ಪೂರ್ಣಗೊಂಡ ಕಾಮಗಾರಿಗಳ ಗುತ್ತಿಗೆದಾರರಿಗೆ ಮಾತ್ರ ಬಿಲ್ ಪಾವತಿ: ಡಿಸಿಎಂ ಡಿ.ಕೆ.ಶಿವಕುಮಾರ್‌

Update: 2023-08-07 18:12 GMT

ಬೆಂಗಳೂರು, ಆ.7: ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾರು ಸರಿಯಾದ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೊ ಅವರಿಗೆ ಬಿಲ್ ಪಾವತಿ ಆಗಲಿದೆ. ಈ ಕಾಮಗಾರಿಗಳು ವ್ಯವಸ್ಥಿತ ರೂಪದಲ್ಲಿ ನಡೆಯಬೇಕು. ರಸ್ತೆ ನಿರ್ಮಾಣವಾಗದೆ ಬಿಲ್ ಪಾವತಿಸಲು ಮುಂದಾಗಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದಂತೆ ಅನೇಕ ಪ್ರಕರಣಗಳು ಇವೆ. ನಮ್ಮ ವಿರುದ್ಧ ಯಾರು ಎಷ್ಟು ಮಾತನಾಡುತ್ತಾರೊ ಮಾತನಾಡಲಿ. ನಾವು ಯಾರ ನಾಲಿಗೆಗೂ ಬೀಗ ಹಾಕುವುದಿಲ್ಲ ಎಂದು ತಿರುಗೇಟು ನೀಡಿದರು.

ಈ ಹಿಂದೆ ನಾವು 40 ಪರ್ಸೆಂಟ್ ಕಮಿಷನ್, ಪೇಸಿಎಂ ಅಭಿಯಾನ ಮಾಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದರು. ಇನ್ನು ಲೋಕಾಯುಕ್ತ ಸಂಸ್ಥೆ ಒಂದೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 137 ಕೋಟಿ ರೂ. ಕಾಮಗಾರಿ ಆಗದೆ ಬಿಲ್ ಪಾವತಿ ಮಾಡಲಾಗಿದೆ ಎಂದು ವರದಿ ನೀಡಿದೆ. ನಾವು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಎಂದು ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಅವರ ಸಲಹೆ, ಮಾರ್ಗದರ್ಶನದಂತೆ ನಾವು ಕ್ರಮ ಕೈಗೊಂಡು ತನಿಖೆ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ಬಿಬಿಎಂಪಿ ಕಾಮಗಾರಿಗಳ ಅಕ್ರಮ ತನಿಖೆಗೆ ಎಸ್‍ಐಟಿ ರಚಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಎಸ್‍ಐಟಿ ರಚನೆ ಮಾಡಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವಾಗ ಯಾವ ಕಾಮಗಾರಿಗೆ ಟೆಂಡರ್ ಆಯಿತು, ಕಾಮಗಾರಿಗೆ ಯಾವಾಗ ಅನುಮತಿ ಸಿಕ್ಕಿತು, ಯಾವಾಗ ಕಾಮಗಾರಿ ಮುಗಿಯಿತು, ಯಾವಾಗ ಬಿಲ್ ಪಾಸ್ ಆಗಿದೆ, ಕಾಮಗಾರಿ ಗುಣಮಟ್ಟ ಹೇಗಿದೆ ಎಂದು ಪರಿಶೀಲನೆ ಮಾಡಬೇಕಿದೆ ಎಂದರು.

2 ಕೋಟಿ ರೂ.ಕಾಮಗಾರಿಯಲ್ಲಿ 1.99 ಕೋಟಿ ಬಿಲ್ ನೀಡಿದ್ದು ಕೇವಲ 1 ಲಕ್ಷ ಮಾತ್ರ ಬಾಕಿ ಉಳಿಸಿದ್ದಾರೆ. ಇಂತಹ ಸುಮಾರು 25 ಪ್ರಕರಣಗಳಿವೆ. ಈ ಬಗ್ಗೆ ನಾನು ಮಾಹಿತಿ ಪಡೆಯಬೇಕಿದೆ. ಇಂತಹ ಎಷ್ಟು ಕಾಮಗಾರಿಗಳಿವೆ ಎಂಬುದರ ಕುರಿತು ಮಾನದಂಡಗಳ ಅನುಗುಣವಾಗಿ ಅಧ್ಯಯನ ಮಾಡಿ ಅಧಿಕಾರಿಗಳು ವರದಿ ನೀಡಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಶಾಸಕರ ಸಮಸ್ಯೆ ಆಲಿಸಲು ಸಭೆ: ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆಲವು ಜಿಲ್ಲೆಗಳ ಶಾಸಕರ ಜತೆ ಆಯಾ ಕ್ಷೇತ್ರಗಳ ವಿಚಾರವಾಗಿ ಚರ್ಚೆ ಮಾಡಿದ್ದು, ರಾಜಕೀಯವಾಗಿ ಮಾರ್ಗದರ್ಶನ ನೀಡಿದ್ದೇವೆ. ಅವರ ಅಹವಾಲುಗಳನ್ನು ಆಲಿಸಿದ್ದೇವೆ. ಇದರ ಜತೆಗೆ ನಮ್ಮ ಸರಕಾರದ ಕಾರ್ಯಕ್ರಮಗಳ ಜಾರಿ ಹಾಗೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಸತತವಾಗಿ ಒಂದು ವಾರಗಳ ಕಾಲ ಈ ರೀತಿ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಬಿಜೆಪಿ ಪಕ್ಷದ ಶಾಸಕರ ಜೊತೆಗೂ ಸಭೆ ಮಾಡುತ್ತೇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಿಗೆ ಕೊಟ್ಟ ಮಾತಿನಂತೆ ಇಂದಿನಿಂದ ಸಭೆ ಮಾಡುತ್ತಿದ್ದೇವೆ. ಬೆಂಗಳೂರಿನ ಕೆಲವು ವಾರ್ಡ್ ಗಳಲ್ಲಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಇಂದು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಸಾವಿರ ಕೋಟಿ ಬಾಕಿ ಇದ್ದರೆ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 170 ಕೋಟಿ ಮಾತ್ರ ಬಾಕಿ ಇದೆ. ಇದೆಲ್ಲವೂ ಸತ್ಯ ಅಲ್ಲವೇ? ಮೊದಲು ನಮ್ಮ ಪಕ್ಷದ ಶಾಸಕರ ಅಹವಾಲು ಆಲಿಸುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ಎಕ್ಸ್‍ಪ್ರೆಷನ್ ಆಫ್ ಇಂಟರೆಸ್ಟ್ ಅವಧಿ ವಿಸ್ತರಣೆ: ಬೆಂಗಳೂರಿನಲ್ಲಿ ಫ್ಲೈ ಓವರ್, ಟನಲ್ ರಸ್ತೆ ಸೇರಿದಂತೆ ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ವಿಚಾರವಾಗಿ ನಾವು ಎಕ್ಸ್‍ಪ್ರೆಷನ್ ಆಫ್ ಇಂಟರೆಸ್ಟ್ ಅನ್ನು ಕರೆದಿದ್ದೆವು. ಕೇವಲ 2 ಸಂಸ್ಥೆಗಳು ಮಾತ್ರ ಮುಂದೆ ಬಂದಿದ್ದು, ಇನ್ನು ಹೆಚ್ಚಿನ ಸಂಸ್ಥೆಗಳು ಭಾಗವಹಿಸಬೇಕು ಎಂಬ ಉದ್ದೇಶದಿಂದ ಇದರ ಅವಧಿಯನ್ನು ಇನ್ನು 7 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ರಚನೆ, ಆರ್ಥಿಕತೆ ಸೇರಿದಂತೆ ಎಲ್ಲ ಆಯಾಮದಲ್ಲಿ ಮಾಹಿತಿ ಪಡೆಯಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಇದನ್ನು ಕರೆಯಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News