ಸಚಿವ ಸ್ಥಾನದಿಂದ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಲು ಯತ್ನ : ನಿಖಿಲ್ ಕುಮಾರಸ್ವಾಮಿ

Update: 2024-08-25 13:27 GMT

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರು ಯಾವ ಕಾರಣಗಳಿಂದಲೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ರವಿವಾರ ಜೆಪಿ ಭವನದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣಾ ಸಿದ್ಧತೆಯ ಸಭೆ ಬಳಿಕ ಮಾತನಾಡಿದ ಅವರು, 'ಕೇಂದ್ರ ಸಚಿವ ಸ್ಥಾನದಿಂದ ಕುಮಾರಸ್ವಾಮಿಯವರನ್ನು ಇಳಿಸಲು ಕಾಂಗ್ರೆಸ್ ನಾಯಕರಿಂದ ಯೋಜನೆ ರೂಪಿಸಿದ್ದಾರೆ. ಆದರೆ ಅದು ಸಾಧ್ಯವಿಲ್ಲದ ಮಾತು ಎಂದರು.

ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡಿದರೂ ಮುಡಾ ವಿಚಾರ ದೇಶಾದ್ಯಂತ ಚರ್ಚೆ ಆಗುತ್ತಿದೆ. ಮುಡಾ ಸಂಬಂಧ ಪ್ರತಿದಿನ ಒಂದಿಲ್ಲೊಂದು ದಾಖಲೆ ಹೊರಬರುತ್ತಿದೆ. ಸಿಎಂ ಪತ್ನಿ ವಿಜಯನಗರದಲ್ಲಿ ನಿವೇಶನ ಪ್ರಕ್ರಿಯೆ ಕುರಿತ ಪತ್ರ ಬಿಡುಗಡೆಯಾಗಿದೆ. ಆದರೆ, ಕೇವಲ ಜನತೆಯ ದಿಕ್ಕು ತಪ್ಪಿಸಲು ನಮ್ಮ ತಂದೆಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ಕೋರಲಾಗಿದೆ. ಇದು ಮುಡಾ ಹಗರಣ ಮುಚ್ಚಿಹಾಕುವ ಯತ್ನದ ಒಂದು ಭಾಗವಷ್ಟೇ ಎಂದು ಟೀಕಿಸಿದರು.

ಕುಮಾರಸ್ವಾಮಿಗೆ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಕಳೆದ ಎರಡು ಬಾರಿ ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಹಾಗಾಗಿ, ಪಕ್ಷದ ಧ್ವನಿಯಾಗಿ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣಕ್ಕೆ ಶೀಘ್ರದಲ್ಲೇ ಉಪಚುನಾವಣೆ ಘೋಷಣೆ ಆಗಲಿದೆ. ಆ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಮುಖಂಡರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಬೇಕು ಎನ್ನುವುದು ಕಾರ್ಯಕರ್ತರ ಬಯಕೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News