ರಾಜ್ಯಾದ್ಯಂತ ಶೀಘ್ರದಲ್ಲೇ ಮತ್ತೊಮ್ಮೆ ‘ಕಂದಾಯ ಅದಾಲತ್’ಗೆ ಚಾಲನೆ: ಸಚಿವ ಕೃಷ್ಣ ಬೈರೇಗೌಡ

Update: 2024-01-29 14:54 GMT

ಬೆಂಗಳೂರ: ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಶೀಲ್ದಾರ್‌ ಗೆ ಪ್ರತ್ಯಾಯೋಜಿಸುವ ಅವಧಿಯನ್ನು ವಿಸ್ತರಿಸುವ ಸಂಬಂಧ ಸರಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ದಿನಾಂಕ ಘೋಷಿಸಲಾಗುವುದು. ಒಂದೇ ಸೂರಿನ ಅಡಿಯಲ್ಲಿ ಜನಸಾಮಾನ್ಯರ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸೋಮವಾರ ವಿಕಾಸಸೌಧದಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಮರುಚಾಲನೆ ನೀಡುವ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸರಕಾರದ ಆದೇಶದಲ್ಲಿ ಗಣಕೀಕೃತ ಪಹಣಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ರಾಜ್ಯಾದ್ಯಂತ ಮತ್ತೊಮ್ಮೆ ಕಂದಾಯ ಅದಾಲತ್ ಆಂದೋಲನವನ್ನು ಕೈಗೊಳ್ಳಬೇಕು. ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಜನರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ನೀಡಬೇಕು ಎಂದು ಸೂಚಿಸಿದರು.

ರಾಜ್ಯಾದ್ಯಂತ ಕಂದಾಯ ಅದಾಲತ್ ಆಂದೋಲನ:

ಕಾಲಕಾಲಕ್ಕೆ ಪಹಣಿ ತಿದ್ದುಪಡಿ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಶೀಲ್ದಾರರಿಗೆ ಪ್ರತ್ಯಾಯೋಜಿಸಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಅದರನ್ವಯ, ಈ ಅಧಿಕಾರ ಪ್ರತ್ಯಾಯೋಜನೆಯು 2023ರ ಡಿ.31ರಂದು ಮುಕ್ತಾಯಗೊಂಡಿತ್ತು ಎಂದು ಅವರು ಹೇಳಿದರು.

ಕಂದಾಯ ಅದಾಲತ್ ಕಾರ್ಯಕ್ರಮದಡಿಯಲ್ಲಿ ಆಕಾರ್ ಬಂದ್ ಮತ್ತು ಪಹಣಿ ಕಾಲಂ 3 ಮತ್ತು 9ರ ನಮೂದಿನಲ್ಲಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ದೋಷಪೂರಿತ ಪಹಣಿಗಳನ್ನು ಸರಿಪಡಿಸಲಾಗುತ್ತಿದ್ದು, 2022-23ನೆ ಸಾಲಿನಲ್ಲಿ ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಹೆಚ್ಚಿನ ಸಂಖ್ಯೆ ಪಹಣಿಗಳನ್ನು ಸರಿಪಡಿಸಿರುವುದು ಕಂಡ ಬಂದಿದೆ. 2022-23ನೇ ಸಾಲಿನ ಪ್ರಗತಿಯನ್ನು ಅವಲೋಕಿಸಿ ಈ ಕಾರ್ಯಕ್ರಮವನ್ನು ಮತ್ತೆ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಕಂದಾಯ ಅದಾಲತ್ ಆಂದೋಲನದ ಮೂಲಕ ಪಹಣಿ ತಿದ್ದುವ ಕಾರ್ಯವನ್ನು ಮುಂದುವರೆಸುವುದು ಬಹಳ ಅವಶ್ಯಕವಾಗಿದೆ. ಈ ಮೂಲಕ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಗೆ ಭೇಟಿ: ರಾಜ್ಯದಲ್ಲಿ ಪೈಕಿ ಮತ್ತು ಪಹಣಿ ಕಾಲಂ 3 ಹಾಗೂ 9ರಲ್ಲಿ ವ್ಯತ್ಯಾಸವಿರುವ ಒಟ್ಟಾರೆ 1,32,618 ಪ್ರಕರಣಗಳಿದ್ದು, ಈ ಪೈಕಿ ಕೊಡಗಿನಲ್ಲೆ ಸುಮಾರು 60 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಿವೆ. ಸೋಮವಾರಪೇಟೆ ತಾಲೂಕಿನಲ್ಲಿ ಅಧಿಕ ಸಂಖ್ಯೆಯಲ್ಲಿ ಸರಕಾರಿ ಮಂಜೂರು ಭೂಮಿ ಇದ್ದರೆ, ಉಳಿದ ತಾಲೂಕುಗಳಲ್ಲಿ ಜಮಾ ಬಾಣೆ ಭೂಮಿ ಹೆಚ್ಚಿದೆ. ಹೀಗಾಗಿ ಪೈಕಿ ಮತ್ತು ಪಹಣಿ ಕಾಲಂ 3 ಮತ್ತು 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಪೈಕಿ ಮತ್ತು ಪಹಣಿ ಕಾಲಂ 3 ಹಾಗೂ 9ರಲ್ಲಿ ವ್ಯತ್ಯಾಸವಿರುವ ಪ್ರಕರಣಗಳ ಸಂಖ್ಯೆ ಕೊಡಗಿನಲ್ಲಿ ಅಧಿಕವಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಅಲ್ಲಿನ ಸ್ಥಳೀಯ ಶಾಸಕರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕೊಡಗಿನಲ್ಲಿ ವಿಶೇಷ ಆದ್ಯತೆಯ ಮೇಲೆ ಕೆಲಸ ನಿರ್ವಹಿಸುವ ತುರ್ತು ಇದೆ ಎಂದರು.

ರಾಜ್ಯದಾದ್ಯಂತ ಭೂಮಿ ತಂತ್ರಾಂಶದಲ್ಲಿ 1,89,55,773 ಆರ್ ಟಿಸಿ ಇದ್ದು, 80,53,616 ಆರ್ ಟಿಸಿಗಳು ಡಿಜಿಟಲೀಕರಣಗೊಳ್ಳುವುದು ಬಾಕಿ ಇದೆ. ಈ ಕೆಲಸವನ್ನು ಶೀಘ್ರದಲ್ಲಿ ಮುಗಿಸಿ, ಸಂಯೋಜಿತ ಪರಿವರ್ತನೆ ಪೋಡಿ ಕೆಲಸವನ್ನೂ ಶೀಘ್ರ ಮುಗಿಸಲು ಪೋಡಿ ಅದಾಲತ್‍ಗೆ ಚಾಲನೆ ನೀಡಿ ಎಂದು ಅವರು ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಕಂದಾಯ ಆಯುಕ್ತ ಪಿ.ಸುನೀಲ್ ಕುಮಾರ್, ಸರ್ವೇ ಇಲಾಖೆ ಆಯುಕ್ತ ಮಂಜುನಾಥ್, ಸಚಿವರ ಆಪ್ತ ಕಾರ್ಯದರ್ಶಿ ರವಿ ತಿರ್ಲಾಪುರ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News