ಉಪಶಾಮಕ ಆರೈಕೆ ಸೇವೆಗಳ ಜಾಗೃತಿಗಾಗಿ ನಡಿಗೆ
ಉಡುಪಿ, ಅ.26: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆ ವಿಭಾಗದ ವತಿಯಿಂದ ಮಣಿಪಾಲ ಮಾಹೆ ವಿದ್ಯಾರ್ಥಿ ವ್ಯವಹಾರಗಳ ಸಹಯೋಗದೊಂದಿಗೆ ಉಪಶಾಮಕ ಆರೈಕೆ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ಜಾಗೃತಿ ನಡಿಗೆ ಕಾರ್ಯಕ್ರಮವನ್ನು ಶನಿವಾರ ಉಡುಪಿ ನಗರದಲ್ಲಿ ಆಯೋಜಿಸಲಾಗಿತ್ತು.
ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಆರಂಭವಾದ ನಡಿಗೆ ಜಾಥಾವು ಕೆಎಂ ಮಾರ್ಗ, ಉಡುಪಿ ನ್ಯಾಯಾಲಯ ಮತ್ತು ಜೋಡುಕಟ್ಟೆ ವೃತ್ತದ ಮಾರ್ಗವಾಗಿ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಮುಕ್ತಾಯ ಗೊಂಡಿತು. ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಉಪಶಾಮಕ ಆರೈಕೆ ರೋಗಿಗಳ ಕುಟುಂಬಗಳು ಸಹಿತ 500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಮಾತನಾಡಿ, ಈ ದಿನವು ಜಾಗೃತಿ ಮೂಡಿಸುವುದಷ್ಟೇ ಅಲ್ಲ, ವಿಶ್ವಾದ್ಯಂತ ಉಪಶಾಮಕ ಆರೈಕೆ ಸೇವೆಗಳನ್ನು ಹೆಚ್ಚಿಸುವ ನೀತಿಗಳನ್ನು ಬದಲಾಯಿಸಲು ಮತ್ತು ಬೆಂಬಲಿಸ ಬೇಕಾಗಿದೆ ಎಂದು ತಿಳಿಸಿದರು.
ವಾಕಥಾನ್ಗೆ ಚಾಲನೆ ನೀಡಿದ ಅದಾನಿ ಪವರ್ ಲಿಮಿಟೆಡ್ನ ಸ್ಟೇಷನ್ ಹೆಡ್ ಶ್ರೀಧರ್ ಗಣೇಶನ್ ಮಾತನಾಡಿ, ಗಂಭೀರ ವಾದ ಆರೋಗ್ಯ ಸವಾಲುಗಳನ್ನು ಎದುರಿಸುತ್ತಿರುವವರ ಜೀವನದಲ್ಲಿ ನಾವು ಬದಲಾವಣೆಯನ್ನು ಮಾಡಬಹುದು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಾಹೆ ಆರೋಗ್ಯ ವಿಜ್ಞಾನಗಳ ಸಹ ಕುಲಪತಿ ಡಾ.ಶರತ್ ರಾವ್ ವಹಿಸಿದ್ದರು. ಉದ್ಯಮಿ ಜಿ.ಶಂಕರ್, ಮಾಹೆ ಬೋಧನಾ ಆಸ್ಪತ್ರೆಯ ಸಿಓಓ ಡಾ.ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಸ್ವಾಗತಿಸಿದರು. ಸಹ ಡೀನ್ ಮತ್ತು ಉಪಶಾಮಕ ಔಷಧ ವಿಭಾಗದ ಮುಖ್ಯಸ್ಥ ಡಾ.ನವೀನ್ ಎಸ್.ಸಾಲಿನ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿಯ ಡಾ. ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ವಂದಿಸಿದರು. ಉಪಶಾಮಕ ವೈದ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ.ಕೃತಿಕಾ ರಾವ್ ಕಾರ್ಯಕ್ರಮ ನಿರೂಪಿಸಿದರು.