ಪಠ್ಯೇತರ ಪುಸ್ತಕಗಳನ್ನೂ ಓದಿ ಜ್ಞಾನ ಹೆಚ್ಚಿಸಿ: ಡಾ.ಸತೀಶ್ ಹೊಸಮನಿ
ಉಡುಪಿ, ಅ.5: ಪುಸ್ತಕಗಳು ಬದುಕಿನ ದಾರಿ ದೀಪವಾಗಿವೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳು ಮಾತ್ರವಲ್ಲದೆ ಪಠ್ಯೇತರ ಪುಸ್ತಕಗಳನ್ನೂ ಓದಿ ಜ್ಞಾನ ಹೆಚ್ಚಿಸಿ ಕೊಳ್ಳಬೇಕು ಎಂದು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್. ಹೊಸಮನಿ ಹೇಳಿದ್ದಾರೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿ ನಗರ ಮತ್ತು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಹಾಗೂ ಮೈಸೂರು ಬಾಲ್ಯ ಫೌಂಡೇಶನ್ ಮತ್ತು ಮೈಸೂರು ಆ್ಯಥ್ಲೆಟ್ಸ್ ಕ್ಲಬ್ನ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾ ಗ್ರಂಥಾಲಯ ಸಭಾಂಗಣ ದಲ್ಲಿ ಗುರುವಾರ ಆಯೋಜಿಸಲಾದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಪರಿಕರ ವಿತರಣೆ, ಸೈಕ್ಲಿಂಗ್ನಿಂದ ಆರೋಗ್ಯ ಅರಿವು, ಡಿಜಿಟಲ್ ಗ್ರಂಥಾಲಯ ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಎಲ್ಲ ವಿಷಯಗಳ ಜ್ಞಾನಕ್ಕೆ ಸಂಬಂಧಿಸಿದ ಅಮೂಲ್ಯ ಪುಸ್ತಕಗಳ ಭಂಡಾರ ಗ್ರಾಂಥಾಲಯಗಳಲ್ಲಿವೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ಬೇಕಾಗಿ ರುವ ಪುಸ್ತಕಗಳು ಇಲ್ಲಿವೆ. ವಿದ್ಯಾರ್ಥಿ ಸಮೂಹ ಇದರ ಸದುಪಯೋಗ ಪಡೆದು ಕೊಳ್ಳಬೇಕು. ಸೈಕಲಿಂಗ್ನಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಅಧ್ಯಕ್ಷತೆಯನ್ನು ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ವಹಿಸಿದ್ದರು. ಗ್ರಂಥಾಲಯ ಪ್ರಾಧಿಕಾರ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಪೌರಾಯುಕ್ತ ರಾಯಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಬೆಂಗಳೂರು ನಗರ, ಗ್ರಾಮಾಂತರ ಮತ್ತು ಮೈಸೂರು, ಮಂಗಳೂರು ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕರುಗಳಾದ ದಿವಾಕರ್, ಬಿ.ಮಂಜುನಾಥ್, ರಾಘವೇಂದ್ರ ಕೆ.ವಿ., ಚಂದ್ರಶೇಖರ್, ಡಿ.ಎಚ್.ಕೇಸರಿ, ಭಾರತೀಯ ಬಿಲ್ಡರ್ ಅಸೋಸಿಯೇಶನ್ ಸದಸ್ಯ ಎಚ್.ಎಸ್.ದೀಪಕ್, ನಿವೃತ್ತ ಸಹಾ ಯಕ ಪೊಲೀಸ್ ಆಯುಕ್ತ ಧನಂಜಯ್, ಸರಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಇಂದಿರಾ, ಉಡುಪಿ, ಮಂಗಳೂರು ಗ್ರಂಥಾಲಯಾಧಿಕಾರಿಗಳಾದ ಗಾಯತ್ರಿ, ಜಯಶ್ರೀ, ವಿಷಯ ಪರಿವೀಕ್ಷಕ ನಗರಾಜ್ ಉಪಸ್ಥಿತರಿದ್ದರು.
ಗ್ರಂಥಪಾಲಕಿ ರಂಜಿತಾ ಸಿ. ಡಿಜಿಟಲ್ ಗ್ರಂಥಾಲಯದ ಮಾಹಿತಿ ಕಾರ್ಯ ಗಾರ ನಡೆಸಿಕೊಟ್ಟರು. ಮುಖ್ಯ ಗ್ರಂಥಾಲ ಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಎಫ್ಡಿಎ ಶಕುಂತಲ ಕುಂದರ್ ವಂದಿಸಿದರು.