ರಾಹುಲ್ ಗಾಂಧಿ ಮಾತುಗಳು ಬಿಜೆಪಿ ಬುಡಕ್ಕೆ ಬೆಂಕಿ ಕಾಯಿಸಿದಂತಿದೆ : ದಿನೇಶ್ ಗುಂಡೂರಾವ್

Update: 2024-07-02 13:49 GMT

PC:fb/dineshgunduraoofficial

ಬೆಂಗಳೂರು : ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಆಡಿದ ನೇರ ನಿಷ್ಠೂರ ಮಾತುಗಳು ಬಿಜೆಪಿಯವರ ಬುಡಕ್ಕೆ ಬೆಂಕಿ ಕಾಯಿಸಿದಂತಿದೆ. ರಾಹುಲ್‍ರವರ ಮಾತುಗಳನ್ನು ಅರಗಿಸಿಕೊಳ್ಳಲಾಗದ ಅಶೋಕ್‍ರಂತಹ ರಾಜ್ಯ ಬಿಜೆಪಿ ನಾಯಕರು, ರಾಹುಲ್ ಭಾಷಣ ಸುಳ್ಳಿನ ಭಾಷಣ ಎಂದು ಒಂದಂಶದ ಷರಾ ಬರೆದಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, "ಇದೊಂದು ರೀತಿ ಕಂಡದನ್ನು ಕಂಡ ಹಾಗೇ ಹೇಳಿದರೆ ಕೆಲವರಿಗೆ ಕೆಂಡದಂತ ಕೋಪ ಎಂದ ಹಾಗೆ. ರಾಹುಲ್‍ರವರು ನಿನ್ನೆ ಪ್ರಸ್ತಾಪಿಸಿದ ಅಂಶಗಳು ಮೋದಿ ಸರಕಾರದ ಕಳೆದ ಹತ್ತು ವರ್ಷಗಳ ಆಡಳಿತ ವೈಫಲ್ಯದ ಕೈಗನ್ನಡಿಯಾಗಿತ್ತು. ಸತ್ಯ ಯಾವಾಗಲೂ ಕಹಿ ಎಂಬಂತೆ ರಾಹುಲ್‍ರವರ ಸತ್ಯದ ಮಾತುಗಳು ಬಿಜೆಪಿಯವರಿಗೆ ಅಜೀರ್ಣವಾಗಿದೆ" ಎಂದು ತಿಳಿಸಿದ್ದಾರೆ.

ಚಲಾವಣೆಯಲ್ಲಿರಲು ಎಲ್ಲದಕ್ಕೂ ಪ್ರತಿಕ್ರಿಯಿಸುವ ಚಾಳಿ ಹೊಂದಿರುವ ಅಶೋಕ್‍ರವರು ನಿನ್ನೆಯ ರಾಹುಲ್ ಗಾಂಧಿಯವರ ಭಾಷಣ ಮತ್ತೊಮ್ಮೆ ಕೇಳಿ ಪ್ರತಿಕ್ರಿಯಿಸಲಿ. ರಾಹುಲ್ ಹೇಳಿದಂತೆ ‘ಅಗ್ನಿವೀರ್' ಯೋಜನೆ ಯುವ ಜನರನ್ನು ವಂಚಿಸುತ್ತಿರುವುದು ಸುಳ್ಳೆ.?. ನೀಟ್ ಪರೀಕ್ಷಾ ಹಗರಣ ಸುಳ್ಳೆ.? ನಿರುದ್ಯೋಗ ಸಮಸ್ಯೆಯಿರುವುದು ಸುಳ್ಳೆ.? ಎಂದು ಅವರು ಪ್ರಶ್ನಿಸಿದ್ದಾರೆ.

ಮೋದಿ ಸರಕಾರ ಧರ್ಮದ ಆಧಾರದಲ್ಲಿ ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವುದು ಸುಳ್ಳೆ.? ಮಣಿಪುರದಲ್ಲಿ ರಕ್ತಪಾತವಾಗುತ್ತಿದ್ದಾಗ ಪ್ರಧಾನಿ ಬಾಯಿಗೆ ಬೀಗ ಹಾಕಿಕೊಂಡಿದ್ದು ಸುಳ್ಳೆ.? ರೈತರ ಬಹುದಿನದ ಬೇಡಿಕೆಯಾದ ಎಂಎಸ್‍ಪಿ ನಿರಾಕರಿಸುತ್ತಿರುವುದು ಸುಳ್ಳೆ.? ಮೋದಿಯವರು ಅಂಬಾನಿ-ಅದಾನಿಯವರ ಪವರ್ ಆಫ್ ಅಟಾರ್ನಿಯಂತೆ ಆಡಳಿತ ನಡೆಸುತ್ತಿರುವುದು ಸುಳ್ಳೆ.? ಯಾವುದು ಸುಳ್ಳು.? ಹೇಳಿ ಅಶೋಕ್‍ರವರೆ ಎಂದು ದಿನೇಶ್ ಗುಂಡೂರಾವ್ ಕೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News