ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಪ್ರಾಮಾಣಿಕ ಕಳಕಳಿ ಇಲ್ಲ: ಬಿ.ವೈ.ವಿಜಯೇಂದ್ರ

Update: 2023-12-07 10:43 GMT

Photo: facebook

ಬೆಂಗಳೂರು: ರಾಜ್ಯ ಸರಕಾರಕ್ಕೆ ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಕೊಡಬೇಕೆಂಬ ಪ್ರಾಮಾಣಿಕ ಕಳಕಳಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಋೋಪಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,  ಒಂದು ಕಡೆ ರೈತರಿಗೆ ಪರಿಹಾರ ಕೊಡುತ್ತಿಲ್ಲ. ಪರಿಹಾರ ಕೊಡಲು ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಮುಖ್ಯಮಂತ್ರಿಗಳು ಮೊನ್ನೆ ಘೋಷಿಸಿದ್ದಾರೆ. ಮತ್ತೊಂದು ಕಡೆ ಎಸ್‍ಸಿ, ಎಸ್‍ಟಿ ಸಮುದಾಯಕ್ಕಾಗಿ ಬಳಸಬೇಕಿದ್ದ ಎಸ್‍ಇಪಿ/ಟಿ ಎಸ್‍ಪಿ ಹಣವನ್ನು ಬೇರೆಡೆಗೆ ಬಳಸಿಕೊಳ್ಳುತ್ತಾರೆ. ರಾಜ್ಯ ಸರಕಾರದ ಆದ್ಯತೆ ಸಂಕಷ್ಟದಲ್ಲಿರುವ ರೈತರಲ್ಲ. ಅದನ್ನು ಬಿಟ್ಟು ರಾಜಕಾರಣ ಮಾಡುವುದು, ಅಲ್ಪಸಂಖ್ಯಾತರನ್ನು ಓಲೈಸುವುದೇ ಅದರ ಪ್ರಥಮ ಆದ್ಯತೆಯಾಗಿದೆ ಎಂದು ಟೀಕಿಸಿದರು.

ಬರಗಾಲದ ಕುರಿತ ಎಲ್ಲ ಸಂಗತಿಗಳನ್ನು ಕೂಡ ಸದನದಲ್ಲಿ ಚರ್ಚಿಸುತ್ತೇವೆ.  50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ 136 ಶಾಸಕರ ಬೆಂಬಲ ಇದೆ. ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡರೂ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂಬ ಧಾಟಿಯಲ್ಲಿ ರಾಜ್ಯ ಸರಕಾರ ಆಡಳಿತ ಮಾಡುತ್ತಿದೆ. ಇವೆಲ್ಲವನ್ನೂ ಪ್ರಶ್ನಿಸುತ್ತೇವೆ ಎಂದರು.

ಗುಲ್ಬರ್ಗದಲ್ಲಿ ಮಣಿಕಂಠ ರಾಠೋಡ್ ವಿಚಾರದಲ್ಲಿ ಮತ್ತೊಂದೆಡೆ ಪ್ರಿಯಾಂಕ್ ಖರ್ಗೆಯವರು ಪೊಲೀಸ್ ವರದಿ ಆಧಾರದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರು ಹೇಳಿದ್ದೆಲ್ಲವೂ ಸತ್ಯವೆಂದು ನಂಬುವುದಿಲ್ಲ. ಬಿಜೆಪಿ ಅಧ್ಯಕ್ಷನಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ರಕ್ಷಣೆ ಮಾಡುವುದು ನನ್ನ ಕರ್ತವ್ಯವಾಗಿದೆ. ಇದು ನನ್ನ ಪ್ರಥಮ ಆದ್ಯತೆ.  ಬಿಜೆಪಿ ಗೊಡ್ಡು ಬೆದರಿಕೆಗಳಿಗೆ ಹೆದರುವ ಪಕ್ಷವಲ್ಲ.  ಇವೆಲ್ಲವನ್ನೂ ನಾವು ಎದುರಿಸುತ್ತೇವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News