ಫೆ. 12ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ; ಶಾಸಕರು, ಪತ್ರಕರ್ತರಿಗೆ ತರಬೇತಿ: ಸ್ಪೀಕರ್ ಯು.ಟಿ. ಖಾದರ್

Update: 2024-02-04 12:45 GMT

ಮಂಗಳೂರು: ವಿಧಾನ ಮಂಡಲ ಜಂಟಿ ಅಧಿವೇಶನ ಫೆ.12ರಿಂದ ಆರಂಭಗೊಳ್ಳಲಿದ್ದು, ಫೆ.16ರಂದು ಬಜೆಟ್ ಮಂಡನೆಯ ನಿರೀಕ್ಷೆ ಇದೆ. ಅಧಿವೇಶನಕ್ಕೆ ಪೂರ್ವಭಾವಿಯಾಗಿ ಫೆ.9ರಂದು ಬೆಂಗಳೂರಿನ ಐಐಎಂನಲ್ಲಿ ಎಲ್ಲ ಶಾಸಕರು ಹಾಗೂ ಪತ್ರಕರ್ತರಿಗೆ ಒಂದು ದಿನದ ವಿಶೇಷ ತರಬೇತಿ ಆಯೋಜಿಸಲಾಗಿದೆ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರಿಗೆ ಬಜೆಟ್ ಅಧಿವೇಶನದ ಸ್ವರೂಪ, ಚರ್ಚೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಅಲ್ಲದೆ ಈ ಬಾರಿ ಬಜೆಟ್ ಅಧಿವೇಶನದ ವರದಿಗಾರಿಕೆ ಬಗ್ಗೆಯೂ ಪತ್ರಕರ್ತರಿಗೆ ವಿಶೇಷ ತರಬೇತಿ ಏರ್ಪಡಿಸಲಾಗಿದೆ ಎಂದರು.

ಈ ತರಬೇತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್, ಕೃಷ್ಣ ಭೈರೇಗೌಡ, ನಿವೃತ್ತ ಐಎಎಸ್ ಅಧಿಕಾರಿ ಎಎಸ್‌ಎ ಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭ ಶಾಸಕರಿಗೆ ಸಂವಿಧಾನ ಕ್ವಿಝ್ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ‌ ನೀಡಲಾಗುವುದು ಎಂದರು.

ಫೆ.12ರಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಆರಂಭಗೊಳ್ಳಲಿದ್ದು, ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದು, ಬಳಿಕ ಮೂರು ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ನಂತರ ಬಜೆಟ್ ಮಂಡನೆಯಾಗಿ ಬಜೆಟ್ ಮೇಲಿನ ಚರ್ಚೆ ಮುಂದುವರಿಯಲಿದೆ ಎಂದರು.

ನಗರೋತ್ಥಾನ-3ರ ಯೋಜನೆಯಡಿ ತೊಕ್ಕೊಟ್ಟು ಒಳಪೇಟೆಯಲ್ಲಿ ನವೀಕೃತ ವಾಣಿಜ್ಯ ಸಂಕೀರ್ಣದ ಅಂಗಡಿಗಳನ್ನು ಬಹಿರಂಗ ಸಾರ್ವಜನಿಕ ಏಲಂ ಮಾಡಲಾಗಿದೆ. ಈ ಸಂದರ್ಭ ಬಿಜೆಪಿ, ಎಸ್‌ಡಿಪಿಐ ಮತ್ತು ಜೆಡಿಎಸ್ ಬೆಂಬಲಿತ ಉಳ್ಳಾಲ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವುದು ಸರಿಯಲ್ಲ. ಈ ಹಿಂದೆ ಹಳೆ ಕಟ್ಟಡದಲ್ಲಿ ವ್ಯಾಪಾರ ಮಾಡುತ್ತಿದ್ದವರಿಗೆ ಮಾನವೀಯತೆ ನೆಲೆಯಲ್ಲಿ ಹೊಸ ಕಟ್ಟಡದಲ್ಲಿ ಆದ್ಯತೆ ನೀಡುವುದು ಧರ್ಮ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಎಲ್ಲವೂ ನಿಯಮ ಪ್ರಕಾರವೇ ನಡೆಯುತ್ತಿದ್ದು, ಯಾವುದೇ ಗೊಂದಲ ಇಲ್ಲ ಎಂದು ಸ್ಥಳೀಯ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಕಲಾಪ ಸಮಯ ಬದಲಾವಣೆಯ ಚಿಂತನೆ

ಮುಂದಿನ ದಿನಗಳಲ್ಲಿ ವಿಧಾನ ಮಂಡಲ ಕಲಾಪವನ್ನು ಬೆಳಗ್ಗೆ 10ರಿಂದ 11ರ ನಡುವೆ ಆರಂಭಿಸುವ ಬದಲು ಅದಕ್ಕೆ ನಿರ್ದಿಷ್ಟ ಸಮಯದ ಚೌಕಟ್ಟು ವಿಧಿಸುವ ಚಿಂತನೆಯನ್ನೂ ಸ್ಪೀಕರ್ ಯು.ಟಿ.ಖಾದರ್ ವ್ಯಕ್ತಪಡಿಸಿದ್ದಾರೆ.

ಶಾಸಕರು ಬೆಳಗ್ಗೆ 8 ಗಂಟೆಗೆ ಕಲಾಪಕ್ಕೆ ಸಿದ್ಧವಾಗಿರುತ್ತಾರೆ. ಆದರೆ ಕಲಾಪ ಆರಂಭಕ್ಕೆ ನಿಗದಿತ ಸಮಯದ ಚೌಕಟ್ಟು ಇಲ್ಲದೇ ಇರುವುದು ಹಲವು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಕಲಾಪಕ್ಕೆ ಹೊರಟು ಸಿದ್ಧವಾದ ಶಾಸಕರು ಊರಿನ ಜನರ ಕಚೇರಿ ಕೆಲಸಕ್ಕೆ ನೆರವಾಗುತ್ತಾರೆ. ಹಾಗಾಗಿ ವಿಧಾನಸೌಧ, ವಿಕಾಸ ಸೌಧ ಎಂದು ಸುತ್ತಾಡುತ್ತಾರೆ. ಅಧಿಕಾರಿಗಳ ಬಳಿ ತೆರಳಿ ಕೆಲಸ ಮಾಡಿಸಿಕೊಟ್ಟು ಕಲಾಪಕ್ಕೆ ಹಾಜರಾಗುವಾಗ ವಿಳಂಬವಾಗುತ್ತದೆ. ಮುಖ್ಯವಾಗಿ ಬೆಳಗ್ಗಿನ ತಿಂಡಿ ಅವಧಿ ಬಳಿಕ ಕಲಾಪದಲ್ಲಿ ಭಾಗವಹಿಸುವ ಶಾಸಕರ ಮೂಡ್ ಕೂಡ ಹೊರಟುಹೋಗುವ ಸಾಧ್ಯತೆ ಇರುತ್ತದೆ. ಈ ಎಲ್ಲ ಕಾರಣಗಳಿಂದ ಬೆಳಗ್ಗೆ 9 ಗಂಟೆಗೇ ಕಲಾಪ ಆರಂಭಿಸುವ ಚಿಂತನೆ ಸ್ಪೀಕರ್ ಅವರದ್ದು. ಕಲಾಪದಲ್ಲಿ ಭಾಗವಹಿಸಲು ಶಾಸಕರಿಗೆ ಉತ್ಸಾಹ ಮೂಡಿಸಲು ದಿನಕ್ಕೊಂದು ಉಪಹಾರ ಮೆನು. ಬೆಳಗ್ಗೆ 8ರಿಂದ 9 ಗಂಟೆ ವರೆಗೆ ಶಾಸಕರಿಗೆ ವಿಧಾನಸೌಧದಲ್ಲೇ ಉಪಹಾರ ವ್ಯವಸ್ಥೆ. ಬಳಿಕ ಅಧಿವೇಶನ ಆರಂಭಗೊಳ್ಳುವುದರಿಂದ ಶಾಸಕರ ಗೈರು ಕಡಿಮೆ ಮಾಡಬಹುದು ಎಂಬುದು ಸ್ಪೀಕರ್ ಖಾದರ್‌ ಅವರ ಲೆಕ್ಕಾಚಾರ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News