ರಾಜ್ಯಮಟ್ಟದ ಕಡಲತೀರ ಚಾರಣ, ಪ್ರಕೃತಿ ಅಧ್ಯಯನ, ಸ್ವಚ್ಛತಾ ಶಿಬಿರದ ಸಮಾರೋಪ

Update: 2025-03-23 21:18 IST
ರಾಜ್ಯಮಟ್ಟದ ಕಡಲತೀರ ಚಾರಣ, ಪ್ರಕೃತಿ ಅಧ್ಯಯನ, ಸ್ವಚ್ಛತಾ ಶಿಬಿರದ ಸಮಾರೋಪ
  • whatsapp icon

ಕುಂದಾಪುರ: ಜೀವಿತಾವಧಿಯಲ್ಲಿ ನಾವುಗಳು ಎಲ್ಲಿ ಹೋದರೂ ಕೂಡ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಬದುಕಬೇಕಾಗುತ್ತದೆ. ನೂರಾರು ವರ್ಷಗಳ ಇತಿಹಾಸವಿರುವ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಇದಕ್ಕೆ ಬೇಕಾದ ತರಬೇತಿ ಜತೆಗೆ ಮಾಹಿತಿಯನ್ನು ನೀಡುತ್ತದೆ. ರಾಷ್ಟ್ರ ಪ್ರೇಮವಿರುವ ಯುವಜನರಿಗೆ ಅಲ್ಲಲ್ಲಿ ಶಿಬಿರಗಳನ್ನು ಆಯೋಜಿಸಿ ಆ ಮೂಲಕ ಒಳ್ಳೆಯ ವಿಚಾರಗಳನ್ನು ಹಾಗೂ ಜೀವನಾನುಭವಗಳನ್ನು ಕಲಿಸುತ್ತದೆ ಎಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಹೇಳಿದ್ದಾರೆ.

ಉಪ್ಪುಂದ ಶ್ರೀದುರ್ಗಾಪರಮೇಶ್ವರೀ ಸಭಾಭವನದಲ್ಲಿ ಶನಿವಾರ ರಾಜ್ಯದ 21 ಜಿಲ್ಲೆಗಳಿಂದ ಆಗಮಿಸಿದ ಸುಮಾರು 25 ರೆಂಜರ್ಸ್ ಮತ್ತು ರೋವರ್ಸ್ ಗಳಿಗೆ ಆಯೋಜಿಸಿದ ರಾಜ್ಯಮಟ್ಟದ ಕಡಲತೀರ ಚಾರಣ, ಪ್ರಕೃತಿ ಅಧ್ಯಯನ ಮತ್ತು ಸ್ವಚ್ಛತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ನಾವೆಲ್ಲರೂ ಸಾಮಾನ್ಯವಾಗಿ ಬದುಕಲು, ಸಾಧಿಸಲು ಹಾಗೂ ಜೀವಿಸಲು ಹುಟ್ಟಿದಾಗಿನಿಂದ ಅವಕಾಶ ಪಡೆದಿರುತ್ತೇವೆ. ಆದರೆ ನಮ್ಮ ನಡುವೆ ಸಾಧನೆ ಮಾಡಿದ ಹಾಗೂ ಜೀವನದಲ್ಲಿ ಏನನ್ನೂ ಮಾಡದೇ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದವರನ್ನೂ ನೋಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸೇವಾ ಮನೋಭಾವ ಬೆಳೆಸಿಕೊಂಡು ಜತೆಗೆ ಪ್ರಕೃತಿಯ ರಕ್ಷಣೆಯ ಜವಾಬ್ದಾರಿ ಹೊತ್ತು ಸಮಾಜದ ಋಣ ಸಂದಾಯ ಮಾಡುವ ಸಂಕಲ್ಪದೊಂದಿಗೆ ನಮ್ಮ ಆತ್ಮಸಾಕ್ಷಿಗೆ ಸರಿಯಾಗುವಂತೆ ಮುಂದುವರಿಯಬೇಕು ಎಂದರು.

ಸ್ಥಳೀಯ ಸಂಸ್ಥೆಯ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳು ತಮ್ಮ ನಾಲ್ಕು ದಿನಗಳ ಅನುಭವಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ ಕೊಡವೂರು, ಖಜಾಂಚಿ ಹರಿಪ್ರಸಾದ ರೈ, ಮಂಜುನಾಥ ಹೆಗ್ಡೆ, ಉಪ್ಪುಂದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಸ್ಥಳಿಯ ಜೆಸಿಐನ ವೈ.ಮಂಗೇಶ ಶ್ಯಾನುಭಾಗ, ಅಭಿಷೇಕ್, ಪುರುಶೋತ್ತಮ ದಾಸ್, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ ಸ್ವಾಗತಿಸಿದರು. ಶಿಬಿರದ ನಾಯಕ ಪ್ರವೀಣ್ ಗಂಗೊಳ್ಳಿ ವರದಿ ವಾಚಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ವಂದಿಸಿದರು. ಉಪನ್ಯಾಸಕ ಹರೀಶ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News