ನನ್ನ ಮಗಳಿಗೆ ಆದಂತಹ ಘಟನೆ ಬೇರೆ ಹೆಣ್ಣು ಮಕ್ಕಳಿಗೆ ಆಗಬಾರದು: ಸೌಜನ್ಯಳ ತಾಯಿ ಕಣ್ಣೀರು

Update: 2023-07-17 15:11 GMT

ಮೈಸೂರು,ಜು.17: ಕಳೆದ 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಅಪ್ರಾಪ್ತ ಬಾಲಕಿ ಸೌಜನ್ಯಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಕ್ಕೆ ನ್ಯಾಯ ದೊರಕಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ದಸಂಸ, ರೈತ ಸಂಘ, ಒಡನಾಡಿ ಸೇವಾಸಂಸ್ಥೆ, ವಕೀಲರ ಸಂಘ, ಜನಜಾಗೃತಿ ವೇದಿಕೆ, ಜನಾಂದೋಲನ ಮಹಾಮೈತ್ರಿ, ಕಾಮಿರ್ಕ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಮೆಟ್ರೊಪೋಲ್ ವೃತ್ತದಲ್ಲಿರುವ ನಂಜರಾಜ ಬಹದ್ದೂರ್ ಛತ್ರದ ಬಳಿ ಸೋಮವಾರ ಜಮಾಯಿಸಿದ ಪ್ರತಿಭಟನಾಕಾರರು, ಸೌಜನ್ಯ ಪ್ರಕರಣಕ್ಕೆ ನ್ಯಾಯಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಸೌಜನ್ಯ ಕುಟುಂಬ ಮತ್ತು ಸಂತೋಷ್ ರಾವ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವ ಪ್ರಬಲ ಶಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು, ಪ್ರಕರಣದ ಸಾಕ್ಷಿ ನಾಶ ಮಾಡಿರುವ ಪೊಲೀಸರು ಮತ್ತು ವೈದ್ಯರ ವಿರುದ್ಧ ಉಗ್ರ ಶಿಕ್ಷೆಯಾಗಬೇಕು ಎಂದು ಘೋಷಣೆಗಳನ್ನು ಕೂಗಿದರು. ಜೊತೆಗೆ ಸೌಜನ್ಯ ಸಾವಿಗೆ ನ್ಯಾಯ ದೊರಕಿಸಿ ಎಂಬ ಪ್ಲೇ ಕಾರ್ಡ್‍ಗಳನ್ನು ಹಿಡಿದು ರಸ್ತೆಯುದ್ದಕ್ಕೂ ಮೆರವಣಿಗೆ ನಡೆಸಿ ನಂತರ ಗಾಂಧಿ ವೃತ್ತ ತಲುಪಿದರು. 

ಪ್ರತಿಭಟನಾಕಾರರನ್ನುದ್ದೇಶಿಸಿ ಮೃತ ಸೌಜನ್ಯ ತಾಯಿ ಕುಸುಮವತಿ ಮಾತನಾಡಿ ನನ್ನ ಮಗಳ ಸಾವಿನ ನ್ಯಾಯಕ್ಕಾಗಿ ಕಳೆದ 11 ವರ್ಷಗಳಿಂದ ಕರೆದ ಕಡೆಗಳಿಗೆಲ್ಲಾ ಹೋಗುತ್ತಿದ್ದೇನೆ. ಆದರೂ ನನ್ನ ಮಗಳ ಸಾವಿಗೆ ನ್ಯಾಯ ಸಿಕ್ಕಿಲ್ಲ ಎಂದು ಕಣ್ಣೀರಿಟ್ಟರು. ಅಂದು ಬೆಳಿಗ್ಗೆ ಬರಿ ಹೊಟ್ಟೆಯಲ್ಲಿ ಕಾಲೇಜಿಗೆ ಹೋದ ಮಗಳು ಹೆಣವಾಗಿ ಬಂದದ್ದನ್ನು ನೋಡಿ ನಾನು ದಿಗ್ಬ್ರಾಂತಳಾಗಿದ್ದೇನೆ. ನನ್ನ ಮಗಳಿಗೆ ಆದಂತಹ ಘಟನೆ ಬೇರೆ ಯಾವ ಹೆಣ್ಣು ಮಕ್ಕಳಿಗೂ ಆಗಬಾರದು, ಅದಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ನನ್ನ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ. ನನಗೆ ನ್ಯಾಯ ಸಿಗುತ್ತದೆ ಎಂದು ಈಗ ಮೈಸೂರಿಗೆ ಬಂದಿದ್ದೇನೆ ಎಂದು ಹೇಳಿದರು.

ನಮ್ಮ ಊರು ಧರ್ಮಸ್ಥಳ ಅಲ್ಲ, ರಾಕ್ಷಸವನ, ನಮ್ಮಮನೆಗೆ ಬರುವ ಹೆಣ್ಣು ಮಕ್ಕಳಿಗೆ ದಯಮಾಡಿ ಇಲ್ಲಿಗೆ ಬರಬೇಡಿ ಎಂದು ಹೆಳುತ್ತೇನೆ. ಯಾಕೆಂದರೆ ಇಲ್ಲಿ ಅಷ್ಟೊಂದು ಕ್ರೂರ ಮೃಗಗಳು ಇವೆ. ಅಲ್ಲಿ ಅದೆಷ್ಟೊ ಕೊಲೆಗಳು ನಡೆದಿವೆ. ಯಾವುದಕ್ಕೂ ನ್ಯಾಯ ಸಿಕ್ಕಿಲ್ಲ, ನನ್ನ ಮಗಳ ಸಾವಿಗೆ ನ್ಯಾಯಬೇಕು ಎಂದು ಹೇಳಿದರು.

ಸೌಜನ್ಯಳ ಸಹೋದರಿ ಮಾತನಾಡಿ, 'ನನ್ನ ಅಕ್ಕನನ್ನು ಕಳೆದುಕೊಂಡು ನಮ್ಮ ಮನೆ ಶೋಕಸಾಗರದಲ್ಲಿ ಮುಳುಗಿದೆ. ಅವಳನ್ನು ಕಳೆದುಕೊಂಡ ನೋವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾವು ಏನು ಮಾತನಾಡಬೇಕು ಎಂದು ಗೊತ್ತಾಗುತ್ತಿಲ್ಲ. ಅಕ್ಕನನನ್ನು ಕಳೆದುಕೊಂಡು ನೋವಲ್ಲಿದ್ದೇವೆ. ಅಕ್ಕನಿಗೆ ನ್ಯಾಯ ಕೊಡಿ' ಎಂದು ಬಾವುಕರಾದರು.

ಸಂತೋಷ್ ರಾವ್ ಸಹೋದರ ಸಂಜಯ್ ರಾವ್ ಮಾತನಾಡಿ, ನನ್ನ ತಮ್ಮ ಬಹಳ ಒಳ್ಳೆಯ ಹುಡು ದೇವಸ್ಥಾನಕ್ಕೆ ಹೋದವನನ್ನು ಹಿಡಿದು ಸೌಜನ್ಯ ಕೊಲೆ ಪ್ರಕರಣದಲ್ಲಿ ಫಿಟ್ ಮಾಡಿದರು. ಅವನಿಗೆ ಇದ್ಯಾವುದೇ ವಿಚಾರ ಗೊತ್ತಿಲ್ಲ. ನಾವು ಕಳೆದ 11 ವರ್ಷದಿಂದ ಪಟ್ಟ ನೋವು ದೇವರಿಗೆ ಗೊತ್ತು. ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನಾವು ಕುಗ್ಗಿಹೋಗಿದ್ದೇವೆ. ನನ್ನ ತಮ್ಮ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾನೆ. ಅವನ ನೋವನ್ನು ನಾನು ವ್ಯಕ್ತಪಡಿಸುತ್ತಿದ್ದೇನೆ. ಅವನಿಗೆ ಪೊಲೀಸರು ಕೊಟ್ಟ ನೋವು ಹೇಳತೀರದಾಗಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟ್ಯಾನ್ಲಿ, ಪರಶು, ಮಾಜಿ ಮೇಯರ್ ಪುರುಷೋತ್ತಮ್, ದಸಂಸ ಮುಖಂಡರುಗಳಾದ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಆಲಗೂಡು ಶಿವಕುಮಾರ್, ಹರಿಹರ ಆನಂದಸ್ವಾಮಿ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ನಿಂಗರಾಜ್ ಮಲ್ಲಾಡಿ, ಕಲ್ಲಹಳ್ಳಿ ಕುಮಾರ್, ಪ್ರಗತಿಪರ ಚಿಂತಕರುಗಳಾದ ಜಿ.ಪಿ.ಬಸವರಾಜು, ಉಗ್ರನರಸಿಂಹೇಗೌಡ, ಜನಾರ್ಧನ್ (ಜನ್ನಿ), ರಂಗಕರ್ಮಿ ಸಿ.ಬಸವಲಿಂಗಯ್ಯ, ನಾ.ದಿವಾಕರ, ಕೃಷ್ಣ ಜನಮನ, ಪತ್ರಕರ್ತ ಟಿ.ಗುರುರಾಜ್, ಕೃಷ್ಣಪ್ರಸಾದ್, ವಕೀಲರಾದ ಬಾಬುರಾಜ್, ಮಹೇಶ್, ಮೈಸೂರು ವಿವಿ ಸಂಶೋಧಕರ ಸಂಘದ ನಟರಾಜ್ ಶಿವಣ್ಣ, ಸೋಸಲೆ ಮಹೇಶ್, ಹೊರಳ್ಳಿ ಆನಂದ, ಪಂಡಿತಾರಾದ್ಯ, ಅಹಿಂದ ಜವರಪ್ಪ, ಎಚ್.ಎ.ನಂಜುಂಡಸ್ವಾಮಿ, ವೆಂಕಟರಮಣ, ನಿವೃತ್ತ ಪ್ರಾಂಶುಪಾಲ ಕುಮಾರ್, ಕಾರ್ಮಿಕ ಮುಖಂಡರುಗಳಾದ ಸೀಮಾ, ಆಯಿಷಾ, ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸಬೀಹಾ ಭೂಮಿಗೌಡ, ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News