ʼ ಎವಿಜಿಸಿ ʼ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ: ಸಚಿವ ಪ್ರಿಯಾಂಕ್ ಖರ್ಗೆ

Update: 2024-01-31 14:28 GMT

ಬೆಂಗಳೂರು : ಅನಿಮೇಷನ್, ವಿಶ್ಯುವಲ್ ಎಫೆಕ್ಟ್, ಗೇಮಿಂಗ್ ಹಾಗೂ ಕಾಮಿಕ್ ಕ್ಷೇತ್ರದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿಸಿ, ಉತ್ತಮ ಅವಕಾಶ ಕಲ್ಪಿಸಲು ಯೋಜಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿರುವ ಎವಿಜಿಸಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಡಿಜಿಟಲ್ ಆರ್ಟ್ ಸೆಂಟರ್ ಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಅವರು ಸಂವಾದ ನಡೆಸಿದರು.

ಇಂದು ಮಾರುಕಟ್ಟೆಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉದ್ಯೋಗಗಳೊಂದಿಗೆ ನೈಪುಣ್ಯತೆಯನ್ನು ಉಳಿಸಿಕೊಳ್ಳುವುದು ಏಕೈಕ ಮಾರ್ಗವಾಗಿದೆ. ಡಿಜಿಟಲ್ ಆರ್ಟ್ ಕೇಂದ್ರಗಳೊಂದಿಗಿನ ನಮ್ಮ ಉದ್ದೇಶ ಉದ್ಯಮ ಹಾಗೂ ಅಕಾಡೆಮಿಯ ಅಂತರವನ್ನು ಕಡಿಮೆ ಮಾಡುವುದಾಗಿದೆ. ಎಲ್ಲ ಕೇಂದ್ರಗಳಲ್ಲಿ ಹೆಚ್ಚು ಅರ್ಹ ತರಬೇತಿ ಸೌಲಭ್ಯವನ್ನು ಒದಗಿಸುವುದು ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಹೊಸ ಮತ್ತು ಉತ್ತಮ ಅವಕಾಶಗಳನ್ನು ಸೃಷ್ಟಿಸುವುದಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದ ಎಲ್ಲ 28 ಕಾಲೇಜುಗಳ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆದ ಜಿಎಎಫ್‍ಎಕ್ಸ್ 2024 ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯವು ಈಗಾಗಲೇ 300ಕ್ಕೂ ಹೆಚ್ಚು ವಿಶೇಷವಾದ ಎವಿಜಿಸಿ ಮತ್ತು ಎಕ್ಸ್ ಆರ್ (ವಿಸ್ತೃತ ರಿಯಾಲಿಟಿ) ಪ್ಲೇಯರ್ ಗಳನ್ನು ಹೊಂದಿದೆ ಮತ್ತು 15,000 ವೃತ್ತಿಪರರನ್ನು ನೇಮಿಸಿಕೊಳ್ಳುವ ಸ್ಟುಡಿಯೋಗಳನ್ನು ಹೊಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಎಬಿಎಐ ವಿಶೇಷ ಯೋಜನೆಗಳ ನಿರ್ದೇಶಕ ಬಿ.ಎಸ್.ಶ್ರೀನಿವಾಸ್ ಮಾತನಾಡಿ, ತಂತ್ರಜ್ಞಾನ ಗೊತ್ತಿಲ್ಲದ ಸಾಂಪ್ರದಾಯಿಕ ಕಲಾವಿದರಿಗೆ ಡಿಜಿಟಲ್ ಮಾನ್ಯತೆ ನೀಡಲು ಡಿಎಸಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಡಿಎಸಿಯೊಂದಿಗೆ, ನಾವು ಅವರಿಗೆ ತರಬೇತಿ ಸೌಲಭ್ಯಗಳು ಮತ್ತು ತರಬೇತುದಾರರನ್ನು ಒದಗಿಸುವ ಮೂಲಕ ಕೈ ಹಿಡಿಯುವ ಕೆಲಸ ಮಾಡಿದ್ದೇವೆ ಎಂದರು.

ನಮ್ಮ ಉದ್ದೇಶವು ವಿದ್ಯಾರ್ಥಿಗಳಿಗೆ ಉದ್ಯೋಗದ ಅವಕಾಶಗಳನ್ನು ಸುಧಾರಿಸುವುದು, ಕೌಶಲ್ಯ ಅಭಿವೃದ್ಧಿಯನ್ನು ಮಾಡುವುದು ಮತ್ತು ಸ್ಟುಡಿಯೊಗಳು ಸಾಂಪ್ರದಾಯಿಕ ಕಲೆಯ ಹಿನ್ನೆಲೆಯೊಂದಿಗೆ ನುರಿತ ಆನಿಮೇಟರ್ ಗಳನ್ನು ಪಡೆಯಲು ಸಹಾಯ ಮಾಡುವುದು. ಇಲ್ಲಿಯವರೆಗೆ, ನಾವು ಡಿಎಸಿಯ 27 ಕೇಂದ್ರಗಳನ್ನು ಸ್ಥಾಪಿಸಲು ಸಮರ್ಥರಾಗಿದ್ದೇವೆ ಮತ್ತು ರಾಜ್ಯ ಸರಕಾರದ ಐಟಿ-ಬಿಟಿ ವಿಭಾಗದ ಬೆಂಬಲದೊಂದಿಗೆ ನಾವು ಇನ್ನೂ ಹೆಚ್ಚಿನದನ್ನು ಪರಿವರ್ತಿಸುವ ಗುರಿ ಹೊಂದಿದ್ದೇವೆ ಎಂದು ಅವರು ತಿಳಿಸಿದರು.

ರಾಜ್ಯಾದ್ಯಂತ ಲಲಿತಕಲಾ ಕಾಲೇಜುಗಳಲ್ಲಿ ಡಿಜಿಟೈಸೇಶನ್ ಆಫ್ ಆರ್ಟ್ ಕಾಲೇಜುಗಳ (ಡಿಎಸಿ) ಕಾರ್ಯಕ್ರಮವನ್ನು ಇಲಾಖೆಯು ಎಬಿಎಐ ಸಹಯೋಗದೊಂದಿಗೆ ಅನುಷ್ಠಾನ ಗೊಳಿಸುತ್ತಿದೆ. ಇದು ರಾಜ್ಯದ ಎಲ್ಲ ಲಲಿತಕಲಾ ಕಾಲೇಜುಗಳನ್ನು ಡಿಜಿಟಲೀಕರಣಗೊಳಿಸುವ ವಿಶಿಷ್ಟ ಉಪಕ್ರಮವಾಗಿದೆ. ಇಲ್ಲಿಯವರೆಗೆ, 28 ಲಲಿತಕಲಾ ಕಾಲೇಜುಗಳಲ್ಲಿ ಇದನ್ನು ಅಳವಡಿಸಲಾಗಿದೆ ಎಂದು ಶ್ರೀನಿವಾಸ್ ಹೇಳಿದರು.

ಲಲಿತಕಲಾ ಕಾಲೇಜುಗಳಿಗೆ ಪ್ರತಿ ವರ್ಷಕ್ಕೆ ಮೂರು ವರ್ಷಗಳ ಅವಧಿಗೆ ಹಾರ್ಡ್‍ವೇರ್, ಸಾಫ್ಟ್ ವೇರ್ ಮತ್ತು ಪ್ರತಿ ಕಾಲೇಜಿಗೆ 10 ಲಕ್ಷ ರೂಪಾಯಿಗಳ ಆರ್ಥಿಕ ಬೆಂಬಲ ಸೇರಿದಂತೆ ಸುಧಾರಿತ ಡಿಜಿಟಲ್ ತಂತ್ರಜ್ಞಾನದೊಂದಿಗೆ 20 ಆಸನಗಳ ಲ್ಯಾಬ್ ಅನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News