ಪಹಣಿ ವ್ಯತ್ಯಾಸ ಪ್ರಕರಣ; ಶಾಶ್ವತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

Update: 2023-11-22 17:46 GMT

ಫೈಲ್‌ ಚಿತ್ರ

ಬೆಂಗಳೂರು: ಸರ್ವೇ ಇಲಾಖೆಯಲ್ಲಿ ಕೆಲವು ಗೊಂದಲಗಳ ಕಾರಣಕ್ಕೆ ರೈತರು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಪಹಣಿ 3 ಮತ್ತು 9 ಹಾಗೂ ಆಕಾರಬಂದು ಆರ್ ಟಿಸಿ ವ್ಯತ್ಯಾಸದ ಪ್ರಕರಣಗಳ ಕಾರಣಕ್ಕೆ ರೈತರು ದಿನಂಪ್ರತಿ ಸರಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಈ ಪ್ರಕರಣಗಳಿಗೆ ಶೀಘ್ರ ಮುಕ್ತಿ ನೀಡಿ ರೈತರಿಗೆ ತುಸು ನೆಮ್ಮದಿ ನೀಡಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಬುಧವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸರ್ವೇ ಇಲಾಖೆಯಲ್ಲಿನ ಸಮಸ್ಯೆಗಳು ಹಾಗೂ ಪಹಣಿ 3 ಮತ್ತು 9 ವ್ಯತ್ಯಾಸಗಳ ಬಗ್ಗೆ ಚರ್ಚಿಸುವ ಸಲುವಾಗಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪಹಣಿ 3 ಮತ್ತು 9 ವ್ಯತ್ಯಾಸವಿರುವ 54,175 ಪ್ರಕರಣಗಳು ದಾಖಲಾಗಿವೆ. ಇನ್ನೂ ಆಕಾರಬಂದು ಮತ್ತು ಆರ್ ಟಿಸಿ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಒಟ್ಟು 1,12,865 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಇತ್ಯರ್ಥಕ್ಕಾಗಿ ರೈತರು ಸರಕಾರಿ ಕಚೇರಿಗೆ ಅಲೆದು ಸಾಕಾಗಿದ್ದಾರೆ. ಈ ಸಮಸ್ಯೆಗಳಿಗೆ ಮುಕ್ತಿಯೇ ಇಲ್ಲವೇ? ಜನರಿಗೆ ಪ್ರತಿನಿಧಿಗಳಾಗಿ ನಾವು ಅವರಿಗೆ ಏನೆಂದು ಉತ್ತರಿಸಬೇಕು? ಎಂದು ಅಧಿಕಾರಿಗಳನ್ನು ಅವರು ಪ್ರಶ್ನಿಸಿದರು.

ಈ ಎಲ್ಲ ತಿದ್ದುಪಡಿ ಪ್ರಕರಣಗಳಿಗೆ ಅಳತೆಯ ಅವಶ್ಯಕತೆ ಇದೆಯಾ? ಎಂಬುದನ್ನು ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಸರ್ವೇ ಇಲಾಖೆ ತಹಶೀಲ್ದಾರ್ ಗ್ರೇಡ್ ಅಧಿಕಾರಿಗಳಿಗೆ ತಿಂಗಳು ಅಥವಾ ವಾರಕ್ಕೆ ಇಂತಿಷ್ಟು ಪ್ರಕರಣ ಎಂದು ಗುರಿ ನಿಗದಿಪಡಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.

ಪೋಡಿ ಮುಕ್ತ ಗ್ರಾಮಕ್ಕೆ ಸೂಚನೆ: ಸಭೆಯಲ್ಲಿ ಪೋಡಿ ಮುಕ್ತ ಗ್ರಾಮದ ಬಗ್ಗೆಯೂ ಚರ್ಚಿಸಲಾಯಿತು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ರಾಜ್ಯದಲ್ಲಿ ಈಗಾಗಲೇ 17 ಸಾವಿರ ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳು ಎಂದು ಘೋಷಿಸಲಾಗಿದೆ. 14 ಸಾವಿರ ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮ ಎಂದು ಘೋಷಿಸುವುದು ಬಾಕಿ ಇದೆ ಎಂದರು.

ಈಗಾಗಲೇ ರಾಮನಗರ ಜಿಲ್ಲೆಯಲ್ಲಿ “ಡ್ರೋನ್ ತಂತ್ರಜ್ಞಾನ” ಆಧಾರಿತ ಭೂ ಮರು-ಮಾಪನಕ್ಕೆ (ರೀ ಸರ್ವೇ) ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ಈ ಪ್ರಯೋಗ ಯಶಸ್ವಿಯಾಗಿದ್ದು, ಇದನ್ನೇ ಆಧರಿಸಿ ರಾಜ್ಯಾದ್ಯಂತ ಮತ್ತೊಮ್ಮೆ ಭೂ ಮರು-ಮಾಪನ ಮಾಡಿ ಪೋಡಿ ಮರು ಅಭಿಯಾನಕ್ಕೆ ಚಾಲನೆ ನೀಡಿ ಎಂದು ಅವರು ಸೂಚಿಸಿದರು.

ನಮೂನೆ 57 ಅರ್ಜಿ ಇತ್ಯರ್ಥಕ್ಕೂ ಸೂಚನೆ: ನಮೂನೆ 57ರ ಅಡಿಯಲ್ಲಿ ಸಾಗುವಳಿ ಭೂಮಿ ಮಂಜೂರು ಮಾಡಲು ರಾಜ್ಯಾದ್ಯಂತ ಲಕ್ಷಾಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲ ಅರ್ಜಿಗಳನ್ನು ಕಾನೂನಿನ ಮಿತಿಯೊಳಗೆ ಯಾರ ಪ್ರಭಾವಕ್ಕೂ ಒಳಗಾಗದೆ, ಶೀಘ್ರವಾಗಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಿ ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.

ಅಲ್ಲದೆ, ಈ ನಮೂನೆ 57ರ ಅರ್ಜಿಯ ಅಡಿಯಲ್ಲಿ ಈ ಹಿಂದೆಯೇ ಭೂಮಿ ಮಂಜೂರಾಗಿದ್ದರೆ ಅಧಿಕಾರಿಗಳು ಪೆÇೀಡಿ ಮುಕ್ತ ಮಾಡುವ ಅಥವಾ ಏಕ ವ್ಯಕ್ತಿ ಅಡಿಯಲ್ಲಿ ಪೋಡಿ ನೀಡುವ ಬಗ್ಗೆ ಕ್ರಮಕೈಗೊಳ್ಳಿ, ಮುಂದಿನ ದಿನಗಳಲ್ಲಿ ಫಾರಂ 57ರ ಅರ್ಜಿಗಳನ್ನು ಮಂಜೂರು ಮಾಡುವ ಮುನ್ನ ಭೂಮಿಯನ್ನು ಅಳತೆ ಮಾಡಿ ಮಂಜೂರು ನಕ್ಷೆ ತಯಾರಿಸಿದ ನಂತರ ಸಾಗುವಳಿ ಚೀಟಿ ನೀಡಿ, ಪೋಡಿ ಪ್ರಕ್ರಿಯೆ ನಡೆಸಿ ನೋಂದಾಯಿಸಿ ಹಕ್ಕು ದಾಖಲೆಗಳನ್ನು ತಯಾರಿಸಿ ಎಂಬ ಸೂಚನೆಯನ್ನೂ ಅವರು ಅಧಿಕಾರಿಗಳಿಗೆ ರವಾನಿಸಿದರು.

ಕಂದಾಯ-ಅರಣ್ಯ ಗಡಿ ಗುರುತಿಸಿ: ಕಂದಾಯ ಹಾಗೂ ಅರಣ್ಯ ಜಮೀನುಗಳ ನಡುವಿನ ಗಡಿಯ ಬಗ್ಗೆ ಸಾಕಷ್ಟು ಸ್ಪಷ್ಟತೆ ಇಲ್ಲದ ಕಾರಣಕ್ಕೂ ಜನ ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ. ಇಲಾಖೆಗೂ ಇದರಿಂದ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಶೀಘ್ರವಾಗಿ ಹಲವಾರು ಸರ್ವೇ ನಂಬರ್ ಗಳಲ್ಲಿ ಹಂಚಿಹೋಗಿರುವ ಅರಣ್ಯ ಹಾಗೂ ಕಂದಾಯ ಭೂಮಿಗಳನ್ನು ಗುರುತಿಸಿ, ಸರ್ವೇ ನಂಬರುಗಳನ್ನು ಶೀಘ್ರವಾಗಿ ಅಳತೆ ಕೈಗೊಂಡು ಗಡಿ ಗುರುತಿಸಿ ದಾಖಲೆಗಳನ್ನು ತಯಾರಿಸಿ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಅಲ್ಲದೆ, ರಾಜ್ಯದಲ್ಲಿ ಹಲವು ಸ್ವರೂಪಗಳಲ್ಲಿ ಸರಕಾರಿ ಜಮೀನುಗಳು ಇದ್ದು, ಎಲ್ಲ ಸರಕಾರಿ ಸರ್ವೇ ನಂಬರುಗಳನ್ನೂ ಒಂದು ಬಾರಿ ಅಳತೆ ಮಾಡಿ ಸಂರಕ್ಷಿಸಿ ಎಂದು ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಆಯುಕ್ತ ಸುನೀಲ್ ಕುಮಾರ್, ಭೂ ಮಾಪನ ಮತ್ತು ಭೂ ದಾಖಲಾತಿಗಳ ಇಲಾಖೆ ಆಯುಕ್ತ ಮಂಜುನಾಥ್ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News