ಒದಗಿಸುವಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ಇರುವ ಯುಜೆನಸ್ ಟೆಕ್ನಾಲಜಿಯ ಪರಿಣತಿ ಬಳಸಿಕೊಳ್ಳುವ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.

ಲ್ಯಾಮ್ ರಿಸರ್ಚ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ಯಾಟ್ ಲಾರ್ಡ್ ಅವರ ಭೇಟಿ ಸಂದರ್ಭದಲ್ಲಿ ಸಚಿವರು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕವು ಮಹತ್ವದ ಪಾತ್ರ ನಿರ್ವಹಿಸಲಿರುವುದನ್ನು ಮನದಟ್ಟು ಮಾಡಿಕೊಟ್ಟರು.

ವೇಫರ್ ಫ್ಯಾಬ್ರಿಕೇಷನ್ ಉಪಕರಣಗಳ ಜಾಗತಿಕ ಪೂರೈಕೆ ಕಂಪನಿಯಾಗಿರುವ ಲ್ಯಾಮ್ ರಿಸರ್ಚ್ ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಸಿಸ್ಟಮ್ಸ್ ಲ್ಯಾಬ್ ಆರಂಭಿಸಿದೆ. ಆಲ್ಫಾವೇವ್ ಸೆಮಿಯ ಸಿಇಒ ಟೋನಿ ಪಿಯಾಲಿಸ್ ಅವರ ಜೊತೆಗಿನ ಭೇಟಿಯಲ್ಲಿ ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಉದ್ದಿಮೆಯನ್ನು ಸದೃಢವಾಗಿ ಬೆಳೆಸುವುದಕ್ಕೆ ಇರುವ ಸಹಯೋಗದ ಮಾರ್ಗೋಪಾಯಗಳ ಕುರಿತು ಚರ್ಚಿಸಿದರು.

ದತ್ತಾಂಶ ಮೂಲಸೌಲಭ್ಯಗಳ ಸಂಪರ್ಕ ಪರಿಹಾರಗಳಲ್ಲಿ ಅಗ್ರಗಣ್ಯವಾಗಿರುವ ಅಲ್ಫಾವೇವ್ ಸೆಮಿ, ಕರ್ನಾಟಕದ ಸೆಮಿಕಂಡಕ್ಟರ್ ಉದ್ಯಮದ ಭವಿಷ್ಯದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಲು ತೀವ್ರ ಆಸಕ್ತಿ ವ್ಯಕ್ತಪಡಿಸಿದೆ. ಪಾಲೊ ಆಲ್ಟೊದಲ್ಲಿ ಎಂಐಪಿಎಸ್ ಟೆಕ್ನಾಲಜೀಸ್‍ನ ಸಿಇಒ ಸಮೀರ್ ವಾಸನ್ ಅವರನ್ನು ಭೇಟಿಯಾದ ಸಚಿವರು ರಾಜ್ಯದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ನಾವೀನ್ಯತೆಗೆ ಪೂರಕ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತುಕತೆ ನಡೆಸಿದರು.

ದುಂಡುಮೇಜಿನ ಸಭೆ: ಅಮೆರಿಕ-ಭಾರತ ಕಾರ್ಯತಂತ್ರ ಪಾಲುದಾರಿಕೆ ವೇದಿಕೆಯು (ಯುಎಸ್‍ಐಎಸ್‍ಪಿಎಫ್) ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಅಮೆರಿಕದ ಪ್ರಮುಖ ಕಂಪನಿಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಎಂ.ಬಿ.ಪಾಟೀಲ್ ಮಾತನಾಡಿದರು.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತದ ಕಾನ್ಸುಲ್ ಜನರಲ್ ಶ್ರೀಕರ್ ರೆಡ್ಡಿ ಅವರೂ ಈ ಸಭೆಯಲ್ಲಿ ಭಾಗವಹಿಸಿದ್ದರು. ಅಮೆರಿಕ ಮತ್ತು ಕರ್ನಾಟಕದ ನಡುವಣ ಬಹುಬಗೆಯ ಸಹಯೋಗ ಹಾಗೂ ಬಾಂಧವ್ಯ ವೃದ್ಧಿ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.

ಉದ್ಯಮಿಗಳ ಭೇಟಿ ಹಾಗೂ ಸಮಾಲೋಚನೆ ಸಭೆಗಳಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ್ ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News