ಪ್ರೇಮಿಗಳು ಮನೆಬಿಟ್ಟು ಹೋಗಿದ್ದಕ್ಕೆ ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಥಳಿತ

Update: 2023-12-19 18:24 GMT

Photo: freepik

ರಾಣಿಬೆನ್ನೂರು: ಬೆಳಗಾವಿಯ ವಂಟಮೂರಿಯ ಪ್ರಕರಣ ಮಾಸುವ ಮುನ್ನ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮುದೇನೂರಿನಲ್ಲಿ ಪ್ರೇಮಿಗಳು ಮನೆ ಬಿಟ್ಟು ಹೋಗಿದ್ದಕ್ಕೆ ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ, ಥಳಿಸಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ಯುವತಿಯ ಮನೆಯವರು ಯುವಕನ ಮಾವ, ಮುದೇನೂರು ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ ಕಬ್ಬಾರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಥಳಿಸಿದ್ದಾರೆ ಎಂದು ಹಲಗೇರಿ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.

ಮುದೇನೂರಿನ ಯುವಕ ಮತ್ತು ಚಳಗೇರಿಯ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಪರಸ್ಪರರ ಮನೆಗಳಲ್ಲಿ ಒಪ್ಪಿಗೆ ಸಿಗದ ಕಾರಣ ಮನೆಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ. ನಂತರ ಯುವತಿಯ ಕಡೆಯವರು ಬೈಕ್‌ ಮತ್ತು ಕಾರಿನಲ್ಲಿ ಸೋಮವಾರ ರಾತ್ರಿ ಯುವಕನ ಮನೆಗೆ ನುಗ್ಗಿ, ಗಲಾಟೆ ಮಾಡಿ ದಾಂಧಲೆ ಎಬ್ಬಿಸಿದ್ದಾರೆ ಎನ್ನಲಾಗಿದೆ. ನಂತರ ಯುವಕನ ಮಾವ ಪ್ರಶಾಂತ ಅವರನ್ನು ಥಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಡಿಸಲು ಬಂದ ಹೆಣ್ಣುಮಕ್ಕಳನ್ನು ಎಳೆದಾಡಿ, ಹಣ ಮತ್ತು ಚಿನ್ನಾಭರಣವನ್ನು ಕಿತ್ತುಕೊಂಡಿದ್ದಾರೆ ಎನ್ನಲಾಗಿದೆ. ನಂತರ ರಾಣೆಬೆನ್ನೂರಿನ ದನದ ಮಾರುಕಟ್ಟೆಗೆ ಪ್ರಶಾಂತ ಅವರನ್ನು ಕರೆದೊಯ್ದು, ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News