ಅ.26: ನಡೂರು ಶಿವರಾಮ ಶೆಟ್ಟಿ ಜನ್ಮ ಶತಮಾನೋತ್ಸ ಸಮಾರೋಪ

Update: 2024-10-24 16:04 GMT

ಉಡುಪಿ: ನಡೂರು ಶ್ರೀವಾಣಿ ವಿದ್ಯಾಭಿವೃದ್ಧಿ ಸಂಸ್ಥೆ ಹಾಗೂ ನಡೂರು ದಿ.ಶಿವರಾಮ ಶೆಟ್ಟಿ ಜನ್ಮ ಶತಮಾ ನೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ ಏಳು ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ನಡೂರು ಶಿವರಾಮ ಶೆಟ್ಟಿ ಇವರ ಪುತ್ಥಚಳಿ ಅನಾವರಣ, ನೂತನ ಶಾಲಾ ವಾಹನ ಹಸ್ತಾಂತರ ಸೇರಿದಂತೆ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭವು ಅ.26ರ ಶನಿವಾರ ನಡೂರಿನ ಶ್ರೀವಾಣಿ ಪ್ರೌಢ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ರಾಜಾರಾಮ್ ಶೆಟ್ಟಿತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣದ ವಸ್ತು ಪ್ರದರ್ಶನ ಹಾಗೂ ಕಲಿಕೋತ್ಸವದೊಂದಿಗೆ ನಮ್ಮ ಹಿರಿಯ ಕರಾವಳಿ ಕೃಷಿ ಉಪಕರಣಗಳ ಪ್ರದರ್ಶನವೂ ಇದರೊಂದಿಗೆ ನಡೆಯಲಿದೆ ಎಂದು ವಿವರಿಸಿದರು.

ಅ.26ರಂದು ಬೆಳಗ್ಗೆ 10ಗಂಟೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಡೂರು ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಭೋಜ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್.ಸಂತೋಷ್ ಹೆಗ್ಡೆ, ಬೆಂಗಳೂರು ನಾರಾಯಣ ಹೃದಯಾಲಯದ ಎಂಡಿ ಡಾ.ದೇವಿ ಶೆಟ್ಟಿ, ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ದಿ.ಶಿವರಾಮ ಶೆಟ್ಟಿ ಜನ್ಮಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ.ಸುಧಾಕರ ಶೆಟ್ಟಿ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಶೇಡಿಕೊಡ್ಲು ವಿಠಲ ಶೆಟ್ಟಿ, ಎನ್.ಹರೀಂದ್ರನಾಥ್ ಶೆಟ್ಟಿ, ಸಹ ಕಾರ್ಯ ದರ್ಶಿ ದಿನಕರ ಶೆಟ್ಟಿ ಬೈಕಾಡಿ, ಖಜಾಂಚಿ ಅಶೋಕ್‌ಕುಮಾರ್ ಶೆಟ್ಟಿ, ಗೌರವ ಮಾರ್ಗದರ್ಶಕ ಪ್ರೊ.ಸಖಾರಾಮ ಸೋಮಯಾಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News