ಜಾತಿ ಜನಗಣತಿ ಬಿಡುಗಡೆ ಮಾಡಿದರೆ ಕಾಂಗ್ರೆಸ್ ಸರಕಾರವೇ ಇರಲ್ಲ: ಕೆ.ಎಸ್‌ ಈಶ್ವರಪ್ಪ

Update: 2023-11-30 09:09 GMT

ಹಾವೇರಿ: ಜಾತಿ ಜನಗಣತಿ ಗೊಂದಲ ಸೃಷ್ಟಿ ಮಾಡಿದ್ದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ. ಜಾತಿ ಜನಗಣತಿ ಬಿಡುಗಡೆ ಮಾಡಿದ್ರೆ ಅವತ್ತೇ ಕಾಂಗ್ರೆಸ್ ಸರಕಾರ ಇರಲ್ಲ ಎಂದು ಮಾಜಿ ಸಚಿವ ಕೆ. ಎಸ್‌ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು,  ‌ಕಾಂಗ್ರೆಸ್ ಪಕ್ಷದಲ್ಲಿ ಬಗೆಹರಿಯಲಾರದ ಗೊಂದಲವಿದೆ. ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಅಂತ ಕೈ ಶಾಸಕರೇ ತಿರುಗಿ ಬಿದ್ದಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕರ್ನಾಟಕ ಸರಕಾರ ʼಕೈʼ ಹೈಕಮಾಂಡ್ ಗೆ ಎಟಿಎಂ ಆಗಿದೆ ಎಂದು ಲೇವಡಿ ಮಾಡಿದರು.

ಲೋಕಸಭಾ ಚುನಾವಣೆ ಮೊದಲು ಅಥವಾ ನಂತರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೈಲಿಗೆ ಹೋಗೋದು ಖಚಿತ. ಆದರೆ ಯಾವಾಗ ಹೋಗುತ್ತಾರೆ ಎಂಬುವುದು ತೀರ್ಮಾನವಾಗಬೇಕಷ್ಟೆ. ಸಿಬಿಐ ತನಿಖೆ ಮುಂದುವರಿಸಲು ಅಭ್ಯಂತರ ಇಲ್ಲ ಎಂದು ಕೋರ್ಟ್ ಹೇಳಿದೆ. ಮೇಲ್ನೋಟಕ್ಕೆ ಡಿಕೆಶಿ ಅಕ್ರಮ ಹಣ ಸಂಪಾದನೆ ಮಾಡಿರುವುದು ಬಹಿರಂಗ ಆಗಿದೆ. ನೂರಾರು ಕೋಟಿ ಹಣ ಸಿಕ್ಕಿರುವುದು ಇಡೀ ರಾಜ್ಯದ ಜನ ನೋಡಿದ್ದಾರೆ. ಸಿಬಿಐ ತನಿಖೆ ಆಗಿದೆ, ಅವರು ಜೈಲಿಗೆ ಹೋಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಹೇಳಿದರು.

ಹಿಂದಿನ ಬಿಜೆಪಿ ಸರ್ಕಾರ ಸಾಲ ಮಾಡಿದೆ ಅಂತ ಗೊತ್ತಿದ್ದರೂ ಬಡ ಜನರಿಗೆ ಮೋಸ ಮಾಡಲೆಂದೇ ಗ್ಯಾರಂಟಿಗಳನ್ನು ಯಾಕೆ ಘೋಷಣೆ ಮಾಡಿದ್ದೀರಾ ಎಂದು ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News