ಕೆಮ್ಮಣ್ಣು: ಅ.27ಕ್ಕೆ ಗಣಪತಿ ಸಹಕಾರಿ ಸಂಘದ ‘ಶತಾಭಿವಂದನಂ’
ಉಡುಪಿ: ಕಲ್ಯಾಣಪುರ ಸಮೀಪದ ಕೆಮ್ಮಣ್ಣಿನಲ್ಲಿ ದಿ.ಜನಾಬ್ ಅಲಿ ಸಾಹೇಬ್ ಹಾಗೂ ದಿ.ಪಿ.ವೆಂಕಟಕೃಷ್ಣ ರಾವ್ ಇವರಿಂದ 1923ರಲ್ಲಿ ಸ್ಥಾಪನೆಗೊಂಡ ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಅ.27ರಂದು ‘ಶತಾಭಿವಂದನಂ’ ಸಮಾರೋಪ ಸಂಭ್ರಮವನ್ನು ಆಯೋಜಿಸಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಾಭಿವಂದನಂ ರವಿವಾರ ಬೆಳಗ್ಗೆ 8ರಿಂದ ಸಂಜೆ 6 ರವರೆಗೆ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದರು.
ಮಂಗಳೂರಿನ ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಶತಮಾನೋತ್ಸವ ಸಮಾ ರಂಭವನ್ನು ಉದ್ಘಾಟಿಸಲಿದ್ದು, ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ದೀಪ ಪ್ರಜ್ವಲನ ಮಾಡಲಿದ್ದಾರೆ. ಮಣಿಪಾಲದ ಉದ್ಯಮಿ ಟಿ.ಅಶೋಕ್ ಪೈ ಅವರು ವಿವಿಧ ಫಲಾನುಭವಿಗಳಿಗೆ ಕೊಡುಗೆಗಳನ್ನು ವಿತರಿಸಲಿದ್ದು, ಕೆಮ್ಮಣ್ಣು ಸಂತ ಥೆರೆಸಾ ಚರ್ಚಿನ ಧರ್ಮಗುರುಗಳಾದ ವಂ. ಫಿಲಿಪ್ ನೇರಿ ಅರ್ಹೆನಾ ಅವರು ಶುಭಾಶಂಸನೆ ಮಾಡಲಿದ್ದಾರೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಯಶಪಾಲ್ ಸುವರ್ಣ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಸಹಕಾರಿ ಯೂನಿ ಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್ ಮುಂತಾದವರು ಉಪಸ್ಥಿತರಿರುವರು ಎಂದರು.
ಶತಮಾನೋತ್ಸವ ಸಂಭ್ರಮದಲ್ಲಿ ಶತಾಯುಷಿ ಸನ್ಮಾನ, ಆರೋಗ್ಯ- ರಕ್ತದಾನ ಶಿಬಿರ, ಸಹಕಾರಿ ಹಾಗೂ ನವೋದಯ ಕ್ರೀಡಾಕೂಟ, ವಿವಿಧ ಶಾಲೆ ಹಾಗೂ ಸಂಘಸಂಸ್ಥೆಗಳಿಗೆ ನೆರವು, ಕೊಡುಗೆಗಳನ್ನು ವಿತರಿಸಲಾಗುವುದು ಎಂದರು.
ಅಂದು ಬೆಳಗ್ಗೆ 9ಗಂಟೆಗೆ ಸಮಾಜ ಸೇವಕಿ ವರೋನಿಕಾ ಕರ್ನೇಲಿಯೊ ಅವರು ಸಹಕಾರಿ ಜಾಥಾಕ್ಕೆ ಚಾಲನೆ ನೀಡಲಿ ದ್ದಾರೆ. ಕಾರ್ಯಕ್ರಮದ ಅಂಗವಾಗಿ ಯಕ್ಷನಾಟ್ಯ ವೈಭವ, ತೋನ್ಸೆ ಪುಷ್ಕಳ ಕುಮಾರ್ರಿಂದ ಸಂಗೀತ ರಸಮಂಜರಿ, ಕುದ್ರೋಳಿ ಗಣೇಶರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಅಫ್ಜಲ್ ಸಾಹೇಬ್, ನಿರ್ದೇಶಕರಾದ ರಾಘವೇಂದ್ರ ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಮಹೇಶ್ ಸಾಲ್ಯಾನ್, ಶಾಖಾ ವ್ಯವಸ್ಥಾಪಕ ಕಿಶೋರ್ ಶೆಟ್ಟಿ ಉಪಸ್ಥಿತ ರಿದ್ದರು.