ಅ.9ರಂದು ಶೌರ್ಯ ಜಾಗರಣ ರಥಯಾತ್ರೆ ಮಂಗಳೂರು ನಗರಕ್ಕೆ: ಶರಣ್ ಪಂಪ್‌ವೆಲ್

Update: 2023-10-06 13:12 GMT

ಮಂಗಳೂರು, ಅ.6: ಹಿಂದೂ ಧರ್ಮದ ಚರಿತ್ರೆ, ಹಿರಿಯರ ಶೌರ್ಯ, ತ್ಯಾಗ, ಪರಾಕ್ರಮ ಜೀವನದ ಬಗ್ಗೆ ಹಿರಿಮೆ ಮೂಡಿ ಸುವ ಶೌರ್ಯ ಜಾಗರಣ ರಥಯಾತ್ರೆ ರಾಜ್ಯಾದ್ಯಂತ ಬಜರಂಗದಳದಿಂದ ಆಯೋಜಿಸಲಾಗಿದ್ದು, ಅ.9ರಂದು ಮಂಗಳೂರಿ ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದರು.

ನಗರದ ವಿಶ್ವಶ್ರೀ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಂದು ಜಿಲ್ಲೆಗೆ ಪ್ರವೇಶ ಮಾಡಿರುವ ರಥ, ಅ.7ರಂದು ಪುತ್ತೂರಿಗೆ ಆಗಮಿಸಿ ಸಂಜೆ 5.30ಕ್ಕೆ ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮ ನಡೆಯಲಿದೆ. ಅ.8ರಂದು 4.30ಕ್ಕೆ ಬಂಟ್ವಾಳದ ಗಾಣದಪಡ್ಪು ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದರು.

ಅ.9ರಂದು ಮಧ್ಯಾಹ್ನ 2.30ಕ್ಕೆ ಶೌರ್ಯ ಜಾಗರಣ ರಥದೊಂದಿಗೆ ಭವ್ಯ ಶೋಭಾಯಾತ್ರೆ ಮಂಗಳೂರಿಗೆ ಆಗಮಿಸಲಿದ್ದು, ಸಂಜೆ 4.30ಕ್ಕೆ ಕದ್ರಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಸೆ.25ರಂದು ಚಿತ್ರದುರ್ಗದಲ್ಲಿ ಆರಂಭವಾದ ರಥಯಾತ್ರೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ 1600ಕಿ.ಮೀ. ಸಂಚರಿಸಿ ಯಶಸ್ವಿ ಯಾಗಿ ಕಾರ್ಯಕ್ರಮಗಳನ್ನು ನಡೆಸಿ ಕರಾವಳಿ ಜಿಲ್ಲೆಗೆ ಆಗಮಿಸುತ್ತಿದೆ. ಅ.10ರಂದು ಸಂಜೆ 4 ಗಂಟೆಗೆ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೂಲಕ ಸಮಾರೋಪಗೊಳ್ಳಲಿದೆ. ಸುಮಾರು 50ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ಸಾಧ್ಯತೆಯಿದ್ದು, ಸಂಘಟನೆ ಪ್ರಮುಖರು, ಸಾಧು-ಸಂತರು, ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ವಿಭಾಗದ ಸಂಯೋಜಕ ಭುಜಂಗ ಕುಲಾಲ್, ವಿಭಾಗ ಪ್ರಚಾರ ಪ್ರಮುಖ ಪ್ರದೀಪ್ ಸರಿಪಲ್ಲ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News