ಕರ್ನಾಟಕದ ರಾಯಭಾರಿಗಳಾಗಿ ಹೂಡಿಕೆ ತರುವಂತೆ ಜಪಾನ್ ಉದ್ಯಮಿಗಳಿಗೆ ಸಚಿವ ಎಂ.ಬಿ.ಪಾಟೀಲ್ ಕರೆ

Update: 2024-07-11 14:44 GMT

ಬೆಂಗಳೂರು: ಜಪಾನ್ ನಿಂದ ರಾಜ್ಯಕ್ಕೆ ಹೆಚ್ಚಿನ ಹೂಡಿಕೆ ತರಲು ಪೂರಕವಾಗಿ ಈಗಾಗಲೇ ಹೂಡಿಕೆ ಮಾಡಿರುವ ಜಪಾನ್ ದೇಶದ ಕಂಪನಿಗಳೆ ಕರ್ನಾಟಕದ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕರೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಜಪಾನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (ಜೆಸಿಸಿಐ) ಇಲ್ಲಿ ಏರ್ಪಡಿಸಿದ್ದ ರಾಜ್ಯದಲ್ಲಿ ನೆಲೆಯೂರಿರುವ ಜಪಾನ್ ಮೂಲದ ಉದ್ಯಮ ಸಂಸ್ಥೆಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಹೇಗೆ ಹೂಡಿಕೆ ಸ್ನೇಹಿ? ಇಲ್ಲಿ ಲಭ್ಯ ಇರುವ ಮಾನವ ಸಂಪನ್ಮೂಲ, ಕಾನೂನು ಸುವ್ಯವಸ್ಥೆ, ಹವಾಮಾನ ಇತ್ಯಾದಿ ವಿಷಯಗಳ ಬಗ್ಗೆ ತಮ್ಮ ದೇಶದ ಇತರ ಕಂಪನಿಗಳಿಗೂ ತಿಳಿಸುವಂತೆ ಕರೆ ನೀಡಿದರು.

ತಮ್ಮ ನೇತೃತ್ವದ ನಿಯೋಗ ಇತ್ತೀಚೆಗಷ್ಟೇ ಜಪಾನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಸ್ಪರ ಲಾಭದ ಅವಕಾಶಗಳಿರುವ ಹಲವಾರು ಹೂಡಿಕೆ ಸಾಧ್ಯತೆಗಳನ್ನು ಗುರುತಿಸಲಾಯಿತು. ಅದೊಂದು ಫಲಪ್ರದವಾದ ಭೇಟಿಯಾಗಿತ್ತು. ಇದೇ ವೇಳೆ, ಜಪಾನ್ ನ ಹಲವಾರು ಅಂಶಗಳು, ಅದರಲ್ಲೂ ಅಲ್ಲಿನ ಸಾರಿಗೆ ವ್ಯವಸ್ಥೆ ವೈಯಕ್ತಿಕವಾಗಿ ತಮಗೆ ಅತ್ಯಂತ ಹೆಚ್ಚಿನ ಅಚ್ಚರಿ ಮೂಡಿಸಿತು ಎಂದು ಅವರು ವಿವರಿಸಿದರು.

ಮುಂಬರುವ ಫೆ.12-14ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಎಲ್ಲ ಉದ್ಯಮ ಪ್ರತಿನಿಧಿಗಳಲ್ಲಿ ಎಂ.ಬಿ.ಪಾಟೀಲ್ ಮನವಿ ಮಾಡಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಮಾತನಾಡಿ, ಹೂಡಿಕೆ ಆಧಾರದ ಮೇಲೆ ರಿಯಾಯಿತಿಗಳನ್ನು ನೀಡುವ ವ್ಯವಸ್ಥೆ ರೂಪಿಸಲಾಗಿದ್ದು, ತಮ್ಮ ದೇಶದ ಇತರ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವ ಹಾಗೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಜಪಾನ್ ಕಾನ್ಸುಲೇಟ್ ಜನರಲ್ ಟ್ಸುಟೊಮು ನಕಾನೆ, ಉಪ ಕಾನ್ಸುಲೇಟ್ ಜನರಲ್ ಹೊಕುಟೊ ಕಾಯ ಸೇರಿದಂತೆ ನೂರಕ್ಕೂ ಹೆಚ್ಚು ಜಪಾನಿ ಉದ್ಯಮಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News