ಬ್ರಹ್ಮಾವರ| ಜನರನ್ನು ಅಪಾರ ಸಂಖ್ಯೆಯಲ್ಲಿ ಆಕರ್ಷಿಸುತ್ತಿರುವ ಕೃಷಿ ಮೇಳದ ವೈವಿಧ್ಯಮಯ ವಸ್ತು ಪ್ರದರ್ಶನ

Update: 2024-10-26 15:11 GMT

ಬ್ರಹ್ಮಾವರ, ಅ.26: ಕಳೆದ ಒಂದೆರಡು ದಶಕದಿಂದ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹಯೋಗ ದೊಂದಿಗೆ ಕೇಂದ್ರದ ಆವರಣದಲ್ಲಿ ಆಯೋಜಿಸುತ್ತಿರುವ ಕೃಷಿ ಮೇಳ ವಾರ್ಷಿಕ ಕಾರ್ಯಕ್ರಮವಾಗಿ ಜಿಲ್ಲೆ ಹಾಗೂ ಆಸುಪಾಸಿನ ಹೊರಜಿಲ್ಲೆಗಳ ಕೃಷಿಕರು, ಕೃಷಿ ಆಸಕ್ತರು, ಹೈನುಗಾರರು ಹಾಗೂ ಸಾರ್ವಜನಿಕರನ್ನು ಸಾವಿರಾರು ಸಂಖ್ಯೆ ಯಲ್ಲಿ ಆಕರ್ಷಿಸುತ್ತಿದೆ.

2024ನೇ ಸಾಲಿನ ಕೃಷಿ ಮೇಳ ಇಂದು ಪ್ರಾರಂಭಗೊಂಡಿದ್ದು, ಮೊದಲ ದಿನವೇ ಜನರು ಜಾತ್ರೆಯೋಪಾದಿಯಲ್ಲಿ ಮೇಳಕ್ಕೆ ಭೇಟಿ ನೀಡಿ ಇಲ್ಲಿ ತೆರೆದಿರುವ 220ಕ್ಕೂ ಅಧಿಕ ವೈವಿಧ್ಯಮಯ ಮಳಿಗೆಗಳಿಗೆ ಭೇಟಿ ನೀಡುತಿದ್ದಾರೆ. ಎರಡು ದಿನಗಳ ಈ ಮೇಳ ವರ್ಷದಿಂದ ವರ್ಷಕ್ಕೆ ಅಧಿಕ ಜನರನ್ನು ತನ್ನತ್ತ ಆಕರ್ಷಿಸುತಿರುವುದು ವಿಶೇಷವಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಕೃಷಿ ಮೇಳವೊಂದು ಇಷ್ಟೊಂದು ಯಶಸ್ಸು ಪಡೆದ ಉದಾಹರಣೆ ಇಲ್ಲವೆನ್ನಬಹುದು.

ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಶಾಲ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಒಂದು ಸುತ್ತು ಬಂದರೆ ಜನರು ಈ ಮೇಳದ ಬಗ್ಗೆ ವರ್ಷವರ್ಷವೂ ಹೊಂದಿರುವ ಆಸಕ್ತಿ, ಕುತೂಹಲ ಅರಿವಿಗೆ ಬರುತ್ತದೆ. ವಯೋಮಾನದ ಪರಿವೆ ಇಲ್ಲದೇ ಹಿರಿಯ ಕೃಷಿಕರಿಂದ ಹಿಡಿದು ವಯೋವೃದ್ಧ ದಂಪತಿಗಳು, ಮಹಿಳೆಯರು, ಸ್ವಸಹಾಯ ಗುಂಪುಗಳ ಸದಸ್ಯೆಯರು, ಯುವಕರು, ಶಾಲಾ-ಕಾಲೇಜುಗಳ ಮಕ್ಕಳು ಗುಂಪುಗುಂಪಾಗಿ ಮಳಿಗೆಯಿಂದ ಮಳಿಗೆಗೆ ಎಡತಾಕುವುದನ್ನು ಕಾಣಬಹುದಾಗಿದೆ.

ಕೃಷಿಕರು ಬರುವುದು ಕೃಷಿ ವಲಯದಲ್ಲಿ ಆಗಿರುವ ಹೊಸ ಬೆಳವಣಿಗೆಯ ಕುರಿತು ತಿಳಿದುಕೊಳ್ಳಲು. ಮಾರುಕಟ್ಟೆಗೆ ಬಂದಿರುವ ಕೃಷಿಗೆ ಸಂಬಂಧಿಸಿದ ಹೊಸ ಯಂತ್ರಗಳ ಕುರಿತು, ಹೊಸ ಹೊಸ ತಳಿಗಳು ಹಾಗೂ ಕೃಷಿಯಲ್ಲಾಗುತ್ತಿರುವ ಹೊಸ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು. ಮೊದಲ ದಿನವೇ ಶಿವಮೊಗ್ಹ, ದಾವಣಗೆರೆ, ಉತ್ತರ ಕನ್ನಡ, ದಕ್ಷಿಣ ಕನ್ನಡಗಳಿಂದ ಸಾಕಷ್ಟು ಮಂದಿ ಕೃಷಿಕರು ಹಾಗೂ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿದ್ದಾರೆ.

ಈ ಬಾರಿ ಇಲ್ಲಿ ಸಹ್ಯಾದ್ರಿ ಸಪ್ತಮಿ, ಸಹ್ಯಾದ್ರಿ ಪಂಚಮುಖಿ, ಸಹ್ಯಾದ್ರಿ ಬ್ರಹ್ಮ ಎಂಬ ಭತ್ತದ ತಳಿಗಳನ್ನು ಪರಿಚಯಿಸಲಾ ಯಿತು. ಇದರೊಂದಿಗೆ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಿ ಬಿಡುಗಡೆ ಮಾಡಿರುವ ಕೃಷಿ ಯಂತ್ರೋಪಕರಣಗಳಾದ ಸುಧಾರಿತ ಕೊನೋ ವೀಡರ್, ಭತ್ತದಲ್ಲಿ ಕಳೆ ತೆಗೆಯುವ ಯಂತ್ರ, ಪವರ್ ಟಿಲ್ಲರ್ ಚಾಲಿತ ಮಣ್ಣು ದಬ್ಬುವ ಯಂತ್ರ ಹಾಗೂ ಕಾಡುಪ್ರಾಣಿಗಳ ಹಾವಳಿ ಕುರಿತು ಮಾಲಕರನ್ನು ಎಚ್ಚರಿಸುವ ಸ್ವಯಂ ಚಾಲಿತ ವ್ಯವಸ್ಥೆ ಮುಂತಾದ ಕೃಷಿ ಯಂತ್ರೋಪಕರಣಗಳು ಪ್ರದರ್ಶನದಲ್ಲಿದ್ದವು.

ಇದರೊಂದಿಗೆ ಕೃಷಿಯಲ್ಲಿ ಡ್ರೋನ್ ಬಳಕೆಯ ಬಗ್ಗೆ ಅದನ್ನು ಸಂಶೋಧಿ ಸಿದ ಡಾ.ನವೀನ್ ಎನ್.ಇ ಅವರು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಅಲ್ಲದೇ ಸಿಓ-4, 5 ಮತ್ತು ಸಿಓಎಫ್‌ಎಸ್-29, 31 ಹಾಗೂ ಸೂಪರ್ ನೇಪಿಯರ್ ಬೆಳೆಗಳ ಪ್ರಾತ್ಯಕ್ಷಿಕೆ, ತೆಂಗಿನಲ್ಲಿ ಬಹುಬೆಳೆ ಯೋಜನೆ, ಪೋಷಕಾಂಶಗಳ ನಿರ್ವಹಣೆ, ತೊಟಗಾರಿಕಾ ಬೆಳೆಗಳಲ್ಲಿ ಕಸಿ ಕಟ್ಟುವಿಕೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರ, ಅಜೋಲ್ಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷಿಕೆ ಸಹ ಇಲ್ಲಿ ನಡೆಯುತ್ತಿದೆ.

ಹೈನುಗಾರಿಕೆ, ಮೀನುಗಾರಿಕೆ, ಆಡು, ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆಗಳ ಪ್ರಾತ್ಯಕ್ಷಿಕೆ, ಮೌಲ್ಯಾದಾರಿತ ಆಹಾರ ಉತ್ಪನ್ನಗಳು ಮತ್ತು ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದನಾ ಘಟಕಗಳು, ಅಲಂಕಾರಿಕ ಮತ್ತು ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಕೃಷಿ ವಸ್ತು ಪ್ರದರ್ಶನ, ಪಶುಪಾಲನಾ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸುವ ಮಳಿಗೆಗಳು ಸೇರಿದಂತೆ ಸುಮಾರು 225ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಗಳಿಂದ ಸಾಕಷ್ಟು ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟವೂ ಇಲ್ಲಿದ್ದು, ಜನರು ವಿಶೇಷವಾಗಿ ಮಹಿಳೆಯರು ಪ್ರತಿಯೊಂದು ಮಳಿಗೆಗಳಿಗೂ ಭೇಟಿ ನೀಡಿ ಪ್ರತಿಯೊಂದರ ವಿವರಗಳನ್ನು ಪಡೆಯುತಿದ್ದು ಸಾಮಾನ್ಯವಾಗಿತ್ತು.

ಬ್ರಹ್ಮಾವರ ಆಸುಪಾಸಿನ ಹಲವು ಶಾಲೆಗಳ ಅಧ್ಯಾಪಕರು, ತಮ್ಮ ಮಕ್ಕಳನ್ನು ಕರೆತಂದು ಅಲ್ಲಿರುವ ಪ್ರತಿಯೊಂದು ವಸ್ತು ಗಳ ಕುರಿತು ಅವರಿಗೆ ವಿವರಿಸುತ್ತಿರುವುದು ಕಂಡುಬಂತು. ಮಕ್ಕಳೂ ಉತ್ಸಾಹದಿಂದಲೇ ಪ್ರತಿಯೊಂದು ಮಾಹಿತಿ, ವಿವರ ಗಳನ್ನು ತಾವು ತಂದ ನೋಟ್‌ಪುಸ್ತಕಗಳಲ್ಲಿ ಬರೆದುಕೊಳ್ಳುತಿದ್ದರು. ಮಕ್ಕಳೂ ಕುತೂಹಲದಿಂದ ಪ್ರತಿಯೊಂದು ಯಂತ್ರೋಪಕರಣಗಳು, ಅವುಗಳ ಕಾರ್ಯವೈಖರಿ ಕುರಿತು ಪ್ರಶ್ನೆಗಳ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸುತಿರುವುದು ಕಂಡಬಂತು.

ಕೃಷಿ ಮೇಳದಲ್ಲಿ ಮೀನುಗಾರಿಕಾ ಇಲಾಖೆಯ ಮಳಿಗೆ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಮೀನು ಸಾಕಾಣಿಕೆಯ ಕುರಿತು ಇಲ್ಲಿ ಸಾಕಷ್ಟು ಮಾಹಿತಿ ಗಳನ್ನು ನೀಡಲಾಗುತ್ತಿದೆ. ಅಕ್ವೇರಿಯಂನಲ್ಲಿ ಮೀನು ಸಾಕಾಣಿಕೆ, ಪಂಜರ ಕೃಷಿ, ಕೃಷಿಯೊಂದಿಗೆ ಜಲಕೃಷಿ ಕುರಿತು ಮಾಹಿತಿ ಇಲ್ಲಿ ಸಿಗುತ್ತಿದೆ. ಸಿಹಿನೀರಿನಲ್ಲಿ ಮರೆಲೆ, ಮಡಂಜಿ ಮೀನು ಸಾಕಾಣಿಕೆ, ಸಿಹಿನೀರಿನ ಕೊಳದಲ್ಲಿ ಗೆಂಡೆ ಮೀನಿನ ಸಾಕಾಣಿಕೆ ಕುರಿತು ಇಲ್ಲಿ ಮಾಹಿತಿ ಲಭ್ಯವಿದೆ.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News