ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನಕ್ಕೆ ಚಾಲನೆ

Update: 2023-09-24 17:10 GMT

ಬೆಂಗಳೂರು: ಸೆಪ್ಟೆಂಬರ್ 24 ರಿಂದ ಅ.15 ರ ವರೆಗೆ “ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜ ಪರಿವರ್ತನೆ Enlightening Teachers, Nurturing Talents , Transforming Society AIITA an Ideal platform” ಎಂಬ ಥೀಮ್ ಅಡಿ 22 ದಿನಗಳ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನಕ್ಕೆ ದೆಹಲಿಯಲ್ಲಿ ಚಾಲನೆ ನೀಡಿದ್ದು ಸೆ.24 ರಂದು ಐಟಾ ಕರ್ನಾಟಕ ಘಟಕವು ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ರಾಜ್ಯದಲ್ಲಿ ಚಾಲನೆ ನೀಡಿದೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಹೇಳಿದರು.

ಅವರು ರವಿವಾರ ಬೆಂಗಳೂರಿನ ಶಾಂತಿ ಸದನದಲ್ಲಿ ಆಯೋಜಿಸಿದ್ದ ಪೋಸ್ಟರ್ ಬಿಡುಗಡೆ ಮತ್ತು ಪತ್ರಿಕಾಗೋಷ್ಟಿಯನ್ನು ದ್ದೇಶಿಸಿ ಮಾತನಾಡಿದರು. ಐಟಾ ರಾಷ್ಟ್ರೀಯ ಮಟ್ಟದಲ್ಲಿ ನೋಂದಾಯಿತ ಶಿಕ್ಷಕರ ಸಂಘಟನೆಯಾಗಿದ್ದು ದೇಶದ 19 ರಾಜ್ಯಗಳಲ್ಲಿ ಸಕ್ರೀಯವಾಗಿದೆ. ಕರ್ನಾಟಕದ 21 ಜಿಲ್ಲೆಗಳಲ್ಲಿ ಇದು ವಿಸ್ತರಿಸಿಕೊಂಡಿದೆ. ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ ನಡೆಸುವುದರ ಮೂಲಕ ಇದು ಶಿಕ್ಷಕರು, ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ತರಲು ಬಯಸುತ್ತಿದೆ. ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬೌದ್ಧಿಕ, ತಾಂತ್ರಿಕ ಮತ್ತು ವೃತ್ತಿಪರ ಬೆಳವಣಿಗೆಯನ್ನು ಹೆಚ್ಚಿಸಲು ಸೆಮಿನಾರ್‌ಗಳು, ಸಮ್ಮೇಳನಗಳು, ಸ್ಪರ್ಧೆಗಳು, ಮತ್ತು ಇತರ ಶೈಕ್ಷಣಿಕ ಕಾರ್ಯಕ್ರಮಗಳಂತಹ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಅ. 1 ರಂದು ಕಲಬುರ್ಗಿಯ ಹಿದಾಯತ್ ಸೆಂಟರ್ ನಲ್ಲಿ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಕಲಬುರ್ಗಿ ಜಿಲ್ಲಾಧಿಕಾರಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮೌಲಾನ ಆಝಾದ್ ನ್ಯಾಶನಲ್ ಉರ್ದು ವಿಶ್ವವಿದ್ಯಾಲಯದ ವಿಶೇಷ ಕರ್ತವ್ಯಾಧಿಕಾರಿ ಶಿಕ್ಷಣ ತಜ್ಞ ಡಾ.ಮಹಮೂದ್ ಮುಹಮ್ಮದ್ ಸಿದ್ದೀಖಿ, ದೇಶದ ಖ್ಯಾತ ಶಿಕ್ಷಣ ತಜ್ಞ ಸೈಯ್ಯದ್ ತನ್ವೀರ್ ಆಹ್ಮದ್ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ರಾಜ್ಯದ ಎಲ್ಲ ಶಿಕ್ಷಕ ಬಂಧುಗಳು ಈ ಸಮ್ಮೇಳನದಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.

ರಾಷ್ಟ್ರೀಯ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ, ಬೆಂಗಳೂರಿನ ಎಚ್.ಕೆ.ಬಿ.ಕೆ ತಾಂತ್ರಿಕ ಮಹಾ ವಿದ್ಯಾಲಯದ ಪ್ರೋ. ಹಾರೂನ್ ಸಫ್ದರ್ ಶೇಖ್, "ಸಮಾಜವು ಶಿಕ್ಷಕರ ಮೌಲ್ಯ ಮತ್ತು ಸ್ಥಾನಮಾನವನ್ನು ಗುರುತಿಸುವ ಮತ್ತು ಪ್ರಶಂಸಿಸುವ ಅಗತ್ಯವಿದೆ, ಶಿಕ್ಷಣದೊಂದಿಗೆ ಸಂಬಂಧಿಸಿದ ಜವಾಬ್ದಾರಿಗಳ ಬಗ್ಗೆ ಸಮಾಜದೊಳಗೆ ಜಾಗೃತಿ ಮೂಡಿ ಸುವ ಅಗತ್ಯವಿದೆ. ಸಂಸ್ಥೆಗಳು ತಾಂತ್ರಿಕ ಪರಿಣತಿ, ನೈತಿಕ ಮೌಲ್ಯ ಹೊಂದಿರುವ ವಿದ್ಯಾರ್ಥಿಗಳನ್ನು ಬೆಳೆಸುವ ವಾತಾವ ರಣ ನಿರ್ಮಿಸಬೇಕು. ಈ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು, ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿರು ವುದು ಒಂದು ಉತ್ತಮ ಬೆಳವಣೆಗೆಯಾಗಿದೆ ಇಂತಹ ಮಹತ್ತರ ಕಾರ್ಯಕ್ಕೆ ಕೈಹಾಕಿರುವ ಐಟಾದ ಕಾರ್ಯ ಶ್ಲಾಘನೀಯ ವಾಗಿದೆ ಎಂದರು.

ಈ ಸಂದರ್ಭದಲ್ಲಿ ಐಟಾ ರಾಜ್ಯ ಕಾರ್ಯದರ್ಶಿ ಯಾಸೀನ್ ಭಿಕ್ಬಾ, ಐಟಾ ಬೆಂಗಳೂರು ಮೆಟ್ರೋ ಅಧ್ಯಕ್ಷ ಡಾ.ಮುಹಮ್ಮದ್ ಸನಾವುಲ್ಲಾ ಷರೀಫ್, ರಾಜ್ಯ ಸಲಹಾಸಮಿತಿ ಸದಸ್ಯ ಪ್ರೋ.ಮಹೆಬೂಬ್ ಉಲ್ ಹಕ್, ಜೆಐಎಚ್ ಮಾಧ್ಯಮ ಕಾರ್ಯ ದರ್ಶಿ ತಲ್ಹಾಸಿದ್ದಿಬಾಪ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News