ಪೊಲೀಸರ ಮೇಲಿನ ಶಾಸಕ ಹರೀಶ್ ಪೂಂಜಾ ಅವರ ಗೂಂಡಾ ವರ್ತನೆ ಅಕ್ಷಮ್ಯ : ದಿನೇಶ್‌ ಗುಂಡೂರಾವ್‌

Update: 2024-05-19 14:43 GMT

ದಿನೇಶ್‌ ಗುಂಡೂರಾವ್‌ / ಹರೀಶ್‌ ಪೂಂಜಾ

ಬೆಂಗಳೂರು : ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದ ಬಿಜೆಪಿಯ ಯುವಮೋರ್ಚಾ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರ ವಿರುದ್ಧ ಶಾಸಕ ಹರೀಶ್ ಪೂಂಜಾ ತೋರಿರುವ ಗೂಂಡಾ ವರ್ತನೆ ಅಕ್ಷಮ್ಯ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, "ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದ ಬಿಜೆಪಿಯ ಯುವಮೋರ್ಚಾ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡರೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್‌ ಪೂಂಜಾ ಅವರು ಅಕ್ರಮ ಲೂಟಿಕೋರರ ಪರ ನಿಂತು ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸರ ವಿರುದ್ಧವೇ ಗೂಂಡಾ ವರ್ತನೆ ತೋರಿದ್ದಾರೆ " ಎಂದು ಹೇಳಿದ್ದಾರೆ.

"ಪೊಲೀಸರ ಮೇಲಿನ ಶಾಸಕ ಹರೀಶ್ ಪೂಂಜಾ ಅವರ ಈ ಗೂಂಡಾ ವರ್ತನೆ ಅಕ್ಷಮ್ಯ. ಸ್ವತಃ ಬಿಜೆಪಿ ಶಾಸಕರೇ ಮುಂದೆ ನಿಂತು ಸರ್ಕಾರಿ ಅಧಿಕಾರಿಗಳಿಗೆ ಕಾನೂನಾತ್ಮಕವಾಗಿ ಕೆಲಸ ಮಾಡಲು ಅಡ್ಡಿಪಡಿಸುವ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಮಾಜದ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ಇಲ್ಲ. ಶಾಸಕರಾಗಿ ಪೊಲೀಸರ ಕಾರ್ಯಕ್ಕೆ ಅಡ್ಡಿ ಪಡಿಸಿ ಈ ರೀತಿ ಗೂಂಡಾಗಿರಿ ತೋರಿರುವುದು ಎಷ್ಟು ಸರಿ. ಸಮಾಜ ಘಾತುಕರ ಪರ ನಿಂತು ಬಿಜೆಪಿ ಶಾಸಕರು ರಾಜಕಾರಣ ಮಾಡುತ್ತಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ" ಎಂದು ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News