ಜಾತಿ ಗಣತಿ ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವುದು ದೊಡ್ಡ ದುರಂತ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Update: 2023-12-24 18:26 GMT

ದಾವಣಗೆರೆ : ರಾಜ್ಯ ಕಾಂಗ್ರೆಸ್‌ ಸರಕಾರ ಜಾತಿ ಗಣತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವುದು ದೊಡ್ಡ ದುರಂತ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಎಂಬಿಎ ಕಾಲೇಜು ಮೈದಾನ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಜಾತಿ ಗಣತಿ ಬೇಕು. ಆದರೆ ಈಗ ಆಗುತ್ತಿರುವುದು ರಾಜಕೀಯ ಬೇಳೆ ಬೇಯಿಸಿಕೊಳ್ಳವ ಜಾತಿ ಗಣತಿ ಸದ್ದು ಮಾಡುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ರಾಜಕಾರಣ ಮಾಡಲು ಹಲವಾರು ಮಾರ್ಗಗಳು ಇವೆ ಎಂದರು.

ಇತ್ತೀಚಿನ ದಿನಗಳಲ್ಲಿ ಜಾತಿ ಗಣತಿ ಹೆಸರಿನಲ್ಲಿ ಸಮಾಜ ಬೇರ್ಪಡಿಸುವ ಹುನ್ನಾರ ನಡೆಯುತ್ತದೆ. ಜಾತಿ ಗಣತಿ ಬಗ್ಗೆ ಸ್ಪಷ್ಟ ನೀತಿ ಇರಬೇಕು. ಈಗ ಕರ್ನಾಟಕದಲ್ಲಿ ಜಾತಿ ಗಣತಿ ನಡೆದಿದೆ, ಅದು ಜಾತಿ ಗಣತಿಯಲ್ಲ. ಯಾವ್ಯಾವ ಸಮುದಾಯದಲ್ಲಿ ಶಿಕ್ಷಣ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವರದಿ ತಯಾರಿ ಮಾಡಲಾಗಿದೆ. ಆದರೆ ಅದನ್ನೇ ಜಾತಿ ಗಣತಿ ಎಂದು ಆದೇಶ ಹೊರಡಿಸಲು ಸರ್ಕಾರ ಮುಂದಾಗಿದೆ. ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ಹಲವಾರು ಬಾರಿ ಪ್ರಸ್ತಾಪ ಮಾಡಿದೆ ಎಂದರು.

ವೀರಶೈವ ಲಿಂಗಾಯತರನ್ನ ಹೊರತುಪಡಿಸಿ ರಾಜ್ಯ ಆಳುವುದು ಯಾರಿಂದಲೂ ಸಾಧ್ಯವಿಲ್ಲ. ಅಂದರೆ ನಮ್ಮೊಂದಿಗೆ ಎಲ್ಲಾ ತಳ ಸಮುದಾಯ ಸೇರಿವೆ. ಅದರೆ, ನಮ್ಮೊಂದಿಗಿನ ಒಳಪಂಗಡಗಳನ್ನು ಭೇರ್ಪಡಿಸುವ ಕೆಲಸ ಆಗಿತ್ತು. ಸಂಸ್ಕಾರದ ತಿರುಳು ಗಟ್ಟಿಯಾಗಿ ನಮ್ಮಲ್ಲಿ ಉಳಿದಿದೆ. ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಬಾರದು ಪಾರದರ್ಶಕ, ವೈಜ್ಞಾನಿಕ ಜನಗಣತಿ ಆಗಬೇಕು. ಸಮಾಜಕ್ಕೆ ಅನ್ಯಾಯ ಆಗಬಾರದು ಎಂದರು.

ಮಹಾಸಭಾ ಅಂದರೆ ಇದೊಂದು ದೊಡ್ಡ ಸಂಸಾರ. ಮೊಮ್ಮಕ್ಕಳು, ಸೊಸೆಯಂದಿರು ಬಂಧಿಗಳಿರುವ ಕುಟುಂಬ. ಈ ಅಧಿವೇಶನ ಕಳೆದ ವರ್ಷ ಆಗಬೇಕಿತ್ತು. ಚುನಾವಣೆ ವರ್ಷ ಆದ ಹಿನ್ನಲೆಯಲ್ಲಿ ಈ ಬಾರಿ ಯಶಸ್ವಿಯಾಗಿ ಅಧಿವೇಶನ ನಡೆದಿದೆ. ಅಧಿವೇಶನ ಯಶಸ್ಸಿಗಾಗಿ ಶಿವಶಂಕರಪ್ಪ ಅವರನ್ನು ಅಭಿನಂದಿಸುತ್ತೇನೆ. ದೂರದೃಷ್ಠಿ ಸಮಾಜ ನಮ್ಮದು. ಯಾರು ಏನೇ ಷಡ್ಯಂತ್ರ ಮಾಡಲಿ, ಯಾರು ಆತಂಕ ಪಡುವ ಅಗತ್ಯವಿಲ್ಲ. ನಮ್ಮ ವಿಚಾರದಾರೆ, ಆತ್ಮಸಾಕ್ಷಿ ನಮ್ಮನ್ನೆಲ್ಲ ಒಗ್ಗೂಡಿಸಲಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಎಲ್ಲೆಡೆ ಹೆಣ್ಮಕ್ಕಳಿಗೆ ಹಾಸ್ಟೆಲ್ ಮಾಡಿದ್ದು ಮಠಮಾನ್ಯಗಳು. ಯಾರು ಸಹ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಮ್ಮನ್ನು ಹೊರತುಪಡಿಸಿ ರಾಜ್ಯ ಆಳೋದು, ಕಾರ್ಯಕ್ರಮ ರೂಪಿಸುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News