ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುತ್ತೇವೆ : ಕುಮಾರಸ್ವಾಮಿ

Update: 2024-10-10 15:41 GMT

ಎಚ್.ಡಿ.ಕುಮಾರಸ್ವಾಮಿ 

ಬೆಂಗಳೂರು: ‘ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿ ನಾಯಕತ್ವದಲ್ಲಿ ಕಾಂಗ್ರೆಸ್ ಕಟ್ಟಿ ಹಾಕಲಾಗಿದೆ. ಅದೇ ರೀತಿ ಚನ್ನಪಟ್ಟಣ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಬೇಕಿದೆ. ಒಮ್ಮತದ ಎನ್‍ಡಿಎ ಅಭ್ಯರ್ಥಿ ಹಾಕಿದರೆ ಇದು ಸುಲಭ. ಈ ಮಾತನ್ನು ನಾನು ಯೋಗೇಶ್ವರ್ ಅವರಿಗೆ ಹೇಳಿದ್ದೇನೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಾರ್ಯಕರ್ತರ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಮಯದಲ್ಲಿ ತಾವು ಮಂಡ್ಯದಿಂದ ಸ್ಪರ್ಧಿಸುವ ಮೊದಲು ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡುವ ಬಗ್ಗೆ ಯಾವುದೇ ಚರ್ಚೆ ಅಥವಾ ಒಪ್ಪಂದ ಆಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು..

ಯೋಗೇಶ್ವರ್‍ಗೆ ಅಥವಾ ಇನ್ನಾರಿಗೆ ಆಗಲಿ ಕ್ಷೇತ್ರವನ್ನು ಬಿಟ್ಟುಕೊಡಬೇಕೆಂದು ಬಿಜೆಪಿ ವರಿಷ್ಠರ ಜತೆ ಒಪ್ಪಂದವಾಗಿರಲಿಲ್ಲ. ಉಪಚುನಾವಣೆ ಸಮೀಪಿಸುತ್ತಿದೆ. ಆವತ್ತು ಏನೇನು ನಡೆಯಿತು ಎಂದು ಹೇಳಲೇಬೇಕು. ಜನರಿಗೆ ಸತ್ಯ ಗೊತ್ತಾಗಬೇಕೆಂಬುದು ನನ್ನ ಉದ್ದೇಶ. ಬೆಂಗಳೂರು ಗ್ರಾಮಾಂತರ ಲೋಕಾಸಭೆ ಕ್ಷೇತ್ರದಿಂದ ಡಾ.ಸಿ.ಎನ್.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಲು ಕೇಂದ್ರದ ಗೃಹ ಸಚಿವ ಅಮಿತ್ ಶಾ ಮೂಲ ಕಾರಣ. ಹೀಗಾಗಿಯೇ ಅವರನ್ನು ಅಭ್ಯರ್ಥಿ ಮಾಡಲಾಯಿತು. ಅದಕ್ಕೂ ಮೊದಲು ನಾನು ಯೋಗೇಶ್ವರ್‌ ಗೆ ಗ್ರಾಮಾಂತರ ಕ್ಷೇತ್ರಕ್ಕೆ ಅಭ್ಯರ್ಥಿ ಆಗಬೇಕೆಂದು ಹೇಳಿದ್ದೆ ಎಂದು ವಿವರಿಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರಾಗಬೇಕೆಂದು ನಾನು ಇನ್ನೂ ನಿರ್ಧರಿಸಿಲ್ಲ. ಕಾರ್ಯಕರ್ತರ ಸಭೆಗಳನ್ನು ಮಾಡಲಾಗುತ್ತಿದೆ. ಅಂತಿಮವಾಗಿ ರಾಜ್ಯ ಮತ್ತು ದಿಲ್ಲಿ ಮಟ್ಟದ ನಾಯಕರ ಜತೆ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು. ಬಿಜೆಪಿ ನಾಯಕರು, ಕಾರ್ಯಕರ್ತರು ಸಭೆ ಮಾಡಿರುವುದರಲ್ಲಿ ತಪ್ಪೇನಿಲ್ಲ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ. ಕಾರ್ಯಕರ್ತರ ಅಭಿಪ್ರಾಯದಂತೆ ನಾನು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ನಾನು ಪ್ರಾಥಮಿಕ ಹಂತದಲ್ಲಿಯೇ ಯೋಗೇಶ್ವರ್‌ ಗೆ ಹೇಳಿದ್ದೆ. ಜೆಡಿಎಸ್ ಬಿಜೆಪಿ ಒಂದಾದರೆ ಇಲ್ಲಿ ಗೆಲ್ಲುವುದು ಕಷ್ಟವಲ್ಲ. ಮೈತ್ರಿಗೆ ಮೂಲ ಕಾರಣರು ಯಾರು ಎಂಬುದನ್ನು ನಾನು ಬೀದಿಯಲ್ಲಿ ಚರ್ಚೆ ಮಾಡಲಾರೆ. ಹಾಗೆ ಮಾಡುವುದು ರಾಷ್ಟ್ರೀಯ ನಾಯಕರಿಗೆ ಅಪಮಾನ ಮಾಡಿದಂತೆಯೇ. ಯೋಗೇಶ್ವರ್ ಮೈತ್ರಿ ಬಗ್ಗೆ ಯಾರ ಜತೆ ಚರ್ಚೆ ನಡೆಸಿದ್ದರು ಎಂಬುದು ನನಗೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಿಖಿಲ್ ಕುಮಾರಸ್ವಾಮಿ ಈ ಚುನಾವಣೆಗೆ ನಿಲ್ಲಬೇಕು ಅಥವಾ ನಿಲ್ಲಿಸಬೇಕೆಂಬ ಬಗ್ಗೆ ಈ ಕ್ಷಣದವರೆಗೂ ಚರ್ಚೆ ನಡೆದಿಲ್ಲ, ನಾನು ತೀರ್ಮಾನ ಮಾಡಿಲ್ಲ. ನನ್ನ ಉದ್ದೇಶ ಇಲ್ಲಿ ಕಾಂಗ್ರೆಸ್ ಸೋಲಬೇಕು, ಎನ್‍ಡಿಎ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು. ಈ ಹಿನ್ನೆಯಲ್ಲಿ ಸೂಕ್ತ ಅಭ್ಯರ್ಥಿ ಯಾರು ಎಂಬುದನ್ನು ಎರಡೂ ಪಕ್ಷಗಳ ನಾಯಕರು ಕೂತು ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಎಸ್‌ಐಟಿ ಭಜನೆ: ‘ಕೋವಿಡ್ ಹಗರಣ ತನಿಖೆಗೆ ಎಸ್‌ಐಟಿ ರಚನೆ ಭಜನೆ ಒಂದೂವರೆ ವರ್ಷದಿಂದ ನಡೆಯುತ್ತಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರೇ ಇದ್ದರು. ಆಗ ಏನು ಮಾಡುತ್ತಿದ್ದರು. ಆಗಿನಿಂದ ಏನು ಮಾಡುತ್ತಿದ್ದರು? ತನಿಖೆ ಯಾಕೆ ಮಾಡಲಿಲ್ಲ? ಇದೀಗ ಮುಡಾ, ವಾಲ್ಮೀಕಿ ಹಗರಣಗಳು ಸರಕಾರವನ್ನು ಸುತ್ತಿಕೊಂಡಿವೆ. ಅದಕ್ಕೆ ಜನರ ಗಮನ ಬೇರೆಡೆಗೆ ಸೆಳೆಯುವ ಹುನ್ನಾರದಿಂದ ಎಸ್‌ಐಟಿ ಭಜನೆ ನಡೆಯುತ್ತಿದೆ’

-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News