ಅಡ್ಡೂರು ಕಮ್ಯೂನಿಟಿ ಸೆಂಟರ್‌ನಲ್ಲಿ ಯುವ ಪೀಳಿಗೆಯ ಆಲೋಚನೆ ಮತ್ತು ನಾಯಕತ್ವ ಕೌಶಲ್ಯ ಕಾರ್ಯಗತಗೊಳ್ಳಲಿ: ಡಾ. ರುಕ್ಸಾನಾ

Update: 2023-09-02 16:17 GMT

ಮಂಗಳೂರು : ಅಮಲು ಪದಾರ್ಥ ಸೇವನೆ ನಮ್ಮ ಮುಂದಿನ ತಲೆಮಾರನ್ನು ಇಲ್ಲವಾಗಿಸುವ ಶೈತಾನನ ಕಾರ್ಯ ತಂತ್ರವಾಗಿದೆ. ಅಮಲು ಮುಕ್ತ ಸಮಾಜದ ನಿರ್ಮಾಣಕ್ಕೆ ಹೆತ್ತವರು, ಸಂಘ ಸಂಸ್ಥೆಗಳು ಪ್ರಾಯೋಗಿಕ ಯೋಜನೆಗಳನ್ನು ರೂಪಿಸಿ ತಮ್ಮ ಯುವ ಸಮೂಹದ ಭವಿಷ್ಯವನ್ನು ಉಳಿಸಬೇಕಾಗಿದೆ ಎಂದು ಖ್ಯಾತ ಮನೋಶಾಸ್ತ್ರಜ್ಞೆ, ಮದ್ಯ ವ್ಯಸನಿಗಳ ಮನೋವಿಜ್ಞಾನದಲ್ಲಿ ಪಿಎಚ್ ಡಿ ಮಾಡಿರುವ ಡಾ. ರುಕ್ಸಾನಾ ಅವರು ಅಭಿಪ್ರಾಯಪಟ್ಟರು.

ಅಡ್ಡೂರು ಸೆಂಟ್ರಲ್ ಕಮಿಟಿಯ ನೂತನ ಕಮ್ಯೂನಿಟಿ ಸೆಂಟರ್ ಉದ್ಘಾಟನೆ ಸಮಾರಂಭದಲ್ಲಿ ಅಮಲು ಮುಕ್ತ ಸಮಾಜದ ನಿರ್ಮಾಣದ ಪ್ರಯತ್ನ ಹೇಗೆ ಎನ್ನುವ ಕುರಿತು ಅವರು ವಿಷಯ ಪ್ರಸ್ತಾಪಿಸಿ ಮಾತನಾಡುತ್ತಾ, ಇದು ಮಹಾ ಪಿಡುಗಾಗಿದೆ. ಅತೀ ಶೀಘ್ರದಲ್ಲೇ ಸಮುದಾಯ ಮುಂದಿನ ತಲೆಮಾರನ್ನು ವಿನಾಶದ ಅಂಚಿಗೆ ಕೊಂಡೊಯ್ಯಲಿದೆ, ನಾವು ನಿರ್ಲ್ಯಕ್ಷ ವಹಿಸಿದರೆ ಮುಂದೆ ಪಶ್ಚಾತಾಪ ಪಟ್ಟು ಪ್ರಯೋಜನವಿಲ್ಲ. ಇದರ ನಿರ್ಮೂಲನಕ್ಕೆ ಕಠಿಣವಾಗಿ ವರ್ತಿಸಬೇಕಾಗಿದೆ ಎಂದವರು ಹೇಳಿದರು. ನಾವು ಹದಿನೈದು, ಐವತ್ತು ವರ್ಷದ ನಂತರದ ಬಗ್ಗೆ ಚಿಂತಿಸಬೇಕು. ಅಲ್ಲಿಗೆ ನಾವು ಸಾಮಾಜಿಕ ನಾಯಕತ್ವ ಸೃಷ್ಠಿಸಬೇಕು, ಆ ಪ್ರಯತ್ನದಲ್ಲಿ ಕಮ್ಯೂನಿಟಿ ಸೆಂಟರ್ ದುಡಿಯುತ್ತಿರುವುದು ಶ್ಲಾಘನೀಯ ಎಂದವರು ಅಭಿನಂದಿಸಿದರು.

ಅಡ್ಡೂರಿನಲ್ಲಿ ಬೃಹತ್ ಕಮ್ಯೂನಿಟಿ ಸೆಂಟರ್ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಹಾಕಿಕೊಳ್ಳಲಾಗಿದೆ. ಸೆಂಟರಿನ ಮಾದರಿ ಯೋಜನೆಯನ್ನು ರೂಪಿಸಲು ಪರ್ಯಾಯ ಸೆಂಟರಿನ ಕಚೇರಿಯನ್ನು ನಿನ್ನೆ ಅಡ್ಡೂರು ಸೆಂಟ್ರಲ್ ಕಮಿಟಿಯ ಜುಬೈಲ್ ಯುನಿಟ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೆ.ಎಂ.ಟಿ ಮತ್ತು ಉದ್ಯಮಿ ಅಶ್ರಫ್ ಎಟಿಎಲ್ ಉದ್ಘಾಟಿಸಿದರು.

ಅಡ್ದೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ರಫೀಕ್ ಎಂ.ಎಸ್ ಮತ್ತು ಪ್ರಧಾನ ಕಾರ್ಯದರ್ಶಿ ಮನ್ಸೂರ್ ತೋಕೂರು  ಕೌನ್ಸಿಲಿಂಗ್ ಸೆಂಟರ್ ಉದ್ಘಾಟಿಸಿದರು. ಸೆಂಟರಿನಲ್ಲಿ ಶೈಕ್ಷಣಿಕ ಮಾಹಿತಿ, ಪ್ರೋತ್ಸಾಹ ಮತ್ತು ಕೌಶಲ್ಯ ತರಬೇತಿಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಸೆಂಟರಿನ ಮೊನಿಟರಿಂಗ್ ಲೆಜ್ಜರನ್ನು ಹಿದಾಯ ಫೌಂಡೇಶನ್ ಮಂಗಳೂರು ಯುನಿಟ್ ಅಧ್ಯಕ್ಷ ಹನೀಫ್ ಹಾಜಿ ಗೋಲ್ತಮಜಲು ಬಿಡುಗಡೆಗೊಳಿಸಿದರು. ಸುಮಾರು 45 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಈ ಸಂದರ್ಭ ವಿತರಿಸಲಾಯಿತು.

ಅಡ್ಡೂರು ಕಮ್ಯೂನಿಟಿ ಸೆಂಟರ್ ಪ್ರದೇಶದ ಸುತ್ತಮುತ್ತಲಿನ ಊರಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಹದಿನೈದು ವಿದ್ಯಾರ್ಥಿಗಳನ್ನು ಈ ಬಾರಿ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿತು. ಈ ವರ್ಷ NEET, NDA, JEE, CLAT, CAT ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗೆ ನೂರು ವಿದ್ಯಾರ್ಥಿಗಳನ್ನು ತಯಾರುಗೊಳಿಸುವ ಗುರಿಯನ್ನು ಹೊಂದಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ಮಾರ್ಗದರ್ಶನ, ವೃತ್ತಿ ತರಬೇತಿ, ಸಾಮಾಜಿಕ ಚಟುವಟಿಕೆಯಲ್ಲಿ ಅವರನ್ನು ತೊಡಗಿಸಿಕೊಳ್ಳುವ ವಿಭಿನ್ನ ಕಾರ್ಯಕ್ರಮಗಳನ್ನು ಸೆಂಟರ್ ನಡೆಸಲಿದೆ ಎಂದು ಪ್ರಸ್ತಾವಿಕ ಮಾತನಾಡಿದ ಅಡ್ಡೂರು ಸೆಂಟ್ರಲ್ ಕಮಿಟಿಯ ಗೌರವ ಅಧ್ಯಕ್ಷ ಎಂ. ಮಹಮ್ಮದ್ ಶರೀಫ್ ಹೇಳಿದರು.

ಖ್ಯಾತ ನಿರೂಪಕರಾದ ಮಹಮ್ಮದಾಲಿ ಕಮ್ಮರಾಡಿ ಮಾತನಾಡುತ್ತಾ ಆಕ್ರಂದನದ ನಂತರ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಕಮ್ಯೂನಿಟಿ ಸೆಂಟರ್ ಆಂದೋಲನವಾಗಿ ರೂಪುಗೊಂಡಿದೆ. ಇದರ ಹಿಂದೆ ದುಡಿಯುವ ವ್ಯಕ್ತಿಗಳ ಜೊತೆ ಸಮುದಾಯ ಕೈ ಜೋಡಿಸಬೇಕು. ಈಗಾಗಲೇ 11 ಕಮ್ಯೂನಿಟಿ ಸೆಂಟರ್ ಗಳು ನಿರ್ಮಾಣವಾಗಿದೆ. ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿರುವುದು ಅಭಿನಂದನಾರ್ಹ ಎಂದರು.

ಅಡ್ಡೂರು ಪ್ರದೇಶದ ಸಮಾಜಮುಖಿ ಪ್ರವಾಸಿಗರು ವಿದೇಶದಲ್ಲಿ ಊರಿನ ಜನಸೇವೆಗಾಗಿ ಕಟ್ಟಿದ ಅಡ್ಡೂರ್ ಸೆಂಟ್ರಲ್ ಕಮಿಟಿಯು ಹಲವು ರೀತಿಯ ಸಾಮಾಜಿಕ ಶೈಕ್ಷಣಿಕ ಸೇವೆಯನ್ನು ಇಲ್ಲಿ ನಡೆಸುತ್ತಲೇ ಬಂದಿದೆ. ಖ್ಯಾತ ಉದ್ಯಮಿಗಳಾದ ಅಲ್ ಮುಝೈನ್ ಝಕರಿಯಾ ಹಾಜಿ, ಎಕ್ಸ್ ಪರ್ಟೈಸ್ ನ ಸಿ.ಇ.ಒ ಶೇಕ್ ಕರ್ನಿರೆ, ಕೆ.ಎಂ.ಟಿ ರಝಾಕ್ ಮುಂದಾದವರ ನೇತೃತ್ವ ಇರುವ ಈ ಸಂಘಟನೆಯಲ್ಲಿ ನಿಸ್ವಾರ್ಥವಾಗಿ ದುಡಿಯುವ ಯುವಕರಿದ್ದಾರೆ. ಜಿಲ್ಲೆಯಲ್ಲಿ ಈ ಸಂಘಟನೆಗೆ ವಿಶಿಷ್ಠ ಸ್ಥಾನವಿದೆ. ಚುರುಕು ಮತ್ತು ಹುರುಪಿನಲ್ಲಿ ಸಮಾಜ ಕಲ್ಯಾಣಕ್ಕೆ ದುಡಿಯುವ ತಂಡವೆಂಬ ಹೆಗ್ಗಳಿಕೆ ಈ ಸಂಸ್ಥೆಗಿದೆ. ಹೀಗಾಗಿ ಇವರ ನೇತೃತ್ವದ ಕಮ್ಯೂನಿಟಿ ಸೆಂಟರ್ ಕೂಡ ಯಶಸ್ವಿಯಾಗಲಿದೆ ಎಂದು ಸಿ.ಆರ್.ಡಿ.ಎಫ್ ಇದರ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತೂರು ಹೇಳಿದರು.

ಅಡ್ಡೂರು ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಅಳಕೆ ಇಬ್ರಾಹಿಂ ಕಾರ್ಯಕ್ರಮದಲ್ಲಿ ಸ್ವಾಗತ ನಿರ್ವಹಿಸಿದರು. ಅಬ್ದುಲ್ ಖಾದರ್ ತೋಕೂರು ವಂದಿಸಿದರು.






















 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News