ಶಿವಮೊಗ್ಗ ನಗರದಲ್ಲಿ "ಸೌಹಾರ್ದವೇ ಹಬ್ಬ" ನಡಿಗೆ | ಕೈ ಕೈ ಹಿಡಿದು ಸೌಹಾರ್ದ ಸಂದೇಶ ಸಾರಿದ ಧರ್ಮಗುರುಗಳು

Update: 2023-09-15 18:06 GMT

ಶಿವಮೊಗ್ಗ, ಸೆ.15: ಮುಂಬರುವ ಗಣಪತಿ ಮತ್ತು ಈದ್‌ ಮಿಲಾದ್ ಹಬ್ಬಗಳ ಹಿನ್ನೆಲೆ ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ 'ನಮ್ಮ ನಡಿಗೆ ಶಾಂತಿಯ ಕಡೆಗೆ' ಸಮಿತಿಯು ಶುಕ್ರವಾರ ಆಯೋಜಿಸಿದ್ದ "ಸೌಹಾರ್ದವೇ ಹಬ್ಬ" ನಡಿಗೆಯಲ್ಲಿ ವಿವಿಧ ಧರ್ಮಗುರುಗಳು ಶಾಂತಿಯ ಸಂದೇಶ ಸಾರಿದರು.

ಶುಕ್ರವಾರ ಸಂಜೆ ನಗರದ ಸಿಮ್ಸ್ ಮೆಡಿಕಲ್ ಕಾಲೇಜು ಬಳಿ ಸೌಹಾರ್ದ ಹಬ್ಬಕ್ಕೆ ಚಾಲನೆ ನೀಡಲಾಯಿತು.ಅಲ್ಲಿಂದ 2 ಸಾವಿರ ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದು ಜನರು ಮೆರವಣಿಗೆ ನಡೆಸಿದರು. ನಗರದ ಅಶೋಕ ಸರ್ಕಲ್‌, ಬಿ.ಹೆಚ್‌.ರಸ್ತೆ, ಅಮೀರ್‌ ಅಹಮದ್‌ ಸರ್ಕಲ್‌, ಶಿವಪ್ಪನಾಯಕ ಪ್ರತಿಮೆ ಮೂಲಕ ಸೈನ್ಸ್‌ ಮೈದಾನ ತಲುಪಿತು.

ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಶಾಂತಿಯ ಸಂದೇಶ ಸಾರುವ ಘೋಷ ವ್ಯಾಕ್ಯಗಳನ್ನು ಕೂಗಿದರು. ಶಾಂತಿ ಸೌಹಾರ್ದ ಕಾಪಾಡುವಂತೆ ಮನವಿ ಮಾಡಿದರು.

ಸೌಹಾರ್ದ ಹಬ್ಬದ ಮೆರವಣಿಗೆಯಲ್ಲಿ ಮಠಾಧೀಶರು, ಮೌಲ್ವಿಗಳು ಮತ್ತು ಚರ್ಚ್ ಪಾದ್ರಿಗಳು ಕೈ ಕೈ ಹಿಡಿದು ಹೆಜ್ಜೆ ಹಾಕಿದರು.ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ ಕುಮಾರ್‌ ಭೂಮರೆಡ್ಡಿ ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಭಾಗಹಿಸಿದ್ದರು.

 

ನಂತರ ಸೈನ್ಸ್ ಮೈದಾನದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಅವರು, ಧರ್ಮ ಯಾವಾಗಲೂ ನಮ್ಮ ನಡವಳಿಕೆಯಲ್ಲಿ ಇರಬೇಕು. ಮೌಲ್ಯಯುತ ಆಚರಣೆ ಈ ಸಮಯದ ಅನಿವಾರ್ಯತೆಯಾಗಿದೆ. ಜಗತ್ತು ಒಂದು ಕುಟುಂಬದ ಹಾಗೆ ಇರಬೇಕಿರುವುದು ಅಗತ್ಯ ಎಂದರು.

ನಮ್ಮ ಸುತ್ತ ನಡೆಯುತ್ತಿರುವ ಹಲವು ಘಟನೆಗಳಿಂದ ಅಕ್ಕಪಕ್ಕದಲ್ಲಿದ್ದವರ ಮೇಲೆ ಅನುಮಾನ ಪಡುವ ಸ್ಥಿತಿ ನಿರ್ಮಾಣವಾಗಿದೆ. ನಾವೆಲ್ಲಾ ಭಾವನೆ ಇಲ್ಲದವರ ರೀತಿ ಬದುಕುತ್ತಿದ್ದೇವೆ. ಉತ್ಸವಗಳು, ಹಬ್ಬಗಳು ಬರುವುದು ಮನುಷ್ಯನನ್ನು ಜಡತ್ವದಿಂದ ದೂರಗೊಳಿಸಿ ಉತ್ಸಾಹ ತುಂಬುದಕ್ಕೆ. ಈ ಹಬ್ಬಗಳಿಂದ ಚೈತನ್ಯ ತುಂಬಬೇಕು. ಎಲ್ಲರ ಜತೆ ಸೇರಿ ಹಬ್ಬ ಆಚರಿಸಿ ಆನಂದಿಸಬೇಕು ಎಂದು ಕರೆ ನೀಡಿದರು.

ಕ್ರೈಸ್ತ ಧರ್ಮಗುರು ಫಾ.ಸುನಿಲ್ ರೋಡ್ರಗಸ್ ಮಾತನಾಡಿ,ವೈವಿಧ್ಯತೆ ನಮ್ಮ ಜೀವನದ ಜೀವನಾಡಿ. ಇದನ್ನು ತೆಗೆದು ಹಾಕಲು ಯತ್ನಿಸುವುದು ಸರಿಯಲ್ಲ. ಧರ್ಮಗಳು ಒಂದೇ ದೇವರನ್ನು ಸೇರಲು ಇರುವ ಅನ್ಯಾನ್ಯ ಮಾರ್ಗ. ಆದ್ರೆ ಇದೆ ಧರ್ಮವನ್ನು ಕೆಟ್ಟ ಉದ್ದೇಶಕ್ಕೆ ಬಳಸಬಾರದು. ಧರ್ಮಾಂಧತೆ ತೊಲಗಿಸಲು ವಿದ್ಯಾಭ್ಯಾಸ ಮುಖ್ಯ. ಎಲ್ಲ ಧರ್ಮದ ಅರಿವು ಎಲ್ಲರಲ್ಲಿ ಇದ್ದಲ್ಲಿ ಸಮಾನತೆಯಿಂದ ಬಾಳಲು ಸಾದ್ಯ. ವಾಟ್ಸಪ್‌ ಅನ್ನೇ ಯುನಿವರ್ಸಿಟಿ ಎಂದು ಭಾವಿಸಿದವರು ಇದ್ದಾರೆ. ತಪ್ಪು ಸಂದೇಶವನ್ನು ವೈರಲ್ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಇಸ್ಲಾಂ ಧರ್ಮ ಗುರು ಲತೀಫ್ ಷರೀಫ್ ಮಾತನಾಡಿ,‌ 'ಚಂದ್ರಯಾನ ಯಶಸ್ಸಿಗೆ ಸರ್ವ ಧರ್ಮದ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ. ಇನ್ಮುಂದೆ ಚಂದ್ರನಲ್ಲಿ ಗಣಪತಿ, ಈದ್ ಹಬ್ಬ ಆಚರಣೆ ಮಾಡುವಂತಾಗಬೇಕು. ಆಯಾ ಧರ್ಮದ ಕುರಿತು ಸಂದೇಶ ನೀಡಬೇಕಾದ್ದು ಧರ್ಮ ಗುರುಗಳು. ರಾಜಕಾರಣಿಗಳು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಅವರು ಧಾರ್ಮಿಕ ವಿಚಾರಗಳಿಗೆ ಬರಬಾರದು' ಎಂದರು.

ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಸೆ.28 ರಂದು ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ ಈದ್ ಮೆರವಣಿಗೆಯನ್ನು ಜಾಮಿಯಾ ಮಸೀದಿಯು ಅಕ್ಟೋಬರ್ 1ಕ್ಕೆ ಮುಂದೂಡಿದೆ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅಕ್ಟೋಬರ್ 1ರಂದು ವಿಸರ್ಜನೆಯಾಗಬೇಕಿದ್ದ ಓಂ ಗಣಪತಿಯನ್ನು ಸೆ.30ರಂದು ಮಾಡಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳು ದೇಶಕ್ಕೆ ಸೌಹಾರ್ದತೆಯ ಬಹು ದೊಡ್ಡ ಸಂದೇಶ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ವಕೀಲ ಕೆ.ಪಿ.ಶ್ರೀಪಾಲ್, ರೈತ ಸಂಘದರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಎಂ.ಶ್ರೀಕಾಂತ್, ಸೇರಿದಂತೆ ಪ್ರಮುಖರಿದ್ದರು. 

 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News