ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತ್ಯು ಆರೋಪ: ಕುಂದಾಪುರ ಸರಕಾರಿ ಆಸ್ಪತ್ರೆ ಎದುರು ಅಹೋರಾತ್ರಿ ಪ್ರತಿಭಟನೆ

Update: 2023-11-21 13:14 GMT

ಕುಂದಾಪುರ : ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ನವಜಾತ ಶಿಶು ಮೃತಪಟ್ಟಿರುವುದಾಗಿ ಆರೋಪಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆ ಎದುರು ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆಯು ಉಡುಪಿ ಜಿಲ್ಲಾಧಿಕಾರಿ ಗಳ ಭರವಸೆ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ತಾತ್ಕಾಲಿಕವಾಗಿ ಹಿಂಪಡೆದುಕೊಳ್ಳಲಾಯಿತು.

ಗಂಗೊಳ್ಳಿಯ ಶ್ರೀನಿವಾಸ ಎಂಬವರ ಪತ್ನಿ ಜ್ಯೋತಿ ಹೆರಿಗೆಯ ನಿಮಿತ್ತ ಕುಂದಾಪುರ ಸರಕಾರಿ ಆಸ್ಪತ್ರೆಗೆ ನ.17ರಂದು ದಾಖಲಾಗಿದ್ದು, ಆ ಸಮಯ ಜ್ಯೋತಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಸಂಬಂಧಪಟ್ಟ ವೈದ್ಯರು ಸರಿಯಾದ ಚಿಕಿತ್ಸಾ ವ್ಯವಸ್ಥೆ ಮಾಡಿರುವುದಿಲ್ಲ. ಇದರಿಂದ ನ.20 ರಂದು ಬೆಳಗ್ಗೆ ಆಸ್ಪತ್ರೆಯ ವೈದ್ಯ ಡಾ.ಚಂದ್ರ ಹೆರಿಗೆ ಮಾಡಿಸುವ ವೇಳೆ ಗಂಡು ಮಗು ಮೃತಪಟ್ಟಿತ್ತೆಂದು ದೂರಲಾಗಿದೆ. ಮಗುವಿನ ಮರಣದಲ್ಲಿ ಸಂಶಯ ಇರುವುದಾಗಿ ಶ್ರೀನಿವಾಸ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಅಹೋರಾತ್ರಿ ಪ್ರತಿಭಟನೆ: ಈ ಕ್ರಮವನ್ನು ಖಂಡಿಸಿ ಸೋಮವಾರ ಸಂಜೆ ಯಿಂದ ಪೋಷಕರು ಹಾಗೂ ಗಂಗೊಳ್ಳಿ ಗ್ರಾಮ ಸ್ಥರು, ಕುಂದಾಪುರ ನಾಗರಿಕರು ಆಸ್ಪತ್ರೆಯ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದು, ಇದರ ನೇತೃತ್ವ ವಹಿಸಿದ್ದ ಯಶವಂತ ಗಂಗೊಳ್ಳಿ ಮಾತನಾಡಿ, ಕರುಳಬಳ್ಳಿ ಸುತ್ತಿಕೊಂಡು ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದು, ಪ್ರಕರಣ ದಾಖಲಿಸುವುದಾಗಿ ತಿಳಿಸಿದಾಗ ಅವರು ನಮಗೆ ಬೆದರಿಕೆ ಹಾಕಿದ್ದಾರೆ. ಹಿಂದೆಯೂ ಇಂತಹ ಅನೇಕ ಪ್ರಕರಣಗಳನ್ನು ಬೆದರಿಸಿಯೇ ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದರು.

ಸ್ಥಳಕ್ಕೆ ಡಿಸಿ, ಡಿಎಚ್‌ಓ ಬಾರದೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ರಾತ್ರಿ ವೇಳೆ ಆಗಮಿಸಿದ ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕುಂದಾ ಪುರ ಎಸಿ, ಡಿಎಚ್‌ಓ ಹಾಗೂ ತಹಸೀಲ್ದಾರ್ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಅಹೋರಾತ್ರಿ ಮೌನ ಪ್ರತಿಭಟನೆ ಮುಂದುವರೆಸಿದರು.

ಸ್ಥಳಕ್ಕೆ ಡಿಸಿ ಎಸ್ಪಿ ಆಗಮನ: ಮಂಗಳವಾರ ಬೆಳಿಗ್ಗೆ ಆಸ್ಪತ್ರೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ವೈದ್ಯರ ಅಮಾನತಿಗೆ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ನಡೆಸಿದರು.

ಶೀಘ್ರವೇ ತಂಡ ರಚಿಸಿ ವಾರದೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು. ಇದಕ್ಕೂ ಮೊದಲು ಎಸ್ಪಿ, ಡಿಸಿಯವರು ನೊಂದ ಮಹಿಳೆಯನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ರಾಜೇಶ್ವರಿ, ಜಿಪಂ ಸಿಇಓ ಎಚ್.ಪ್ರಸನ್ನ, ತಹಸೀಲ್ದಾರ್ ಶೋಭಾ ಲಕ್ಷ್ಮೀ ಎಚ್.ಎಸ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಪ್ರೇಮಾನಂದ, ತಾಲೂಕು ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಸಕ ಡಾ.ರಾಬರ್ಟ್ ರೆಬೆಲ್ಲೋ ಹಾಜರಿದ್ದರು. ಸ್ಥಳದಲ್ಲಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾತ್ಕಾಲಿಕ ವಾಪಾಸ್ಸು: ಜಿಲ್ಲಾಧಿಕಾರಿ, ಎಸ್ಪಿ, ಡಿಎಚ್‌ಓ ಭರವಸೆ ಹಿನ್ನೆಲೆಯಲ್ಲಿ ಒಂದು ವಾರದ ಮಟ್ಟಿಗೆ ಪ್ರತಿಭಟನೆ ಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಮಾತು ಉಳಿಸಿಕೊಳ್ಳದಿದ್ದರೆ ಮತ್ತೆ ಹೋರಾಟ ಕೈಗೊಳ್ಳ ಲಾಗುವುದು. ಒಂದು ವರ್ಷದಲ್ಲಿ ಹೀಗೆಯೇ ಬೆಳಕಿಗೆ ಬಾರದ ಸಾಕಷ್ಟು ಪ್ರಕರಣಗಳು ನಡೆದಿವೆ. ಅದರ ಬಗ್ಗೆಯೂ ತನಿಖೆ ನಡೆಸಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಯಶವಂತ ಗಂಗೊಳ್ಳಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರಾದ ಬಸವ ಖಾರ್ವಿ, ನಿರ್ಮಲಾ ಪೂಜಾರಿ, ತಾಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಭಾಗದ ಪ್ರಮುಖರಾದ ಯಶವಂತ್ ಗಂಗೊಳ್ಳಿ, ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಸದಾಶಿವ ಕಂಚುಗೋಡು, ಗೋಪಾಲ ಖಾರ್ವಿ ದಾವನಮನೆ, ದಿನೇಶ್ ಖಾರ್ವಿ, ರಾಘವೇಂದ್ರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

ತನಿಖಾ ತಂಡ ರಚನೆ: ಡಿಸಿ

ಮಗು ಸಾವಿನ ಪ್ರಕರಣದಲ್ಲಿ ನುರಿತ ತಜ್ಞರ ತಂಡವನ್ನು ರಚಿಸಿಕೊಂಡು ತನಿಖೆ ನಡೆಸಿ ವೈದ್ಯರ ನಿರ್ಲಕ್ಷವಿದ್ದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ನಮ್ಮಲ್ಲಿ ಸ್ತ್ರೀರೋಗ ತಜ್ಞರ ಸಂಖ್ಯೆ ವಿರಳ ಇದೆ. ಯಾವುದೇ ಒಬ್ಬ ವೈದ್ಯರ ಮೇಲೆ ಕ್ರಮಕೈಗೊಳ್ಳಬೇಕಾದರೆ ನಿಯಮಾ ನುಸಾರ ಕ್ರಮಕೈಗೊಳ್ಳಬೇಕು. ತನಿಖೆ ನಡೆಸಿ ಸರಕಾರದ ಗಮನಕ್ಕೆ ತರಲಾಗುತ್ತದೆ. ತಾತ್ಕಾಲಿಕವಾಗಿ ಸಂಬಂಧಪಟ್ಟ ವೈದ್ಯರನ್ನು ಬೇರೆಡೆಗೆ ವರ್ಗಾಯಿಸಲಾಗುವುದು. ಇಲ್ಲಿ ಬೇರೆ ವೈದ್ಯರ ನೇಮಕ ಮಾಡುತ್ತೇವೆ ಎಂದು ಅವರು ಹೇಳಿದರು.

‘ಕುಟುಂಬದವರು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಿಯಮದನ್ವಯ ಆ ದೂರನ್ನು ಮೆಡಿಕಲ್ ಬೋರ್ಡ್‌ಗೆ ಹಸ್ತಾಂತರಿಸಿ ಅವರಿಂದ ವರದಿ ಬಂದ ಬಳಿಕ ಕಾನೂನು ಕ್ರಮಕೈಗೊಳ್ಳುತ್ತೇವೆ. ನಾವು ಕಾನೂನು, ನಿಯಮದಡಿ ಕೆಲಸ ಮಾಡುತ್ತಿದ್ದೇವೆ’

-ಡಾ.ಅರುಣ್ ಕೆ., ಎಸ್ಪಿ ಉಡುಪಿ

‘ಮದುವೆಯಾಗಿ 4 ವರ್ಷಗಳ ಬಳಿಕ ನಮಗೆ ಈ ಮಗು ಹುಟ್ಟಿದೆ. ಇದೀಗ ಈ ಮಗು ನಮ್ಮಿಂದ ದೂರವಾಗುವ ಮೂಲಕ ನಾವು ಕಟ್ಟಿಕೊಂಡ ಕನಸು ಎಲ್ಲವೂ ನುಚ್ಚುನೂರಾಗಿದೆ. ವೈದ್ಯರ ಬೇಜವಾಬ್ದಾರಿಯಿಂದ ಈ ದುರ್ಘಟನೆ ನಡೆದಿದ್ದು 9 ತಿಂಗಳು ಹೊತ್ತು ಹೆತ್ತ ಪತ್ನಿ ನೊಂದಿದ್ದಾರೆ. ನಮಗಾದ ಪರಿಸ್ಥಿತಿ ಇನ್ನೂ ಯಾರಿಗೂ ಆಗಬಾರದು’

-ಶ್ರೀನಿವಾಸ ಖಾರ್ವಿ, ಮೃತ ಮಗುವಿನ ತಂದೆ








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News