ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳ ಕುಡಿಯುವ ನೀರಿನ ‌ಸಮಸ್ಯೆ ಪರಿಹಾರಕ್ಕೆ ಅವಶ್ಯಕ ಕ್ರಮ : ಸಚಿವ ಶರಣಬಸಪ್ಪ ದರ್ಶನಾಪುರ

Update: 2025-04-07 17:18 IST
ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕುಗಳ ಕುಡಿಯುವ ನೀರಿನ ‌ಸಮಸ್ಯೆ ಪರಿಹಾರಕ್ಕೆ ಅವಶ್ಯಕ ಕ್ರಮ : ಸಚಿವ ಶರಣಬಸಪ್ಪ ದರ್ಶನಾಪುರ
  • whatsapp icon

ಯಾದಗಿರಿ : ಜಿಲ್ಲೆಯ ಯಾದಗಿರಿ, ಶಹಾಪುರ್ ಮತ್ತು ಸುರಪುರಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶರಣಬಸಪ್ಪ ದರ್ಶನಾಪೂರ್ ಅವರು ಹೇಳಿದರು.

ನಗರದ ಕಮಲನೆಹರು ಉದ್ಯಾನವನದಲ್ಲಿ ಇಂದು ಯಾದಗಿರಿ ನಗರಕ್ಕೆ ಭೀಮಾ ನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆ ಅಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಯಾದಗಿರಿ ನಗರಕ್ಕೆ ಕುಡಿಯಲು ಶುದ್ಧ ನೀರು ಪೂರೈಸುವ ಬೇಡಿಕೆ ಹಲವಾರು ವರ್ಷಗಳದ್ದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 53.16 ಕೋಟಿ ರೂ. ಗಳ ವೆಚ್ಚದಲ್ಲಿ ಭೀಮಾ ನದಿ ಮೂಲದಿಂದ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ನಗರ ವ್ಯಾಪ್ತಿಯ 31 ವಾರ್ಡ್ ಗಳ ಪ್ರದೇಶಗಳಲ್ಲಿ ನಿರಂತರ ನೀರು ದೊರೆಯಲಿದೆ ಎಂದು ಹೇಳಿದರು.

ಯಾದಗಿರಿ ನಗರಕ್ಕೆ ಕುಡಿಯುವ ನೀರು ಪೂರೈಕೆಗಾಗಿ ಆರು ವಲಯಗಳನ್ನಾಗಿ ಗುರುತಿಸಲಾಗಿದೆ. ನೀರಿನ ಒತ್ತಡಕ್ಕೆ ಅನುಗುಣವಾಗಿ ನೂತನ ಪೈಪ್ ಲೈನ್ ಗಳನ್ನು ಅಳವಡಿಸುವ ಮೂಲಕ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, ಈಗಾಗಲೇ ಭೀಮಾನದಿ ಹತ್ತಿರ ನೀರು ಶುದ್ಧೀಕರಣ ಘಟಕ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಅದರಂತೆ ಇಂದು ಕಮಲ ನೆಹರು ಉದ್ಯಾನವನದಲ್ಲಿ 7.50 ಲಕ್ಷ ಲೀಟರ್ ಸಾಮರ್ಥ್ಯದ 15 ಮೀಟರ್ ಎತ್ತರದ ಮೇಲ್ಮಟ್ಟದ ಜಲಸಂಗ್ರಹಗಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಅದರಂತೆ ಸುರಪುರ ಕುಡಿಯುವ ನೀರು ಸರಬರಾಜು ಯೋಜನೆಯಾ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶಹಾಪೂರ ಕುಡಿಯುವ ನೀರು ಸರಬರಾಜು ನೂತನ ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೂ ಸರ್ಕಾರ ಅನುಮೋದನೆ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಯಾದಗಿರಿ ನಗರದಲ್ಲಿ ವಲಯ ಒಂದು ಕೋಲಿವಾಡದಲ್ಲಿ ಹಾಲಿ ಇರುವ ನೆಲಮಟ್ಟ ಜಲಸಂಗ್ರಹಗಾರದಿಂದ ವಿತರಣಾ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಅದರಂತೆ ವಲಯ ಎರಡರಲ್ಲಿ ಜಲಶುದ್ದಿಕರಣ ಘಟಕದಲ್ಲಿ ಹಾಲಿ ಇರುವ ಮೇಲ್ಮಟ್ಟ  ಜಲಸಂಗ್ರಹಗಾರದಿಂದ ವಿತರಣಾ ಕೊಳವೆ ಮಾರ್ಗ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಆದಷ್ಟು ಬೇಗನೆ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಲು ‌ಸೂಚಿಸಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ವಿಶೇಷ ಗಮನ ನೀಡಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 5,000 ಕೋ.ರೂಗಳನ್ನು ಒದಗಿಸಿದೆ. ಶಾಸಕರ ಅನುದಾನದಡಿ 120 ಕೋಟಿ ರೂ.ಗಳನ್ನು ಒದಗಿಸಿದೆ. ಸಿಟಿ ಸ್ಕ್ಯಾನ್ ಯಂತ್ರಕ್ಕಾಗಿ ಎಂಟು ಕೋ.ರೂಗಳನ್ನು ಒದಗಿಸಿದೆ. ಮೊರಾರ್ಜಿ ದೇಸಾಯಿ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಮತ್ತು ವಸತಿ ಶಾಲೆಗಳಿಗಾಗಿ ತಲಾ 20 ರಿಂದ 30 ಕೋ. ರೂ. ಗಳನ್ನು ಒದಗಿಸಿದೆ ಎಂದು ಹೇಳಿದರು.

ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು 16 ಆಯವ್ಯಯಗಳನ್ನು ಮಂಡಿಸಿದ ಅನುಭವವನ್ನು ಹೊಂದಿದ್ದಾರೆ. ಕಲ್ಯಾಣ ಕರ್ನಾಟಕದ ಅನುಕೂಲಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕ ಆಸ್ಪತ್ರೆ ಉನ್ನತೀಕರಣಕ್ಕಾಗಿ 900 ಕೋಟಿ ರೂ.ಗಳನ್ನು ಒದಗಿಸಿದೆ. ಇತ್ತೀಚಿಗೆ ಕಲ್ಯಾಣ ಪಥ ಕಾರ್ಯಕ್ರಮದ ಅಂಗವಾಗಿ ಪ್ರತಿಕ್ಷೇತ್ರಕ್ಕೆ 35 ಕೋ. ರೂ. ಗಳನ್ನು ಒದಗಿಸಿದೆ. ಅಕ್ಷರ ಅವಿಷ್ಕಾರ ಯೋಜನೆಗಾಗಿ ಶೇ.25ರಷ್ಟು ಅನುದಾನವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿದ ಅನುದಾನದಲ್ಲಿ ಕಾಯ್ದಿರಿಸಿದೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರ ಅಭಿವೃದ್ಧಿಯನ್ನು ಸಾಧಿಸಲು ಕೈಜೋಡಿಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಶಾಸಕರಾದ ಚೆನ್ನರೆಡ್ಡಿ ಪಾಟೀಲ್ ತುನ್ನೂರ್ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯ ಸರ್ಕಾರ 5000 ಕೋ.ರೂ.ಗಳನ್ನು ಒದಗಿಸುವಲ್ಲಿ ಮಾಜಿ ಕೇಂದ್ರ ಸಚಿವರು ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಧರ್ಮಸಿಂಗ್ ಅವರ ಕಾರ್ಯ ಮರೆಯಲು ಸಾಧ್ಯವಿಲ್ಲ. ಸದ್ಯ ಯಾದಗಿರಿ ನಗರದ ಹಲವಾರು ವರ್ಷಗಳ ಬೇಡಿಕೆಯಾದ ಶುದ್ಧ ನೀರು ಪೂರೈಸುವ ಯೋಜನೆಯ ಕನಸು ನನಸಾಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಪೂರ್ಣಗೊಂಡ ನಂತರ ವಾರದ ಐದು ದಿನಗಳ ಕಾಲ ನಾಗರಿಕರಿಗೆ ನೀರು ದೊರೆಯಲು ಸಹಕಾರಿಯಾಗಲಿದೆ. ಈಗ ಕೈಗೊಳ್ಳುತ್ತಿರುವ ಕಾಮಗಾರಿಗಳು ಗುಣಮಟ್ಟದಲ್ಲಿ ಕೈಗೊಳ್ಳಬೇಕು. ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಿ ವ್ಯವಸ್ಥಿತವಾಗಿ ಈ ಯೋಜನೆ ಜಾರಿಗೊಳಿಸುವಂತೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷ ಲಲಿತ ಅನಪುರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನಾಯಕ್ ಮಾಲಿಪಾಟೀಲ್, ನಗರಸಭೆ ಉಪಾಧ್ಯಕ್ಷರು ರುಕಯ್ಯ ಬೇಗಮ್, ಜಿಲ್ಲಾಧಿಕಾರಿ ಡಾ. ಸುಶೀಲಾ. ಬಿ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ನಗರ ಸಭೆ ಸದಸ್ಯರಾದ ನಿರ್ಮಲ, ಹನುಮಂತ ನಾಯಕ್ ಉಪಸ್ಥಿತರಿದ್ದರು. ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿ ಇಲಾಖೆ ಅಧಿಕಾರಿ ರಾಜಕುಮಾರ್ ಅವರು ಯೋಜನೆಯ ಬಗ್ಗೆ ವಿವರಿಸಿದರು. ನಗರಸಭೆ ಪೌರಾಯುಕ್ತ ಉಮೇಶ್ ಚವಾನ್ ಸ್ವಾಗತಿಸಿದರು. ರಾಮ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News