ದೇವರ ಆರಾಧನೆ ಬಿಟ್ಟು ಬುದ್ಧ ಚಿಂತನೆ ಮಾಡಿದರೆ ದಲಿತರ ಅಭಿವೃದ್ಧಿ: ಜಯನ್ ಮಲ್ಪೆ

Update: 2023-12-06 07:16 GMT

ಮಲ್ಪೆ, ಡಿ.6: ದಲಿತರು ಹಿಂದೆಯೂ ಹಿಂದೂಗಳಾಗಿರಲಿಲ್ಲ ಮತ್ತು ಮುಂದೆಯೂ ಹಿಂದೂಗಳಾಗಿರುವುದಿಲ್ಲ. ದಲಿತರು ತಮ್ಮ ಮನೆಗಳಲ್ಲಿರುವ ದೇವರ ಫೋಟೋಗಳನ್ನು ತೆಗೆದು ಬುದ್ಧ ಚಿಂತನೆ ಮಾಡಿದರೆ ಮಾತ್ರ ಸಮಾಜ ಪರಿವರ್ತನೆಯಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅಂಬೇಡ್ಕರ್ ಯುವಸೇನೆಯ ಮಲ್ಪೆ ನಗರ ಶಾಖೆ ವತಿಯಿಂದ ಬುಧವಾರ ಮಲ್ಪೆಯ ಸರಸ್ವತಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಸಂವಿಧಾನಶಿಲ್ಪಿಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 67ನೇ ಮಹಾ ಪರಿನಿಬ್ಬಾಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶತಶತಮಾನಗಳಿಂದ ದಲಿತರು ತಮ್ಮ ಮನೆಗಳಲ್ಲಿ ದೇವರ ಪೋಟೋಗೆ ಪೂಜೆ ಮಾಡಿದರೂ, ಅವರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ, ಕೊಲೆ, ಸುಲಿಗೆ, ಅತ್ಯಾಚಾರ, ಸಾವು, ನೋವುಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಎಲ್ಲ ದೇವಾಧಿದೇವತೆಗಳ ಸಂಹಾರಕರಾಗಿ ಮುನ್ನಡೆಯುತ್ತಾರೆ. ವೈದಿಕರು ದಲಿತರ ರಾಜಕೀಯ ಅಧಿಕಾರವನ್ನು ಕಬಳಿಸಿ, ಅವರನ್ನು ಶಾಶ್ವತ ಗುಲಾಮರನ್ನಾಗಿಸಲೆಂದೇ ದೇವರನ್ನು ಸೃಷ್ಟಿಸಿದ್ದಾರೆ ಎಂದರು.

ಹೋರಾಟಗಾರ ಸುರೇಶ್ ಪಾಲನ್ ಮಾತನಾಡಿ, ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು, ಮರೆಯಾಗುತ್ತಿರುವ ಜೀವನಕ್ರಮಗಳು, ತಲ್ಲಣಗೊಳ್ಳುತ್ತಿರುವ ಸಿದ್ಧಾಂತಗಳ ರೋಗಕ್ಕೆ ಅಂಬೇಡ್ಕರ್ ವಿಚಾರಧಾರೆಯೇ ಮದ್ದಾಗಿದೆ. ಜನರ ಬದುಕನ್ನು ಹಸನು ಮಾಡಲು ಪ್ರಯತ್ನಿಸಿದ ಭಾರತದ ಏಕೈಕ ಭಾಗ್ಯವಿಧಾತ ಅಂಬೇಡ್ಕರ್ ಎಂದು ಹೇಳಿದರು.

ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿದರು.

ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವ ನಾಯಕರಾದ ಸಂತೋಷ್ ಕಪ್ಪೆಟ್ಟು, ಕೃಷ್ಣ ಶ್ರೀಯಾನ್, ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ದೀಪಕ್ ಕೊಡವೂರು, ಶಂಕರ್ ನೆರ್ಗಿ, ವಿನಯ ಬಲರಾಮ ನಗರ, ಭಗವಾನ್ ಮಲ್ಪೆ, ಶಶಿಕಲಾ ತೊಟ್ಟಂ, ಪ್ರಮೀಳಾ ಹರೀಶ್, ಕಲಾವತಿ, ಸಂಕಿ ತೊಟ್ಟಂ, ವಿನೋದ ಜಯರಾಜ್, ಸಂಧ್ಯಾ ನೆರ್ಗಿ, ಶಶಿ ತೊಟ್ಟಂ, ಗ್ಯಾಬ್ರಿಯಲ್, ಹರ್ಷಿಲ್ ಉಪಸ್ಥಿತರಿದ್ದರು. ಬಿ.ಎನ್.ಪ್ರಶಾಂತ್ ಸ್ವಾಗತಿಸಿದರು.

ಸುಶೀಲ್ ಕುಮಾರ್ ಕೊಡವೂರು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News