ಕುಂದಾಪುರ: ಅಜ್ಜನ ಅಂತಿಮ ದರ್ಶನಕ್ಕೆ ಬರುತ್ತಿದ್ದ ಮೊಮ್ಮಗ ಅಪಘಾತಕ್ಕೆ ಬಲಿ

Update: 2023-11-29 05:47 GMT

ನಾರಾಯಣ ಪೂಜಾರಿ, ನಿತೀಶ್ ಪೂಜಾರಿ

ಕುಂದಾಪುರ, ನ.29: ಅಜ್ಜ ಮೃತಪಟ್ಟ ವಿಷಯ ತಿಳಿದು ಅಂತಿಮ ದರ್ಶನಕ್ಕೆ ಚಾಮರಾಜನಗರದಿಂದ ಆಗಮಿಸುತ್ತಿದ್ದ ಮೊಮ್ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಕುಂದಾಪುರದಲ್ಲಿ ನಡೆದಿದೆ.

ಆಜ್ರಿ ಗ್ರಾಮದ ಚೌಕುಳಮಕ್ಕಿ ನಿವಾಸಿ ಚೆನ್ನ ಪೂಜಾರಿ ಎಂಬವರ ಏಕೈಕ ಪುತ್ರ ನಿತೀಶ್ ಪೂಜಾರಿ (20) ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕ. ಇವರು ಚಾಮರಾಜನಗರದ ಸರಕಾರಿ ವೈದ್ಯಕೀಯ ಕಾಲೇಜಿನ 2ನೆ ವರ್ಷದ ವಿದ್ಯಾರ್ಥಿಯಾಗಿದ್ದರು.

ನಿತೀಶ್ ಅವರ ಅಜ್ಜ, ಕುಂದಾಪುರ ಶೇಡಿಮನೆ ಗ್ರಾಮದ ಪಾಟ್ಲಮಕ್ಕಿ ನಿವಾಸಿ ನಾರಾಯಣ ಪೂಜಾರಿ(70) ಸೋಮವಾರ ಮೃತಪಟ್ಟಿದ್ದರು. ವಿಷಯ ತಿಳಿದ ನಿತೀಶ್ ಪೂಜಾರಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಗಮಿಸುವುದಾಗಿ ಹೇಳಿದ್ದರು. ಅವಸರದಲ್ಲಿ ಊರಿಗೆ ಬರುವುದು ಬೇಡ ಎಂದು ಮನೆಯವರು ಹೇಳಿದ್ದರೂ ಅಜ್ಜನ ಮೇಲಿನ ಪ್ರೀತಿಯಿಂದ ಅವರು ಚಾಮರಾಜನಗರದಿಂದ ಬೈಕಿನಲ್ಲಿ ಊರಿಗೆ ಹೊರಟಿದ್ದರು. ಈ ಸಂದರ್ಭ ಚಾಮರಾಜನಗರ ತಾಲೂಕಿನ ಪಣ್ಯದಹಂಡಿ ಬಳಿ ತಲುಪಿದಾಗ ರಸ್ತೆ ಮಧ್ಯದಲ್ಲಿದ್ದ ಹಂಪ್ ಗಮನಕ್ಕೆ ಬಾರದ ಕಾರಣ ಬೈಕ್ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದ ನಿತೀಶ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಯುವಕನ ಮೃತದೇಹವನ್ನು ತಂದು ಶೇಡಿ ಮನೆಯಲ್ಲಿ (ತಾಯಿಯ ತಂದೆ ಮನೆ)ಅಜ್ಜ-ಮೊಮ್ಮಗನ ಅಂತ್ಯ ಸಂಸ್ಕಾರವನ್ನು ಜತೆಯಾಗಿ ನೆರವೇರಿಸಲಾಯಿತು.

ಅಪಘಾತದ ಬಗ್ಗೆ ಚಾಮರಾಜನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News