ನಮ್ಮ ಸರಕಾರ ದ್ವೇಷ ರಾಜಕಾರಣ ಮಾಡಿಲ್ಲ : ಗೃಹ ಸಚಿವ ಜಿ.ಪರಮೇಶ್ವರ್

Update: 2024-09-19 14:37 GMT

ಬೆಂಗಳೂರು : ಬಿಜೆಪಿಯವರ ವಿರುದ್ಧ ನಮ್ಮ ಸರಕಾರ ಯಾವುದೇ ದ್ವೇಷ ರಾಜಕಾರಣ ಮಾಡಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದಲ್ಲಿ ನಡೆದ ಗಲಾಟೆ ವಿಚಾರವಾಗಿ ಸುಳ್ಳು ಮಾಹಿತಿ ಹಂಚಿಕೆ ಆರೋಪದಡಿ ಬಿಜೆಪಿ ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ನಮ್ಮ ಸರಕಾರ ಯಾವುದೇ ದ್ವೇಷ ಕಾರಣ ಮಾಡುತ್ತಿಲ್ಲ. ಆದರೆ, ದ್ವೇಷ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ನಾವು ಕಾನೂನು ವಿರುದ್ಧವಾಗಿ ಮಾಡಿದ್ದೇವೆ ಎಂದು ಅವರು ಹೇಳುತ್ತಿರಲಿ ಎಂದರು.

ನಾಗಮಂಗಲ ಗಲಾಟೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಕೆಲವರು ತಪ್ಪು ಹೇಳಿಕೆ ನೀಡಿದ್ದಾರೆ ಎಂದು ನಮ್ಮ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನು ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮುನಿರತ್ನ ವಿರುದ್ಧ ಮಹಿಳೆ ದೂರು ಕೊಟ್ಟ ವಿಚಾರವಾಗಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಕಾನೂನುಬಾಹಿರ ಕೆಲಸ ಮಾಡಿದ್ದರೆ, ಏನು ಕ್ರಮ ಆಗಬೇಕು ಅದು ಆಗುತ್ತದೆ ಎಂದು ಜಿ.ಪರಮೇಶ್ವರ್ ಹೇಳಿದರು.

ಒಂದು ದೇಶ ಒಂದು ಚುನಾವಣೆ ವಿಷಯದ ಬಗ್ಗೆ ಇನ್ನೂ ಬಹಳಷ್ಟು ವಿವರಣೆ ಬರಬೇಕಿದೆ. ಕನಿಷ್ಠ 2/3ರಷ್ಟು ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕಿದೆ. ಈಗ ತಾನೇ ರಾಮನಾಥ್ ಕೋವಿಂದ್ ವರದಿ ಕೊಟ್ಟಿದ್ದಾರೆ. ವರದಿಯನ್ನು ಅಧಿವೇಶನದಲ್ಲಿ ಮಂಡಿಸುತ್ತಾರೆ. ಮುಂದೇನು ಬೆಳವಣಿಗೆ ಆಗುತ್ತದೆಯೋ ನೋಡಬೇಕು. ಅದಾದ ಬಳಿಕ ರಾಜ್ಯಗಳಿಗೆ ಬಂದ ನಂತರ ಅದನ್ನು ವಿಧಾನಸಭೆಗೆ ಒಪ್ಪಿಸಬೇಕಾ? ಅಥವಾ ರಾಜ್ಯಗಳ ಒಪ್ಪಿಗೆ ಬೇಕಾ? ಎಂದು ನೋಡೋಣ ಎಂದು ಜಿ.ಪರಮೇಶ್ವರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News