ಮೊಬೈಲ್ ಗೀಳಿನಿಂದ ಹೊರಬನ್ನಿ: ಸ್ಪೀಕರ್ ಯು.ಟಿ. ಖಾದರ್ ಕರೆ

ಮಂಗಳೂರು: ಮೊಬೈಲ್ ಬಳಕೆಯ ಗೀಳಿನಿಂದ ಮಕ್ಕಳು ಹೊರಬರಬೇಕು. ಅದಕ್ಕೆ ಪೂರಕವಾಗಿ ಮಕ್ಕಳಿಗೆ ನಾನಾ ಸ್ಪರ್ಧೆಗಳನ್ನು ಆಯೋಜಿಸುವುದು ಅನಿವಾರ್ಯವಾಗಿದೆ. ಬಾಲ ಭವನವು ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಬೆಂಗಳೂರು ರಾಜ್ಯ ಬಾಲ ಭವನ ಸೊಸೈಟಿ, ದ.ಕ. ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಱಮಕ್ಕಳ ಸ್ಪರ್ಧಾ ಕಾರ್ಯಕ್ರಮೞ ವನ್ನು ತೆಂಗಿನ ಹೊಂಬಾಳೆಯನ್ನು ಅರಳಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸೃಜನಾತ್ಮಕ ಪ್ರದರ್ಶನ ಕಲೆ, ಭರತನಾಟ್ಯ, ಹುಲಿಕುಣಿತ, ಸುಗಮ ಸಂಗೀತ ಹಾಗೂ ವಾದ್ಯ ಸಂಗೀತ ಸ್ಪರ್ಧೆಯನ್ನು ಏಕಕಾಲದಲ್ಲಿ ವಿವಿಧ ಕೊಠಡಿಗಳಲ್ಲಿ ಆಯೋಜಿಸಲಾಯಿತು. ನಿಗದಿಪಡಿಸಿದ ಸ್ಪರ್ಧೆಗಳಲ್ಲಿ ೧೭೦ ಮಕ್ಕಳು ಭಾಗವಹಿಸಿದ್ದರು.
ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ಪ್ರಭಾಕರ್ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಡಿ.ಎಸ್. ಗಟ್ಟಿ, ನಾರು ಅಭಿವೃದ್ಧಿ ನಿಗಮದ ನಟರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ ವಂದಿಸಿದರು. ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.