ಬಾರಕೂರು: ವಿಜಯನಗರ ತುಳುವ ಮನೆತನದ ಶಾಸನಗಳ ಅಧ್ಯಯನ

Update: 2024-10-16 14:39 GMT

ಬ್ರಹ್ಮಾವರ, ಅ.16: ಬಾರಕೂರಿನ ಭಂಡಾರಕೇರಿ ಮಠದಲ್ಲಿರುವ ವಿಜಯ ನಗರ-ತುಳುವ ಮನೆತನಕ್ಕೆ ಸೇರಿದ ಎರಡು ಶಾಸನಗಳ ಅಧ್ಯಯನವನ್ನು ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಸ್ವಾಮೀಜಿಗಳ ಅನುಮತಿಯ ಮೇರೆಗೆ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆ ಸುಬ್ರಹ್ಮಣ್ಯ ಇಲ್ಲಿನ ಸ್ಥಾಪಕ ನಿರ್ದೇಶಕ ಡಾ.ಜಿ.ವಿ. ಕಲ್ಲಾಪುರ ಮತ್ತು ಉಪನಿರ್ದೇಶಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮಾಡಿದ್ದಾರೆ.

ಈ ಎರಡೂ ಶಾಸನಗಳ ಉಲ್ಲೇಖಗಳು ಎಲ್ಲಿಯೂ ಲಭ್ಯವಾಗದಿರುವುದ ರಿಂದ ಶಾಸನ ಅಧ್ಯಯನವನ್ನು ಕೈಗೊಳ್ಳ ಲಾಗಿದೆ. ಪ್ರಸ್ತುತ ಎರಡೂ ಶಾಸನಗಳು ತೃಟಿತಗೊಂಡಿದ್ದು, ಗ್ರಾನೈಟ್ ಶಿಲೆಯಲ್ಲಿ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಕೊರೆಯಲ್ಪಟ್ಟಿದೆ.

ವಿಜಯನಗರ ತುಳುವ ದೊರೆ ಕೃಷ್ಣದೇವರಾಯನ ಕಾಲಕ್ಕೆ(ಸಾ.ಶ.ವ 1509-29) ಸೇರುವ ಜೈನ ಶಾಸನವು, ಬಾರ ಕೂರಿನ ರಾಜ್ಯಪಾಲನಾಗಿದ್ದ ವಿಜೆಯಪ್ಪಒಡೆಯ್ನನ್ನು (ಸಾ.ಶ.ವ 1519-20) ಉಲ್ಲೇಖಿಸುತ್ತದೆ. ಪ್ರಸ್ತುತ 11 ಸಾಲುಗಳನ್ನು ಮಾತ್ರ ಹೊಂದಿರುವ ಈ ಶಾಸನದಲ್ಲಿ ಚಂದ್ರಗ್ರಹಣದ ಸಂದರ್ಭದಲ್ಲಿ ಮಾಡಿದ ದಾನದ ಕುರಿತಾಗಿ ತಿಳಿಸುತ್ತದೆ. ರಘುವರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಗೋಪಿನಾಥ ದೇವರ ಉಲ್ಲೇಖದ ಜೊತೆಗೆ ಕೊಟ್ಟಿರುವ ದಾನಕ್ಕೆ ಸಾಕ್ಷಿಯಾಗಿ ಹೊಸ ವಳಲ (ಪ್ರಸ್ತುತ ಹೊಸಾಳ) ಜಂನಿಗಳ ಮತ್ತು ವಿಜೆಯಪ್ಪಒಡೆಯರ ಒಪ್ಪ ಎಂದು ಹೇಳಿದೆ. ಶಾಪಾಶಯ ವಾಕ್ಯದೊಂದಿಗೆ ಶ್ರೀವಿತರಾಗ ಎಂಬ ಜಿನ ಒಕ್ಕಣೆಯೊಂದಿಗೆ ಶಾಸನ ಮುಕ್ತಾಯಗೊಂಡಿರುತ್ತದೆ.

ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯನ್ನು ಬಿಟ್ಟರೆ ಉಳಿದ ಕೆತ್ತನೆಗಳು ಸಂಪೂರ್ಣವಾಗಿ ನಶಿಸಿ ಹೋಗಿದೆ. ಗಣಪತಿ ಸ್ತುತಿ ಯೊಂದಿಗೆ ಪ್ರಾರಂಭವಾಗುವ ಈ ಶಾಸನದಲ್ಲಿ ಪ್ರಸ್ತುತ 18 ಸಾಲುಗಳು ಮಾತ್ರವಿದ್ದು, ಉಳಿದ ಭಾಗವು ನಶಿಸಿ ಹೋಗಿರುತ್ತದೆ. ಶಕವರುಷ 1460 (ಸಾ.ಶ.ವ 1539)ರ ವಿಕಾರಿ ಸಂವತ್ಸರದ ಮಾಘ ಶುದ್ಧ 15ರ ಕಾಲಮಾನವನ್ನು ಒಳಗೊಂಡಂತೆ ಬಾರಕೂರ ರಾಜ್ಯವನ್ನು ವಿಜಯನಗರ ತುಳುವ ದೊರೆ ಅಚ್ಯುತರಾಯನ(ಸಾ.ಶ.ವ 1529-42) ಆಜ್ಞೆಯಂತೆ ಸಾಂಕಣ ನಾಯಕನ ನಿರೂಪದಿಂದ ಕೊಂಡಮರಸ ಒಡೆಯನು ಆಳ್ವಿಕೆ ಮಾಡುತ್ತಿದ್ದ ಎಂಬುದು ತಿಳಿಯುತ್ತದೆ

ಅಚ್ಯುತರಾಯನ ಈ ಶಾಸನದಿಂದ ಮಹತ್ವದ ವಿಚಾರವೊಂದು ಬೆಳಕಿಗೆ ಬರುತ್ತದೆ. ಕೊಂಡಮರಸ ಒಡೆಯನ ಆಳ್ವಿಕೆಯ ಕಾಲವು 3 ವರ್ಷಗಳ ಕಾಲ ವಿಸ್ತಾರವಾಗಿರುವುದು. ಅಂದರೆ ಪ್ರಾರಂಭದ ದಿನಗಳಲ್ಲಿ ಈತನ ಕಾಲವನ್ನು ಸಾ.ಶ.ವ 1533-36 ಎಂದು ತಿಳಿಯಲಾಗಿತ್ತು. ಆದರೆ ಅಧ್ಯಯನ ಶಾಸನದ ಕಾಲಮಾನವು ಸಾ.ಶ.ವ 1539ಕ್ಕೆ ಸೇರುವುದರಿಂದ ಕೊಂಡಮರಸ 1539ರವರೆಗೆ ಅಥವಾ 1539ರಲ್ಲಿಯೂ ಆಳ್ವಿಕೆ ಮಾಡಿರುವುದು ಕಂಡುಬರುತ್ತದೆ. ಹಾಗಾಗಿ ಅಧ್ಯಯನ ಕ್ಕೊಳಗಾದ ಶಾಸನಗಳು ತುಳುನಾಡಿನ ಇತಿಹಾಸ ಅಧ್ಯಯನಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿವೆ ಎಂದು ಹೇಳಬಹುದು.

ಕ್ಷೇತ್ರಕಾರ್ಯ ಶೋಧನೆಯಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಉಡುಪಿ ಇದರ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ.ಕೃಷ್ಣಯ್ಯ ಹಾಗೂ ಮಠದ ಸಿಬ್ಬಂದಿ ಕುಶಾಲ ದೇವಾಡಿಗ, ಪುರಾತತ್ತ್ವ ಸಂಶೋಧನಾರ್ಥಿಗಳಾದ ಮಂಜುನಾಥ ನಂದಳಿಕೆ, ಶ್ರಾವ್ಯಾ ಆರ್. ಮತ್ತು ಯಶಸ್ವಿನಿ ಆಚಾರ್ಯ ಸಹಕಾರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News