ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣ | ಎಲ್ಲಾ ಆಯಾಮಗಳಲ್ಲೂ ತನಿಖೆ: ಸಚಿವ S.S.ಮಲ್ಲಿಕಾರ್ಜುನ್
ದಾವಣಗೆರೆ: ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಬೆಂಗಳೂರು ಗ್ರಾಮಾಂತರ ಉಪ ನಿರ್ದೇಶಕಿ ಪ್ರತಿಮಾ ಹತ್ಯೆ ಪ್ರಕರಣದಲ್ಲಿ ಹಲವಾರು ಸಂಶಯಗಳಿದ್ದು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಲಾಗುವುದು. ಜೊತೆಗೆ ನಿನ್ನೆಯೇ ಇಲಾಖೆಯ ವಿಡಿಯೋ ಕಾನ್ಪರೆನ್ಸ್ ನಲ್ಲಿ ಪ್ರತಿಮಾ ಅವರು ಭಾಗಿ ಆಗಿದ್ದರು. ಅವರು ಒಳ್ಳೆಯ ಅಧಿಕಾರಿಯಾಗಿದ್ದರು'' ಎಂದು ವಿವರಿಸಿದರು.
''ಹತ್ಯೆಗೆ ಸಂಬಂಧಿಸಿದಂತೆ ಯಾರಿಗೂ ನಿಖರವಾದ ಮಾಹಿತಿ ಗೊತ್ತಾಗಿಲ್ಲ. ಕೆಲವರು ಕೌಟುಂಬಿಕವಾಗಿ ಸಮಸ್ಯೆಗಳಿದ್ದವು ಎಂದು ಹೇಳಿದರೆ, ಮತ್ತೆ ಕೆಲವರು ಸಮಸ್ಯೆ ಇರಲಿಲ್ಲ ಅಂತಾನೂ ಮಾಹಿತಿ ನೀಡುತ್ತಿದ್ದಾರೆ. ಹತ್ಯೆ ಕುರಿತಂತೆ ಪೂರ್ತಿ ತನಿಖೆ ನಡೆದ ಬಳಿಕವಷ್ಟೇ ಸತ್ಯಾಸತ್ಯತೆ ಗೊತ್ತಾಗಲಿದೆ'' ಎಂದು ಮಲ್ಲಿಕಾರ್ಜುನ್ ತಿಳಿಸಿದರು.
''ಎಲ್ಲರಿಗೂ ಪೊಲೀಸ್ ಭದ್ರತೆ ಕೊಡಲು ಆಗಲ್ಲ''
ಅಧಿಕಾರಿಗಳಿಗೆ ಭದ್ರತೆ ಇಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ''ಎಲ್ಲರಿಗೂ ಪೊಲೀಸ್ ಭದ್ರತೆ ಕೊಡಲು ಆಗಲ್ಲ. ಈ ಪ್ರಕರಣವೇ ಬೇರೆ. ತನಿಖೆ ಆಗಲಿ'' ಎಂದರು.