ಸುರತ್ಕಲ್: ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಢಿಕ್ಕಿ; ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

Update: 2023-09-30 08:44 GMT

ಸುರತ್ಕಲ್: ರಸ್ತೆ ಬದಿ‌ ನಿಲ್ಲಿಸಿದ್ದ ಟಿಪ್ಪರ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೊಸಬೆಟ್ಟು ಎಚ್.ಪಿ. ಪೆಟ್ರೋಲ್ ಬಂಕ್‌ ಬಳಿ ಶನಿವಾರ ಮುಂಜಾನೆ 3:30ರ ಸುಮಾರಿಗೆ ನಡೆದಿದೆ.

ಮೃತಪಟ್ಟವರನ್ನು ತಮಿಳುನಾಡು ಮೂಲದ ಅರ್ಜುನ್ ಎಂದು ಗುರುತಿಸಲಾಗಿದೆ. ಅರ್ಜುನ್ ಅವರು ಶನಿವಾರ ಬೆಳಗ್ಗಿನ ಜಾವ ಮಂಗಳೂರು ಕಡೆಯಿಂದ ಸುರತ್ಕಲ್ ಕಡೆಗೆ ತಮಿಳುನಾಡು ರಿಜಿಸ್ಟ್ರೇಶನ್‌ ಹೊಂದಿರುವ ಫಾರ್ಚುನರ್ ಕಾರಿನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಹೊಸಬೆಟ್ಟು ಎಚ್.ಪಿ. ಪೆಟ್ರೋಲ್ ಬಂಕ್ ನ‌ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಈಚರ್ ಟಿಪ್ಪರ್ ಲಾರಿಗೆ ಕಾರು ಢಿಕ್ಕಿ ಹೊಡೆಯಿತೆನ್ನಲಾಗಿದೆ.

ಘಟ‌ನೆಯಲ್ಲಿ ಕಾರು ಚಲಾಯಿಸುತ್ತಿದ್ದ ಅರ್ಜುನ್ ಅವರ ತಲೆಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಸಹ ಸವಾರರಾದ ಮುಹಮ್ಮದ್ ಫಿಝಾನ್ ಮತ್ತು ಅನಿರುದ್ಧ್ ನಾಯರ್ ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ‌. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ‌

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News