ಪ್ರಾಧ್ಯಾಪಕರ ಅಧ್ಯಯನಶೀಲತೆಯಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯ: ಪ್ರೊ.ಧರ್ಮ
ಉಡುಪಿ, ಅ.16: ಪ್ರಾಧ್ಯಾಪಕರ ಅಧ್ಯಯನಶೀಲತೆಯ ಯುವ ಮನಸ್ಸಿನಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯವೇ ಹೊರತು ಪಠ್ಯಕ್ರಮದ ಬದಲಾವಣೆಯಿಂದ ಸಾಧ್ಯವಿಲ್ಲ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿಯ ಪದಪ್ರದಾನ ಸಮಾರಂಭವನ್ನು ಬುಧವಾರ ಕಾಲೇಜಿನ ಮುದ್ದಣ ಮಂಟಪದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಾಧ್ಯಾಪಕರು ಸದಾ ಅಧ್ಯಯನಶೀಲರಾಗಬೇಕು. ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು. ಇತ್ತೀಚಿನ ವರ್ಷಗಳಲ್ಲಿ ಶಾಲಾ ಕಾಲೇಜು ಗಳು ಹೆಚ್ಚುತ್ತಿರುವುದರಿಂದ ಶಿಕ್ಷಣದ ಗುಣಮಟ್ಟದ ಬಗ್ಗೆ ಚಿಂತನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಂದು ಸಮಾಜಕ್ಕೆ ಉತ್ತಮ ಶಿಕ್ಷಕರ ಅಗತ್ಯ ಹೆಚ್ಚಿದ್ದು, ವಿದ್ಯಾರ್ಥಿಗಳು ಶಿಕ್ಷಕ ವೃತ್ತಿಯನ್ನು ಹೆಚ್ಚೆಚ್ಚು ಆಯ್ಕೆ ಮಾಡಿ ಕೊಳ್ಳಬೇಕು ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವಹಿಸಿದ್ದರು. ಎಜಿಇ ಕಾರ್ಯದರ್ಶಿ ವರದ ರಾಯ ಪೈ, ಶ್ರೀಮೋಹನ್ದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗ ಪೈ ಮಾತನಾಡಿದರು. ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕ, ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿಯ ಲಿಖಿತಾ ಪೂಜಾರಿ, ನಿಶಾಂತ್ ಕುಮಾರ್, ಟಿ.ನಿವೇದಿತಾ ಪೈ., ಆದಿತ್ಯಾ ಕೆ.ವಿ., ನಿಹನ್ ಅಲಿ ಬಾರಕೂರು, ಪೃಥ್ವಿ ಎಂ., ಗೌರಿ ನಾಯಕ್, ಪ್ರಥಮ್ ಶಂಭು, ಜೋಸ್ನಾ ಎಸ್.ಜಾನ್, ದಿನೇಶ್ ಶೆಟ್ಟಿ, ಸೌಂದರ್ಯ ಬಿ.ಎನ್. ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾನ ಅಧಿಕಾರಿ ಪ್ರೊ.ಅರುಣ್ ಕುಮಾರ್ ಬಿ. ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನ ಮಂಡಳಿ ಅಧ್ಯಕ್ಷ ಗಣೇಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅನ್ವಿತಾ ಎಂ. ತಂತ್ರಿ ವಂದಿಸಿದರು. ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.