ದಾವೋಸ್ ‘ವಿಶ್ವ ಆರ್ಥಿಕ ಶೃಂಗಸಭೆ’ಗೆ ಎಂ.ಬಿ. ಪಾಟೀಲ್ ನೇತೃತ್ವದ ನಿಯೋಗ
ಬೆಂಗಳೂರು: ಸ್ವಿಟ್ಜರ್ ಲ್ಯಾಂಡ್ ನ ದಾವೋಸ್ನಲ್ಲಿ ಜ.15ರಿಂದ 19ರ ವರೆಗೆ ನಡೆಯುವ ‘ವಿಶ್ವ ಆರ್ಥಿಕ ವೇದಿಕೆ-2024’ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗ ರವಿವಾರ (ಜ.14) ಪ್ರಯಾಣ ಬೆಳೆಸಲಿದೆ.
‘ನಾವೀನ್ಯತೆ ಭವಿಷ್ಯ ರೂಪಿಸುತ್ತದೆ’ (ಇನ್ನೋವೇಷನ್ ವಿಲ್ ಇಂಪ್ಯಾಕ್ಟ್) ಎಂಬ ಧ್ಯೇಯವಾಕ್ಯದೊಂದಿಗೆ ತೆರಳುತ್ತಿರುವ ಈ ನಿಯೋಗದಲ್ಲಿ ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಐಟಿಬಿಟಿ ಕಾರ್ಯದರ್ಶಿ ಏಕ್ರೂಪ್ ಕೌರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಮತ್ತಿತರರು ಇದ್ದಾರೆ.
ಈ ಶೃಂಗಸಭೆಯ ವೇಳೆ ಕರ್ನಾಟಕ ಸರ್ಕಾರದ ಉದ್ಯಮಸ್ನೇಹಿ ನೀತಿಗಳು, ಇಲ್ಲಿನ ಉತ್ತಮ ಕಾರ್ಯಪರಿಸರ, ಹೂಡಿಕೆಗೆ ಅವಕಾಶವಿರುವ ಕ್ಷೇತ್ರಗಳು, ಮಾನವ ಸಂಪನ್ಮೂಲ ಲಭ್ಯತೆ, ಕೌಶಲ್ಯ ಕಲಿಸಲು ನೀಡುತ್ತಿರುವ ಆದ್ಯತೆ, ಸಿಂಗಲ್ ವಿಂಡೋ ವ್ಯವಸ್ಥೆ ಸೇರಿದಂತೆ ಇಲ್ಲಿನ ಇನ್ನಿತರ ಅನುಕೂಲಗಳ ಬಗ್ಗೆ ಪ್ರಪಂಚದ ಬೇರೆ ಬೇರೆ ಭಾಗದ ಉದ್ಯಮಿಗಳ ಗಮನ ಸೆಳೆಯಲಾಗುವುದು ಎಂದು ನಿಯೋಗದ ಮುಖ್ಯಸ್ಥ ಎಂ.ಬಿ. ಪಾಟೀಲ್ ಶನಿವಾರ ತಿಳಿಸಿದ್ದಾರೆ.
ರಾಜ್ಯವನ್ನು ಏಷ್ಯಾದ ಪ್ರಮುಖ ತಯಾರಿಕಾ ವಲಯವನ್ನಾಗಿ ಬೆಳೆಸುವ ಗುರಿ ಸರಕಾರದ್ದಾಗಿದೆ. ಇದರ ಜೊತೆಗೆ, ಸೆಮಿಕಂಡಕ್ಟರ್, ವಿದ್ಯುತ್ ವಾಹನೋದ್ಯಮ, ಬಾಹ್ಯಾಕಾಶ ಮತ್ತು ರಕ್ಷಣೆ, ಸ್ವಚ್ಛ ಇಂಧನ, ಸಂಶೋಧನೆ ಮತ್ತು ಅಭಿವೃದ್ಧಿ, ಕೃತಕ ಬುದ್ಧಿಮತ್ತೆ ಮತ್ತಿತರ ಆಧುನಿಕ ತಂತ್ರಜ್ಞಾನಗಳು ಇವುಗಳಿಗೆ ನಾವು ಒತ್ತು ಕೊಟ್ಟಿದ್ದೇವೆ. ಇದನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ಹೂಡಿಕೆ ಸೆಳೆಯುವುದು ಹಾಗೂ ಇದಕ್ಕೆ ಪೂರಕವಾಗಿ ಸಹಭಾಗಿತ್ವಗಳನ್ನು ಸಾಧಿಸುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.