ದ್ವೇಷ ಭಾಷಣ| ಡಾ.ಅರುಣ್ ಉಳ್ಳಾಲ್ ವಿರುದ್ಧ ಕಠಿಣ ಕ್ರಮಕ್ಕೆ ಸಮಾನ ಮನಸ್ಕರು ಆಗ್ರಹ

Update: 2024-10-06 12:24 GMT

ಡಾ.ಅರುಣ್ ಉಳ್ಳಾಲ್ 

ಮಂಗಳೂರು: ನಗರದ ಸೈಂಟ್ ಆಗ್ನೆಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂದು ಗುರುತಿಸಿಕೊಂಡಿರುವ ಡಾ. ಅರುಣ್ ಉಳ್ಳಾಲ್ ಎಂಬವರು ಉಳ್ಳಾಲ ತಾಲೂಕು ಕಿನ್ಯಾ ಗ್ರಾಮದಲ್ಲಿ ಸಂಘ ಪರಿವಾರಕ್ಕೆ ಸೇರಿರುವ ಕೇಶವ ಶಿಶು ಮಂದಿರ ಆಯೋಜಿಸಿದ ನವ ವಿವಾಹಿತರ ಸಮಾವೇಶದಲ್ಲಿ ಆಡಿರುವ ಮಾತುಗಳು ಆಘಾತ ಉಂಟು ಮಾಡಿದೆ. ಈ ಜನಾಂಗ ದ್ವೇಷದ, ಧಾರ್ಮಿಕ ಅಲ್ಪ ಸಂಖ್ಯಾತರ ಕುರಿತು ದ್ವೇಷ ಹುಟ್ಟಿಸುವ, ಹಿಂಸೆಗೆ ಪ್ರಚೋದಿಸುವ ಮಾತುಗಳನ್ನು ಬಲವಾಗಿ ಖಂಡಿಸುತ್ತೇವೆ. ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರಕಾರ ನ್ಯಾಯಯುತ ಕ್ರಮಗಳನ್ನು ವಿಳಂಬವಿಲ್ಲದೆ ಜರುಗಿಸಬೇಕು ಎಂದು ಸಮಾನ ಮನಸ್ಕರು ಆಗ್ರಹಿಸಿದ್ದಾರೆ.

ಕ್ರೈಸ್ತ, ಮುಸ್ಲಿಮರು ಸಹಿತ ಭಿನ್ನ ಧರ್ಮದವರ ಮದುವೆ ಹಾಲ್‌ಗಳಲ್ಲಿ ಹಿಂದೂಗಳು ಮದುವೆಗಳನ್ನು ನಡೆಸಬಾರದು, ಅವರ ಒಡೆತನದ ಶಿಕ್ಷಣ ಸಂಸ್ಥೆಗಳಿಗೆ ಹಿಂದೂಗಳು ಮಕ್ಕಳನ್ನು ಸೇರಿಸಬಾರದು, ಹಿಂದೂಗಳ ಒಡೆತನದ ಮದುವೆ ಹಾಲ್‌ಗಳು, ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಬಳಸಬೇಕು.... ಎಂಬ ಮಾತುಗಳನ್ನು ಓರ್ವ ಅಧ್ಯಾಪಕ ಸಂಘ ಪರಿವಾರದ ವೇದಿಕೆಯಲ್ಲಿ, ಅವರ ನಾಯಕರ ಸಮ್ಮುಖ ನವ ವಿವಾಹಿತರನ್ನು ಉದ್ದೇಶಿಸಿ ಬಹಿರಂಗವಾಗಿ ಹೇಳುವುದು ಗಾಬರಿ ಹುಟ್ಟಿಸುವ ಅಪಾಯಕಾರಿ ಬೆಳವಣಿಗೆಯಾಗಿದೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಎಂಬಲ್ಲಿ ಸ್ಥಳೀಯ ದಂತ ವೈದ್ಯನೊಬ್ಬ ಸಂಘಪರಿವಾರದ ವೇದಿಕೆಯಲ್ಲಿ ಇದೇ ಅರ್ಥದ ಜನಾಂಗ ದ್ವೇಷದ ಭಾಷಣ ಮಾಡಿದ್ದರು. ಇಂತಹ ಘಟನೆ ಗಳು ಸಾಮಾನ್ಯ ಎಂಬಂತೆ ಪದೇ ಪದೇ ಜರುಗುತ್ತಿರುವುದು ದೇಶದ ಭವಿಷ್ಯದ ಕುರಿತು ಕಾಳಜಿ ಉಳ್ಳವರನ್ನು ಚಿಂತೆಗೀಡು ಮಾಡುತ್ತಿದೆ.

ಡಾ. ಅರುಣ್ ಉಳ್ಳಾಲ್ ತನ್ನ ಭಾಷಣದಲ್ಲಿ ಮದುವೆ ಸಭಾಂಗಣಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹಿಂದು, ಮುಸ್ಲಿಂ, ಕ್ರೈಸ್ತ ಎಂಬಂತೆ ಧರ್ಮದ ಆಧಾರದಲ್ಲಿ ವಿಭಜಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಮಾಧ್ಯಮ, ಕನ್ನಡ ಮಾಧ್ಯಮ, ಸರಕಾರಿ, ಖಾಸಗಿ ಎಂಬ ಎರಡು ವರ್ಗ, ಖಾಸಗಿಯಲ್ಲಿ ಅನುದಾನಿತ, ಅನುದಾನ ರಹಿತ ಎಂಬ ವರ್ಗಗಳನ್ನು ಶಿಕ್ಷಣ ಇಲಾಖೆ ಮಾಡಿದೆಯೇ ಹೊರತು ಧರ್ಮ, ಜಾತಿಯ ಆಧಾರದಲ್ಲಿ ವರ್ಗೀಕರಣ ಮಾಡಲಾಗಿಲ್ಲ. ಅರುಣ್ ಕುಮಾರ್‌ರ ಕುಖ್ಯಾತ ಭಾಷಣದಲ್ಲಿ ಮಂಗಳೂರಿನ ಶಾರದಾ, ಕೆನರಾ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳನ್ನು ಹಿಂದೂ ಶಿಕ್ಷಣ ಸಂಸ್ಥೆಗಳು ಎಂದು ಉಲ್ಲೇಖಿಸಿದ್ದಾರೆ. ಈ ಶಾಲಾ ಕಾಲೇಜುಗಳಿಗೆ ಮಾತ್ರವೇ ಹಿಂದೂಗಳು ತಮ್ಮ ಮಕ್ಕಳನ್ನು ಸೇರಿಸಬೇಕು ಎಂದಿದ್ದಾರೆ. ಅವರು ಉಲ್ಲೇಖಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮದ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಕಲಿಯುತ್ತಿದ್ದಾರೆ. ಕೆನರಾ, ಎಸ್‌ಡಿಎಂ, ಶಾರದಾ ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳೋ ಅಥವಾ ಅರುಣ್ ಉಳ್ಳಾಲ್ ಹೇಳಿದಂತೆ ಹಿಂದೂ ಶಿಕ್ಷಣ ಸಂಸ್ಥೆಗಳೋ ಎನ್ನುವ ಬಗ್ಗೆ ಅವುಗಳ ಆಡಳಿತ ಮಂಡಳಿಗಳು ಕೂಡಲೇ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ʼಹಿಂದೂ ಕಾಲೇಜು’ಗಳಲ್ಲಿ ಒಂದು ತರಗತಿಗೂ ವಿದ್ಯಾರ್ಥಿಗಳಿಲ್ಲ, ಆದರೆ ʼಅನ್ಯಮತೀಯ ಕಾಲೇಜುಗಳಲ್ಲಿ’ ಹನ್ನೊಂದು ಬ್ಯಾಚ್ ಗಳಲ್ಲಿ ವಿದ್ಯಾರ್ಥಿಗಳಿದ್ದಾರೆ ಎಂದೂ ಈ ವ್ಯಕ್ತಿ ಅಲವತ್ತುಕೊಂಡಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಅರಸಿಕೊಂಡು ಒಳ್ಳೆಯ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಸರ್ವವಿಧಿತ. ಹೀಗಿರುವಾಗ ಈ ಅಧ್ಯಾಪಕನ ಹೇಳಿಕೆಯು ಈತ ಪ್ರಚಾರ ಕೊಡಲು ಹೆಣಗಾಡಿದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲ ಎನ್ನುವ ಮೂಲಕ ಆ ಸಂಸ್ಥೆಗಳನ್ನು ಆತನೇ ಅವಮಾನಿಸಿದಂತಾಗಿದೆ. ತಮ್ಮ ಕಾಲೇಜುಗಳಿಗೆ ವಿದ್ಯಾರ್ಥಿಗಳು ಸೇರುತ್ತಿಲ್ಲ ಎಂದಾ ದರೆ ಆಯಾ ಕಾಲೇಜು ಸ್ವವಿಮರ್ಶೆ ಮಾಡಿಕೊಂಡು ಅದಕ್ಕೆ ಕಾರಣಗಳನ್ನು ಹುಡುಕಿ ಸರಿಪಡಿಸಿಕೊಳ್ಳಬೇಕೇ ಹೊರತು ವಿದ್ಯಾರ್ಥಿಗಳು ಬಯಸುತ್ತಿರುವ ಕಾಲೇಜುಗಳ ಮೇಲೆ ಮತೀಯವಾದಿ ದಾಳಿ ನಡೆಸುವುದಲ್ಲ.

ಸಂವಿಧಾನದ ಆಶಯಗಳಿಗೆ ಘಾಸಿ ಉಂಟುಮಾಡುವ ಜನಾಂಗ ದ್ವೇಷಿ ಚಿಂತನೆಗಳನ್ನು ಹರಡುತ್ತಿರುವ ಅರುಣ್ ಉಳ್ಳಾಲ್‌ಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿದೆ. ಇದು ಮತ್ತಷ್ಟು ಆಘಾತಕಾರಿ. ಸಮಾಜ ವಿಭಜನೆಯ, ಜನಾಂಗ ದ್ವೇಷದ ಸಿದ್ಧಾಂತವಾದಿಗಳಿಗೆ ಸರಕಾರ ಕೊಡಮಾಡುವ ಇಂತಹ ಪ್ರಶಸ್ತಿಗಳು ದೊರಕಿರುವುದು ಖೇದಕರ. ಈ ಪ್ರಶಸ್ತಿಗಳನ್ನು ಸರಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ನಾಗರಿಕ ಸಮಾಜದ ಪ್ರಬಲ ಆಗ್ರಹದ ಹಿನ್ನಲೆಯಲ್ಲಿ ಜನಾಂಗ ದ್ವೇಷದ ಭಾಷಣ ಮಾಡಿದ ಪ್ರಕರಣದಲ್ಲಿ ಅರುಣ್ ಉಳ್ಳಾಲ್ ಮೇಲೆ ಮಂಗಳೂರು ಪೊಲೀಸರು ಸ್ವಯಂ ಪ್ರೇರಣೆ ಮೊಕದ್ದಮೆ ದಾಖಲಿಸಿರುವುದು ಸ್ವಾಗತಾರ್ಹ. ಆದರೆ, ಪ್ರಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ನಡೆದ ಘಟನೆ ಎಂಬಂತೆ ಪರಿಗಣಿಸಿ ಸೆನ್ ಠಾಣೆಯಲ್ಲಿ ಐಟಿ ಸೆಕ್ಷನ್‌ನಡಿ ಎಫ್‌ಐಆರ್ ದಾಖಲಿಸಿರುವುದು ಸಮಂಜಸ ಅಲ್ಲ. ಇದು ಆರೋಪಿತನಿಗೆ ಕಾನೂನಿನ ಬಲೆಯಿಂದ ನುಣುಚಿಕೊಳ್ಳಲು ಅವಕಾಶ ಒದಗಿಸಬಹುದು. ಉಳ್ಳಾಲ ಠಾಣಾ ವ್ಯಾಪ್ತಿಯ ಕಿನ್ಯಾ ಗ್ರಾಮದಲ್ಲಿ ಸಂಘ ಪರಿವಾರ ಪೋಷಿತ ಕೇಶವ ಶಿಶು ಮಂದಿರದ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಆಕ್ರೋಶ ಮಾತ್ರ ವ್ಯಕ್ತವಾಗಿದೆ. ಆದುದರಿಂದ ಐಟಿ ಸೆಕ್ಷನ್ ಕೈ ಬಿಟ್ಟು ಮತೀಯ ದ್ವೇಷ ಹಾಗೂ ವಿಭಜನಕಾರಿ ಚಟುವಟಿಕೆಗಳ ಕುರಿತಾದ ಬಲವಾದ ಸೆಕ್ಷನ್‌ಗಳನ್ನು ಸೇರಿಸಿ ಎಫ್‌ಐಆರ್ ಬಲಪಡಿಸಬೇಕು. ಎಫ್‌ಐಆರ್ ಅನ್ನು ಘಟನೆ ನಡೆದ ವ್ಯಾಪ್ತಿಯ ಉಳ್ಳಾಲ ಠಾಣೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ರೀತಿಯ ಮತೀಯ ವಿಭಜನೆ, ದ್ವೇಷ ಹಬ್ಬಿಸುವ ಭಾಷಣಗಳಿಗೆ ಅವಕಾಶ ಕಲ್ಪಿಸಿದ ಆಯೋಜಕರನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಬೇಕಿದೆ. ತನ್ನ ಭಾಷಣದಲ್ಲಿ ಅರುಣ್ ಉಳ್ಳಾಲ್ ವೇದಿಕೆಯಲ್ಲಿದ್ದ ಕಲ್ಲಡ್ಕ ಪ್ರಭಾಕರ ಭಟ್‌ರನ್ನು ಪದೇ ಪದೇ ಉಲ್ಲೇಖಿಸಿದ್ದಾರೆ. ಈ ಮಾತುಗಳು ಪ್ರಭಾಕರ ಭಟ್‌ರು ಅರುಣ್ ಉಳ್ಳಾಲ್‌ರಿಗೆ ಜನಾಂಗ ದ್ವೇಷದ ಭಾಷಣ ಮಾಡಲು ಪ್ರೇರಣೆ ಒದಗಿಸಿರುವುದನ್ನು ಖಚಿತಪಡಿಸುತ್ತದೆ. ಪ್ರಭಾಕರ ಭಟ್ ಹಾಗೂ ಸಂಘ ಪರಿವಾರದ ಮುಖಂಡರು ಪದೇ ಪದೇ ಈ ರೀತಿಯ ಭಾಷಣಗಳಿಗೆ ಕಾನೂನಿನ, ಸರಕಾರದ ಯಾವ ಭಯವೂ ಇಲ್ಲದೆ ವೇದಿಕೆ ಕಲ್ಪಿಸುತ್ತಿರುವುದ ರಿಂದ ಪ್ರಭಾಕರ ಭಟ್ ಸಹಿತ ವೇದಿಕೆ ಮೇಲಿದ್ದ ಸಂಘ ಪರಿವಾರದ ಇತರೆ ನಾಯಕರನ್ನೂ ಅರುಣ್ ಉಳ್ಳಾಲ್ ಜೊತೆ ಸಹ ಆರೋಪಿಗಳನ್ನಾಗಿಸಬೇಕು ಎಂದು ಆಗ್ರಹಿಸಿದ್ದಾರೆ.

ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಸಂಶೋಧಕ ಪ್ರೊ. ಶಿವರಾಮ ಶೆಟ್ಟಿ, ನಿವೃತ್ತ ಪ್ರಾಂಶುಪಾಲರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು, ಡಾ. ಉದಯ ಇರ್ವತ್ತೂರು, ಡಾ. ಎನ್. ಇಸ್ಮಾಯಿಲ್, ಸಾಹಿತಿ ಬಿ.ಎಂ. ರೋಹಿಣಿ, ಪತ್ರಕರ್ತ ನವೀನ್ ಸೂರಿಂಜೆ, ನ್ಯಾಯವಾದಿಗಳಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ಚಿಂತಕರಾದ ಎಂ. ದೇವದಾಸ್, ವಾಸುದೇವ ಉಚ್ಚಿಲ, ಎಂಜಿ ಹೆಗಡೆ, ಡಾ. ಕೃಷ್ಣಪ್ಪಕೊಂಚಾಡಿ, ಶ್ರೀನಿವಾಸ ಕಾರ್ಕಳ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಶಿಕ್ಷಕಿ ಎಂ.ಉಷಾ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಗುಲಾಬಿ ಬಿಳಿಮಲೆ, ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಪ್ರಕಾಶಕ ಕಲ್ಲೂರು ನಾಗೇಶ್, ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್, ಡಿವೈಎಫ್‌ಐ ನಾಯಕ ಸಂತೋಷ್ ಬಜಾಲ್, ಸಮುದಾಯ ಮಂಗಳೂರು ಇದರ ಮನೋಜ್ ವಾಮಂಜೂರು, ರಂಗಕರ್ಮಿ ಪ್ರಭಾಕರ ಕಾಪಿಕಾಡ್ ಈ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News