ದೇಶದಲ್ಲಿ ಆಂತರಿಕ ಭಯೋತ್ಪಾದನೆ ಮಾಡಲು ಬಯಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್!

Update: 2024-01-11 13:14 GMT

ಬೆಂಗಳೂರು: ಮಹಿಳೆಯರನ್ನು ಅಸಭ್ಯ ರೀತಿಯಲ್ಲಿ ಅವಮಾನಿಸಿ, ಮುಸ್ಲಿಮ್ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾನಾಡಿ ಭಾಷಣ ಮಾಡಿದ ಪ್ರಭಾಕರ ಭಟ್ಟರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಶ್ರೀರಂಗಪಟ್ಟಣ 3ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಜನವರಿ 17 ಕ್ಕೆ ಆದೇಶ ಕಾಯ್ದಿರಿಸಿದೆ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿಯ ವಿರುದ್ದ ಹಿರಿಯ ವಕೀಲ ಎಸ್ ಬಾಲನ್ ಅವರು ಶ್ರೀರಂಗಪಟ್ಟಣ 3 ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಮಂಡಿಸಿದ ವಾದದ ಸಾರಾಂಶ ಇಲ್ಲಿದೆ: 

ಬರಹ ರೂಪ : ನವೀನ್ ಸೂರಿಂಜೆ

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಮೇಲಿನ ಆರೋಪ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸಾಭೀತಾಗಿದೆ. ದೂರು ಮತ್ತು ಎಫ್ಐಆರ್ ನಲ್ಲಿರುವ ಎಲ್ಲಾ ಅಂಶಗಳು ನಿಜ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ತನಿಖೆಯಲ್ಲಿ ಸಾಭೀತಾಗಿರುವ ಈ ವಿಷಯಗಳು ಡಿಜಿಟಲ್ ಎವಿಡೆನ್ಸ್ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಆಧರಿತವಾಗಿದೆ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು 24/12/2023 ರಂದು ಮಧ್ಯಾಹ್ನ 3:00 ಗಂಟೆಗೆ, ಶ್ರೀರಂಗಪಟ್ಟಣದಲ್ಲಿ ಆಯೋಜಿಸಲಾದ ಹನುಮ ಜಯಂತಿ ಸಮಾರಂಭದ ಸಂದರ್ಭದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಉದ್ದೇಶಪೂರ್ವಕ ಭಾಷಣ ಮಾಡಿದನು. ಆರೋಪಿಯು ಉದ್ದೇಶಪೂರ್ವಕವಾಗಿ ಜನರ ಮಧ್ಯೆ ಇಸ್ಲಾಮೋಫೋಬಿಯೋ ವಾತಾವರಣವನ್ನು ಸೃಷ್ಟಿಸಲು ಈ ಕೃತ್ಯವನ್ನು ಮಾಡಿದ್ದಾನೆ. ಇದನ್ನು ಸ್ವತಹ ಆರೋಪಿ ಈವರೆಗೂ ನಿರಾಕರಿಸಿಲ್ಲ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು ಏನು ಹೇಳಿದ್ದಾನೆ ಮತ್ತು ಯಾವ ಉದ್ದೇಶಕ್ಕಾಗಿ ಹೇಳಿದ್ದಾನೆ ಎನ್ನುವುದು ಮುಖ್ಯವಾಗುತ್ತದೆ‌. ಆರೋಪಿಯ ಹೇಳಿಕೆಯು ಇಡೀ ಮುಸ್ಲಿಂ ಸಮುದಾಯದ ಮನೆಮನೆಗೆ ಸಂಬಂಧಪಟ್ಟ ಭಾವನಾತ್ಮಕ ವಿಷಯವಾಗಿದೆ. "ಮುಸ್ಲಿಂ ಮಹಿಳೆಯರು ದಿನಕ್ಕೊಬ್ಬ ಗಂಡಂದಿರನ್ನು ಹೊಂದಿದ್ದಾರೆ. ಅವರಿಗೆ ಶಾಶ್ವತ ಗಂಡಂದಿರಿಲ್ಲ. ಮುಸ್ಲಿಂ ಹುಡುಗಿಯರು ಮತ್ತು ಮುಸ್ಲಿಂ ಹುಡುಗರು ಮೋಸ ಮಾಡುತ್ತಿದ್ದಾರೆ. ಲವ್ ಜಿಹಾದ್ ಮಾಡುತ್ತಿದ್ದಾರೆ ನಿಮ್ಮಲ್ಲಿ ಚಿಕ್ಕ ಹುಡುಗ ಹುಡುಗಿಯರು ಲಭ್ಯವಿಲ್ಲವೇನು ? ರಾಷ್ಟ್ರ ರಕ್ಷಣೆಯನ್ನು ಹಿಂದೂಗಳು ಮಾತ್ರ ಮಾಡಬೇಕು. ಮುಸ್ಲಿಮರಿಗೆ ಹಲವು ರಾಷ್ಟ್ರಗಳಿವೆ, ಆದರೆ, ಹಿಂದೂಗಳಿಗೆ ಇರುವುದು ಭಾರತ ಮಾತ್ರ. ಹಿಂದೂಗಳಿಗೆ ಸ್ಥಳವಿಲ್ಲ, ಹಿಂದೂಗಳಿಗೆ ಭೂಮಿ ಇಲ್ಲ, ಆದ್ದರಿಂದ ಅವರು ಹೋರಾಟ ಮಾಡಬೇಕು. ಈ ದೇಶದಲ್ಲಿ ಹಿಂದೂಗಳು ಹೇಗೆ ಬದುಕಬಲ್ಲರು? ಹಿಂದೂಗಳ ಶಕ್ತಿ ಕಡಿಮೆಯಾದರೆ ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೆ. ಜಿಡಿಪಿಯ ಮೊದಲ ಭಾಗವು ಮುಸ್ಲಿಮರಿಗೆ ಮೀಸಲಾಗಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. ಹತ್ತು ಸಾವಿರ ಕೋಟಿ ರೂ.ಗಳನ್ನು ಮುಸ್ಲಿಮರಿಗೆ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಮೀಸಲಾತಿಯ ನೆಪದಲ್ಲಿ ಯಾರ ಅಪ್ಪನ ಹಣವನ್ನು ಮುಸ್ಲಿಮರಿಗಾಗಿ ಖರ್ಚು ಮಾಡುತ್ತಿದ್ದಾರೆ ? ಹಿಂದೂಗಳು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರೆ, ಆದರೆ ಹಣವನ್ನು ಶತ್ರು ಧರ್ಮಕ್ಕೆ ಖರ್ಚು ಮಾಡುತ್ತಾರೆ" ಎಂದು ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾನೆ.

ಆರೋಪಿಯ ಈ ಹೇಳಿಕೆ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 45(ಎ) ಮತ್ತು ಐಟಿ ಕಾಯ್ದೆಯ 79(ಎ) ಅಡಿಯಲ್ಲಿ ಸಂಪೂರ್ಣ ರೆಕಾರ್ಡಿಂಗ್‌ಗಳನ್ನು ಹ್ಯಾಶಿಂಗ್ ಮತ್ತು ದೃಢೀಕರಣ ಪ್ರಕ್ರಿಯೆಗೆ ಒಳಪಡಿಸಿದರೆ ಸಂಪೂರ್ಣ ಪಿತೂರಿ ಬೆಳಕಿಗೆ ಬರುತ್ತದೆ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು ದೇಶದಲ್ಲಿ ಇಸ್ಲಾಮೋಫೋಬಿಕ್ ವಾತಾವರಣವನ್ನು ಸೃಷ್ಟಿಸಲು ಆ ಮೂಲಕ ಮುಸ್ಲಿಂ ಸಮುದಾಯದ ವಿರುದ್ಧ ಜನರನ್ನು ಎತ್ತಿಕಟ್ಟಿ ರಾಷ್ಟ್ರದ ವಿರುದ್ದ ಆಂತರಿಕ ಭಯೋತ್ಪಾದನೆ ಮಾಡಲು ಬಯಸಿದ್ದನು ಎಂಬುದು ಸ್ಪಷ್ಟ. ಆರೋಪಿಯ ಭಾಷಣವು ಮುಸ್ಲಿಂ ಸಮುದಾಯವನ್ನು ನಿಂದಿಸುವ ಅವರ ಪ್ರಾಥಮಿಕ ಉದ್ದೇಶವನ್ನು ಸೂಚಿಸುತ್ತದೆ.

"ಸೌಹಾರ್ದತೆಯನ್ನು ಉತ್ತೇಜಿಸುವುದು ಮತ್ತು ಭಾರತದ ಎಲ್ಲಾ ಜನರ ನಡುವೆ ಸಾಮಾನ್ಯ ಸಹೋದರತ್ವವನ್ನು ಹರಡುವುದು" ಭಾರತದ ಸಂವಿಧಾನದ ಆರ್ಟಿಕಲ್ 51-ಎ (ಇ) ಯಂತೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ 11/09/1893 ರಂದು ಸ್ವಾಮಿ ವಿವೇಕಾನಂದರು ಮಾಡಿರುವ ಭಾಷಣವನ್ನು ಉಲ್ಲೇಖಿಸುವುದು ಈಗ ಪ್ರಸ್ತುತವಾಗಿದೆ. "ಎಲ್ಲಾ ಧರ್ಮಗಳು ವಿಭಿನ್ನ ಮಾರ್ಗಗಳನ್ನು ಹೊಂದಿರುವ ವಿಭಿನ್ನ ನದಿಗಳಂತೆ ಒಂದೇ ಸಾಗರದಲ್ಲಿ ವಿಲೀನಗೊಳ್ಳುತ್ತವೆ" ಎಂದು ಎಲ್ಲಾ ಧರ್ಮಗಳ ಏಕತೆಯ ಬಗ್ಗೆ ಮಾತನಾಡುತ್ತಾರೆ. ಭಾರತದ ಸಂವಿಧಾನವೂ ಅದನ್ನೇ ಹೇಳುತ್ತದೆ. ಆದ್ದರಿಂದಲೇ ಫ್ಯಾಸಿಸಂಗೆ ಕಾರಣವಾಗಬಹುದಾದ ಮತೀಯತೆ-ಮತಾಂಧತೆಗೆ ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಈ ನಾಡಿನಲ್ಲಿ ಅವಕಾಶವಿಲ್ಲ.

ಪ್ರಸ್ತುತ ಪ್ರಕರಣದಲ್ಲಿ, ಐಪಿಸಿ ಸೆಕ್ಷನ್ 153-ಎ ಅಡಿಯಲ್ಲಿ ಆರೋಪಿ ಅಪರಾಧ ಮಾಡಿದ್ದಾನೆ. ಆರೋಪಿಯು 'ಹಿಂದೂಗಳು ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಾಮರಸ್ಯವನ್ನು ಕದಡುವ ಪೂರ್ವಾಗ್ರಹ'ವನ್ನು ಹೊಂದಿದ್ದಾನೆ. ಈಗಾಗಲೇ ರಾಜ್ಯದ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಯ ಮೇಲೆ ಪ್ರಭಾಕರ ಭಟ್ಟನ ಭಾಷಣ ಪರಿಣಾಮ ಬೀರಿದೆ. ಈತ ಭಾಷಣ ಮಾಡಿದ ಬಳಿಕ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದೆ. ಭಾಷಣವು IPC ಯ ಸೆಕ್ಷನ್ 505(2) ರ ಅಡಿಯಲ್ಲಿ ಅಪರಾಧಿಕವಾಗಿದೆ.

ಆರೋಪಿ ಪ್ರಭಾಕರ ಭಟ್ ಗೆ ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿದಾನದ ಮೇಲೆ ಕಿಂಚಿತ್ತೂ ನಂಬಿಕೆ ಇಲ್ಲ. ಹಾಗಾಗಿಯೇ ತನ್ನ ಭಾಷಣದಲ್ಲಿ "ನಮ್ಮ ನ್ಯಾಯಾಲಯಗಳು ಹೇಗೆ ವರ್ತಿಸುತ್ತವೆ ಗೊತ್ತಾ? ಕಸಬ್‌ಗಾಗಿ ರಾತ್ರೋರಾತ್ರಿ ನ್ಯಾಯಾಲಯಗಳನ್ನು ತೆರೆಯಲಾಯಿತು" ಎಂದು ಕಸಬ್ ಗೆ ಶಿಕ್ಷೆ ನೀಡಿರುವ ನ್ಯಾಯಾಲಯವನ್ನು ಟೀಕಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾನೆ.

ಈ ರೀತಿ ದ್ವೇಷ ಭಾಷಣ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಬರುವುದಿಲ್ಲ. "ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಅತಿಕ್ರಮಿಸಲು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಅನುಮತಿ ನೀಡುವುದಿಲ್ಲ" ಎಂಬುದನ್ನು ಕೋರ್ಟ್ ಗಮನಿಸುವುದು ಮುಖ್ಯ. ಆದ್ದರಿಂದ ಸಂವಿಧಾನದತ್ತ ಸಾಮಾಜಿಕ ವ್ಯವಸ್ಥೆಯನ್ನು ಭದ್ರಪಡಿಸಿಕೊಳ್ಳಬೇಕಾದರೆ ಕಾನೂನು ಉಲ್ಲಂಘಿಸುವವರನ್ನು ಕಾನೂನಿನ ಮುಂದೆ ತಂದು ನಿಲ್ಲಿಸಬೇಕಾಗಿದೆ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲೇಬೇಕಾದ ಕಾನೂನಿನ ಅನಿವಾರ್ಯತೆ ಪೊಲೀಸರ ಮುಂದೆ ಇದೆ. ಇಲ್ಲದೇ ಇದ್ದರೆ ಪೊಲೀಸರು ಕಾನೂನು ಪಾಲನೆಯಲ್ಲಿ ಎಡವಿದಂತಾಗುತ್ತದೆ‌.

ಆರೋಪಿ ಕಲ್ಕಡ್ಕ ಪ್ರಭಾಕರ ಭಟ್ ವಿರುದ್ದ ಇರುವ ಸಾಕ್ಷ್ಯ ಡಿಜಿಟಲ್ ಎವಿಡೆನ್ಸ್ ! ಆರೋಪಿ ವಿರುದ್ದ ದೂರುದಾರರು ನೀಡಿರುವ HD/CD/DVD/Pen Drive ನಲ್ಲಿ ಕಂಡುಬರುವ ಧ್ವನಿಯನ್ನು ಅವರ ಧ್ವನಿ ಎಂದು ಸಾಬೀತುಪಡಿಸಲು ಸಿಡಿಯಲ್ಲಿರುವ ಧ್ವನಿ ಸ್ಪೆಕ್ಟ್ರೋಗ್ರಫಿಗೆ ಒಳಪಡಿಸುವ ಉದ್ದೇಶಕ್ಕಾಗಿ ಅವರ ಧ್ವನಿಯನ್ನು ಪೊಲೀಸ್ ಠಾಣೆಯಲ್ಲಿ ತಜ್ಞರು ರೆಕಾರ್ಡ್ ಮಾಡಬೇಕಾಗುತ್ತದೆ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನ ಧ್ವನಿಯನ್ನು ಪೊಲೀಸರು ಮರು ರೆಕಾರ್ಡ್ ಮಾಡುವ ಮೊದಲು sterile ಸಾಧನಗಳನ್ನು ಬಳಸಿಕೊಂಡು ಪಂಚಸಾಕ್ಷಿಗಳ ಸಮ್ಮುಖದಲ್ಲಿ ಮಹಜರ್ ಮಾಡಬೇಕಿದೆ. ಪೊಲೀಸರು ಕಾನೂನಿನ ಈ ಕಡ್ಡಾಯಗೊಳಿಸಿದ ಮಾರ್ಗಸೂಚಿಗಳನ್ನು ಅನುಸರಿಸಲೇಬೇಕಿದೆ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು ಮನುಷ್ಯ ವಿರೋಧಿ ಕೃತ್ಯ ಮಾಡಿದ ದಿನವಾದ ಡಿಸೆಂಬರ್ 24 ರ ವಿಡಿಯೋವನ್ನು ಎಫ್ಎಸ್ ಎಲ್ ಗೆ ಕಳಿಸಬೇಕು. ವಿಡಿಯೋದಲ್ಲಿ ಇರುವ ಆತನ ಮುಖ ಮತ್ತು ನಡಿಗೆಯ ದೃಶ್ಯಾವಳಿಗಳನ್ನು ಮರು ರೆಕಾರ್ಡಿಂಗ್ ಮಾಡಬೇಕು. ದೃಶ್ಯಾವಳಿಯಲ್ಲಿರುವ ದೇಹ ಮತ್ತು ಮುಖ ಆತನದ್ದೇ ಎಂದು ಸಾಭೀತುಪಡಿಸಲು ಠಾಣೆಯಲ್ಲಿ ಆತನ ದೇಹದ ರೆಕಾರ್ಡಿಂಗ್ ಮಾಡಿ ಡಿಜಿಟಲ್ ಸಾಕ್ಷ್ಯ ಮತ್ತು ಪೊಲೀಸರು ರೆಕಾರ್ಡ್ ಮಾಡಿದ ವಿಡಿಯೋವನ್ನು ಎಫ್ಎಸ್ ಎಲ್ ನ ಆಂಥ್ರಪಾಲಜಿ ವಿಭಾಗಕ್ಕೆ ಕಳುಹಿಸಿಕೊಡಬೇಕು. ಆ ಮೂಲಕ ತನಿಖಾಧಿಕಾರಿಗಳು ಆತನ ಮುಖ ಮತ್ತು ದೇಹದ ಸಾಕ್ಷ್ಯ ಸಂಗ್ರಹಿಸಬೇಕು.

ಸಿಡಿಗಳು/ಡಿವಿಡಿಗಳು/ಪೆನ್ ಡ್ರೈವ್‌ಗಳನ್ನು ಐಟಿ ಕಾಯಿದೆಯ ಆರ್.ಡಬ್ಲ್ಯೂ ಸೆಕ್ಷನ್ 79(ಎ), ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 45(ಎ) ಅಡಿಯಲ್ಲಿ ಒದಗಿಸಲಾಗಿದೆ. ಹಾಗಾಗಿ ಅದನ್ನು ತಜ್ಞರಿಂದ ಪರಿಶೀಲಿಸಿ ಅದರ alpha-numerical value/hash value ಮತ್ತು ದೃಡೀಕರಣ ಪ್ರಕ್ರಿಯೆಯನ್ನು ಮಾಡಬೇಕು. ಅದಕ್ಕಾಗಿ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಸೆಕ್ಷನ್ 22(ಎ) ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನ ತಪ್ಪೊಪ್ಪಿಗೆ ಹೇಳಿಕೆಯನ್ನು ತನಿಖಾಧಿಕಾರಿಗಳು ದಾಖಲಿಸಿಕೊಳ್ಳಲೇಬೇಕಿದೆ. ಈ ಹಿಂದಿನ ಭಾರತೀಯ ದಂಢ ಸಂಹಿತೆ (ಐಪಿಸಿ) ಪ್ರಕಾರವೂ, ಭಾರತ ಸಾಕ್ಷ್ಯ ಅಧಿನಿಯಮ ಮತ್ತು ಭಾರತೀಯ ನ್ಯಾಯ ಸಂಹಿತೆ ಪ್ರಕಾರವೂ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು. ಇಂಡಿಯನ್ ಎವಿಡೆನ್ಸ್ ಅ್ಯಕ್ಟ್ ಬದಲಿಗೆ ಈಗ ಕೇಂದ್ರ ಸರ್ಕಾರವು ಭಾರತ ಸಾಕ್ಷ್ಯ ಅಧಿನಿಯಮ ಜಾರಿಗೆ ತಂದು ಅದನ್ನು ರಾಷ್ಟ್ರಾಧ್ಯಕ್ಷರ ಮೂಲಕ ಕಾನೂನಾಗಿಸಿದೆ. ಈ ಮೂರು ಕಾನೂನುಗಳ ಪ್ರಕಾರ ಕಲ್ಲಡ್ಕ ಪ್ರಭಾಕರ ಭಟ್ಟನ ತಪ್ಪೊಪ್ಪಿಗೆ ಹೇಳಿಕೆ ಮತ್ತು ಸ್ವ ಇಚ್ಚಾ ಹೇಳಿಕೆಯನ್ನು ಪೊಲೀಸರು ದಾಖಲಿಸಬೇಕಿದೆ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು ಈ ರೀತಿ ಕೃತ್ಯ ಮಾಡುವ ಚಾಳಿ ಹೊಂದಿರುವ ಅಬಿಚ್ಯುವಲ್ ಅಫೆಂಡರ್ ಆಗಿದ್ದಾನೆ. ಈತನ ವಿರುದ್ದ ಕೊಲೆ ಕೇಸು ಕೂಡಾ ಈ ಹಿಂದೆ ದಾಖಲಾಗಿತ್ತು. ಅತ್ಯಾಚಾರ ಆರೋಪಿಗೆ ಸಹಾಯ ಮಾಡಲು ಸಾಕ್ಷಿಗೆ ಬೆದರಿಕೆ ಒಡ್ಡಿ ಆತನ ಸಾವಿಗೂ ಕಾರಣನಾಗಿದ್ದ. ಒಂದಲ್ಲಾ, ಎರಡಲ್ಲಾ, ಹತ್ತಾರು ದ್ವೇಷ ಭಾಷಣದ ಕೇಸುಗಳು ಈತನ ವಿರುದ್ದ ದಾಖಲಾಗಿದೆ. ಈ ಪ್ರಕರಣದಲ್ಲಿ ಜಾಮೀನು ನೀಡಿದರೆ ಮತ್ತೆ ಮತ್ತೆ ಆತನಿಗೆ ಈ ಅಪರಾಧವನ್ನು ಎಸಗಲು ಉತ್ತೇಜಿಸಿದಂತೆ ಆಗುತ್ತದೆ.

ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು 1976 ರಿಂದ 2023 ಡಿಸೆಂಬರ್ 24 ರವರೆಗೆ ಭಾಗಿಯಾದ ಪ್ರಕರಣಗಳು, ಮಾಡಿರುವ ಕೊಲೆಗಳನ್ನು ಆಧಾರವಾಗಿಟ್ಟುಕೊಂಡು ಆತನ ವಿರುದ್ದ ರೌಡಿಶೀಟ್ ತೆರೆಯಬಹುದು. ರೌಡಿ ಶೀಟರ್ ಮಾಡಲು ಅರ್ಹವಾದ ವ್ಯಕ್ತಿ ಪ್ರಭಾಕರ್ ಭಟ್. ಈ ದೇಶಕ್ಕಿಂತ ಮಿಗಿಲು ಯಾರೂ ಇಲ್ಲ. ಈ ದೇಶ ನಮ್ಮದು ಮತ್ತು ನಮ್ಮೆಲ್ಲರದ್ದು. ಆದರೆ ಈ ದೇಶವನ್ನು ಧರ್ಮದ ಮೂಲಕ ಒಡೆದು ಗಡಿ ನಿರ್ಮಿಸಲು ಯತ್ನಿಸುವುದು ದೇಶದ ಭದ್ರತೆ ಮತ್ತು ಗಡಿ ಭದ್ರತೆಗೆ ಅಪಾಯಕಾರಿ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಆರೋಪಿ ಪ್ರಭಾಕರ ಭಟ್ಟನ ಭಾಷಣ ದೇಶದ್ರೋಹವಾಗುತ್ತದೆ ಹಾಗಾಗಿ ಭಟ್ ವಿರುದ್ದ ಟೆರರಿಸ್ಟ್ ಅ್ಯಕ್ಟ್ ಅನ್ನೂ ಕೂಡಾ ಸೇರಿಸಬೇಕಾಗುತ್ತದೆ. ಸಂಘಟಿತವಾಗಿ ಈ ಕೃತ್ಯವನ್ನು ಮಾಡಿರುವುದರಿಂದ ಕೋಕಾ ಅ್ಯಕ್ಟ್, UAPA act ಸೆಕ್ಷನ್ 13 ರನ್ನೂ ಪ್ರಭಾಕರ ಭಟ್ ಮೇಲೆ ಹಾಕಿ ಬಂಧಿಸಬೇಕು.

ಈಗ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ನಲ್ಲಿರುವ ಎಲ್ಲಾ ಸೆಕ್ಷನ್ ಗಳು ಸರಿಯಾಗಿವೆ. ಪೊಲೀಸರು ಚಾರ್ಜ್ ಶೀಟ್ ಸಿದ್ದಗೊಳಿಸಲಾಗಿದೆ ಎಂದು ಕೋರ್ಟ್ ಗೆ ರಿಪೋರ್ಟ್ ಮಾಡಿದ್ದಾರೆ. ಪೂರ್ಣಪ್ರಮಾಣದ ಚಾರ್ಜ್ ಶೀಟ್ ಸಿದ್ದಗೊಳ್ಳಬೇಕಾದರೆ ಅಗಾಧ ಕಾನೂನು ಪ್ರಕ್ರಿಯೆಗಳು ನಡೆಯಬೇಕಿದೆ. ಅದಕ್ಕಾಗಿ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಬೇಕಿದೆ. ಹಾಗಾಗಿ ಈ ಘನ ನ್ಯಾಯಾಲಯ ಸಮಾಜದ ಸ್ವಾಸ್ಥ್ಯದ ಹಿನ್ನಲೆಯಲ್ಲಿ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿಕೊಳ್ಳುತ್ತೇನೆ.

(ರಾಜ್ಯದ ಹಿರಿಯ ವಕೀಲ ಎಸ್ ಬಾಲನ್ ಅವರು ಇಂಗ್ಲೀಷ್ ನಲ್ಲಿ ಮಾಡಿರುವ ವಾದದ ಸಾರಾಂಶವಿದು. ಈ ವಾದದ ಮದ್ಯದಲ್ಲಿ ಸುಪ್ರಿಂ ಕೋರ್ಟ್ ಮತ್ತು ಹೈಕೋರ್ಟ್ ನ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಅದನ್ನು ಉಲ್ಲೇಖಿಸದೇ ಕಾನೂನು ಭಾಷೆಯನ್ನು ಎಲ್ಲರಿಗೂ ಸರಳವಾಗಿ ಅರ್ಥವಾಗುವಂತೆ ಬರಹ ರೂಪಕ್ಕೆ ಇಳಿಸಲಾಗಿದೆ - ನವೀನ್ ಸೂರಿಂಜೆ)

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News