‘ಕೆಪಿಸಿಸಿ ಅಧ್ಯಕ್ಷ ಬದಲಾವಣೆ’ ಕಾದು ನೋಡಬೇಕು : ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ಅಧ್ಯಕ್ಷ ಸ್ಥಾನ ಯಾರಿಗೆ ಕೊಡುತ್ತಾರೆಂಬುದನ್ನು ಕಾದು ನೋಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಚರ್ಚೆ ಏನು ಅನ್ನೋದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಪಸ್ ಬಂದ ನಂತರವೇ ಗೊತ್ತಾಗಬೇಕು. ಈ ವಿಷಯವನ್ನು ಪಕ್ಷದ ವರಿಷ್ಠರು ಎಷ್ಟು ಗಂಭೀರವಾಗಿ ಪರಿಣಿಸಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಬದಲಾವಣೆ ಅಗತ್ಯ ಎಂದು ಭಾವಿಸಿದರೆ, ಪ್ರಕ್ರಿಯೆ ಶುರುವಾಗುತ್ತದೆ ಎಂದು ಹೇಳಿದರು.
ಕೆಪಿಸಿಸಿ ಸ್ಥಾನದ ಆಕಾಂಕ್ಷಿಯಿಂದ ಹಿಂದೆ ಸರಿಯುತ್ತಿದ್ದೇನೆ ಎಂಬ ಪ್ರಶ್ನೆ ಬರಲ್ಲ. ಇದು ಪಕ್ಷದ ವಿಚಾರ. ಅವರಿಗೆ ಅನುಕೂಲ ಆದವರನ್ನು ಆ ಸ್ಥಾನಕ್ಕೆ ನೇಮಿಸುತ್ತಾರೆ. ನಾವು ಮನವಿ ಮಾಡಿದಾಗ ಅವರು ನಮಗೆ ಸ್ಥಾನ ಕೊಡಲ್ಲ. ಅವರದೇ ಲೆಕ್ಕಾಚಾರದಲ್ಲಿ ಮಾಡುತ್ತಾರೆ. ಅದು ಯಾವುದೂ ನಮ್ಮ ಕೈಯಲ್ಲಿ ಇಲ್ಲ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ ಬಳಿ ವ್ಯಕ್ತಪಡಿಸಬಹುದಷ್ಟೇ. ಮುಂದಿನದು ನಾವು ಕಾದು ನೋಡಬೇಕಷ್ಟೇ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.