ವಿದ್ಯುತ್, ನೀರು, ಹಾಲಿನ ದರ ಏರಿಕೆ | ಯುಗಾದಿ ಬಳಿಕ ಬಿಜೆಪಿಯಿಂದ ಹೋರಾಟ: ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು : ಗ್ಯಾರಂಟಿ ಯೋಜನೆಗಳನ್ನು ಕೊಟ್ಟು, ಬಳಿಕ ಬೆಲೆ ಏರಿಕೆ ಮಾಡಿ ಹತ್ತೂ ಕೈಗಳಲ್ಲಿ ಬಾಚಿಕೊಳ್ಳುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಯುಗಾದಿ ಹಬ್ಬದ ಬಳಿಕ ಬಿಜೆಪಿಯಿಂದ ಹೋರಾಟ ಮಾಡಲಾಗುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್, ನೀರು, ಹಾಲಿನ ದರ ಏರಿಸಿ ಸಾಮಾನ್ಯ ಜನರಿಗೆ ತೊಂದರೆಯುಂಟಾಗಿದೆ. ಯುಗಾದಿ ಬಳಿಕ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ರೈತರಿಗೆ ಬಾಕಿ ಸಬ್ಸಿಡಿ ಕೊಟ್ಟಿಲ್ಲ, ಹಾಲಿನ ದರ ಏರಿಸುವಂತೆ ರೈತರು ಹೇಳಿಲ್ಲ. ಹೀಗಿದ್ದರೂ ಹಾಲಿನ ದರ ಏರಿಕೆಗೆ ಮುಂದಾಗಿದೆ. ಪ್ರತಿ ಲೀಟರ್ ಹಾಲಿಗೆ ಸಬ್ಸಿಡಿ 5 ರೂ. ಇತ್ತು. 7 ರೂ. ಕೊಡುತ್ತೇವೆ ಎಂದಿದ್ದರು, ಆದರೆ ಕೊಟ್ಟಿಲ್ಲ. ಈ ಹಿಂದೆ ಕಾಂಗ್ರೆಸ್ ಸಹ ರೈತರಿಗೆ ಬಾಕಿ ಕೊಡದೇ ಬಾಕಿ ಉಳಿಸಿತ್ತು. ಅದನ್ನು ಬಿಜೆಪಿ ಸರಕಾರ ತೀರಿಸಿತ್ತು. ಈಗ ಬಿಜೆಪಿ ಅವಧಿಯಲ್ಲಿದ್ದ ಸಬ್ಸಿಡಿ ಬಾಕಿ ನಾವು ತೀರಿಸಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ ಎಂದು ಆರ್.ಅಶೋಕ್ ಆರೋಪಿಸಿದರು.
ರಾಜ್ಯದಲ್ಲಿ 60 ವರ್ಷ ಕಾಂಗ್ರೆಸ್ ಆಳಿದೆ. ಇದುವರೆಗಿನ ಮುಖ್ಯಮಂತ್ರಿಗಳಲ್ಲಿ ಶೇ.65ರಷ್ಟು ಸಾಲ ಮಾಡಿದ್ದು ಸಿದ್ದರಾಮಯ್ಯ. ಬಜೆಟ್ನಲ್ಲಿ ಕಳ್ಳ ಲೆಕ್ಕ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಬೆಲೆ ಏರಿಕೆಯ ಫೆಸ್ಟಿವಲ್ ಮುಂದೆ ಕಾದಿದೆ. ಸರಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಶುಲ್ಕ ಸೇರಿದಂತೆ ಎಲ್ಲ ದರ ಏರಿಕೆ ಆಗಿದೆ. ಬ್ರ್ಯಾಂಡ್ ಬೆಂಗಳೂರು ಹೋಗಿ ದುಬಾರಿ ಬೆಂಗಳೂರು ಬಂದಿದೆ ಎಂದು ಆರ್.ಅಶೋಕ್ ಟೀಕಿಸಿದರು.
ರಾಜ್ಯವನ್ನೇ ವ್ಹೀಲ್ ಚೇರ್ಗೆ ತಂದ ಸಿದ್ದರಾಮಯ್ಯ: ಹಿಂದಿನ 20 ತಿಂಗಳಲ್ಲಿ ಈ ಸರಕಾರ 20 ಆಟ ಆಡಿದೆ. 2 ಸಾವಿರ ಕೊಟ್ಟು 20 ಸಾವಿರ ವಸೂಲಿ ಮಾಡುತ್ತಿದೆ. ಸಿದ್ದರಾಮಯ್ಯ ಮಾತ್ರವಲ್ಲ ಇಡೀ ರಾಜ್ಯವನ್ನೇ ವ್ಹೀಲ್ ಚೇರ್ ಗೆ ತಂದಿದ್ದಾರೆ. ಯಾವ ಮುಖ ಇಟ್ಟು ಎರಡು ವರ್ಷದ ಸಾಧನೆ ಮಾಡುತ್ತೀರಾ?, ತೆರಿಗೆ ಹಾಕದೇ ಗ್ಯಾರಂಟಿ ಕೊಡುತ್ತೇವೆ ಅಂದಿದ್ದರು. ಈಗ ಶೇ.40ರಿಂದ 60ರಷ್ಟು ಕಮಿಷನ್ ಸರಕಾರ ಆಗಿದೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಬಾಣಲೆಯಿಂದ ಬೆಂಕಿಗೆ ಜನ ಬಿದ್ದ ಹಾಗೆ ಆಗಿದೆ ಎಂದು ಆರ್.ಅಶೋಕ್ ಕಿಡಿಕಾರಿದರು.
ಕೇಂದ್ರ ನಾಯಕರ ತೀರ್ಮಾನ: ‘ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಉಚ್ಚಾಟನೆ ಆಗಲಿದ್ದಾರೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್.ಅಶೋಕ್, ‘ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡಲಿದ್ದಾರೆ. ನಾವೆಲ್ಲಾ ಒಟ್ಟಿಗೆ ಕಾಂಗ್ರೆಸ್ ಎದುರಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಪಕ್ಷ ನಮ್ಮ ತಾಯಿ ಇದ್ದ ಹಾಗೆ, ಅದರ ವಿರುದ್ಧ ಯಾವುದೇ ಹೇಳಿಕೆ ಕೊಡಬಾರದು’ ಎಂದು ಮನವಿ ಮಾಡಿದರು.