ಮಂಗಳೂರು: ವಕೀಲೆಗೆ ನಿಂದಿಸಿ ಮಾನಸಿಕ ಕಿರುಕುಳ ನೀಡಿದ ಆರೋಪ

Update: 2023-10-09 16:46 GMT

ಮಂಗಳೂರು, ಅ.9: ನಗರದ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ ವಕೀಲೆಯೊಬ್ಬರಿಗೆ ಕಂಡೆಕ್ಟರ್ ಇತರ ಪ್ರಯಾಣಿಕರ ಸಮ್ಮುಖ ನಿಂದಿಸಿ ಮಾನಸಿಕ ಕಿರುಕುಳ ನೀಡಿದ ಆರೋಪ ಸೋಮವಾರ ಕೇಳಿ ಬಂದಿದೆ.

ಈ ಬಗ್ಗೆ ಬಸ್ ಚಾಲಕ ಮತ್ತು ಕಂಡೆಕ್ಟರ್ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ಕೆ.ಮುಫೀದಾ ರಹ್ಮಾನ್ ಅವರು ವೃತ್ತಿಯಲ್ಲಿ ವಕೀಲೆಯಾ ಗಿದ್ದು, ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮುಫೀದಾ ರಹ್ಮಾನ್ ಅವರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್‌ನಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುವ ರೂಟ್ ನಂಬ್ರ 19ರ ‘ಆ್ಯಶೆಲ್’ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ತಾನು ಬಸ್ಸಿಗೆ ಹತ್ತುವಾಗ ಚಾಲಕನು ದುಡುಕಿನಿಂದ ಮುಂದಕ್ಕೆ ಚಲಾಯಿಸಿದ. ಈ ವೇಳೆ ಕೆಳಗೆ ಬೀಳುವಂತಾಗಿ ಬೊಬ್ಬೆ ಹಾಕಿದೆ. ಆದರೂ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ. ಈ ವೇಳೆ ಬಸ್ ಕಂಡೆಕ್ಟರ್ ನನ್ನ ಕೈ ಹಿಡಿದೆಳೆದು ನಿಮಗೆ ಬೇಗ ಬಸ್ಸಿಗೆ ಹತ್ತಲು ಆಗುವುದಿಲ್ಲವಾ? ಬಿದ್ದು ಸಾಯುತ್ತೀಯಾ? ಎಂದು ಬೈದಿದ್ದಾನೆ. ಇದಕ್ಕೆ ನಾನು ಪ್ರತಿರೋಧ ತೋರಿದಾಗ ‘ಮುಸ್ಲಿಂ ಹೆಂಗಸರಿಗೆ ತುಂಬಾ ಅಹಂಕಾರ. ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು. ಇಲ್ಲದಿದ್ದರೆ ಇಳಿಯಬೇಕು’ ಎಂದು ತಾನು ಬಸ್ಸಿನಿಂದ ಇಳಿಯುವವರೆಗೆ ನನಗೆ ಅವಾಚ್ಯ ಶಬ್ದದಿಂದ ಬೈದು ಸಾರ್ವಜನಿಕರ ಮುಂದೆ ಮಾನಹಾನಿಗೊಳಿಸಿ ದ್ದಾನೆ. ತಾನು ಆತನ ಫೋಟೋವನ್ನು ಮೊಬೈಲ್‌ನಲ್ಲಿ ತೆಗೆಯುವಾಗ ನಿನಗೆ ಏನು ಮಾಡಲು ಸಾಧ್ಯವಿದೆ. ಅದನ್ನು ಮಾಡು ಎಂದಿದ್ದಾನೆ. ಹಾಗಾಗಿ ಬಸ್ಸನ್ನು ಹತ್ತುವಾಗ ಕೆಳಗೆ ಬೀಳುವಂತಾದರೂ ನಿಲ್ಲಿಸದ ಚಾಲಕನ ಹಾಗೂ ಬಸ್ಸಿನಲ್ಲಿ ಉಡಾಫೆಯಿಂದ ವರ್ತಿಸಿ ಮಾನಸಿಕ ಕಿರುಕುಳ ನೀಡಿದ ಕಂಡೆಕ್ಟರ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ವಕೀಲೆ ಮುಫೀದಾ ರಹ್ಮಾನ್ ಒತ್ತಾಯಿಸಿದ್ದಾರೆ.

ಪ್ರಯಾಣಿಕರ ಜೊತೆ ಕೆಲವು ಬಸ್ಸಿನ ಸಿಬ್ಬಂದಿಗಳು ಅತಿರೇಕದಿಂದ ವರ್ತಿಸುತ್ತಿರುವ ದೂರುಗಳು ಕೇಳಿ ಬಂದ ಹಿನ್ನಲೆ ಯಲ್ಲಿ ಪೊಲೀಸ್ ಆಯುಕ್ತರು ಇತ್ತೀಚೆಗೆ ಬಸ್ ಮಾಲಕರ ಸಭೆ ಕರೆದು ಈ ಬಗ್ಗೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದರು. ಆದಾಗ್ಯೂ ಬಸ್ ಸಿಬ್ಬಂದಿಗಳ ಆಟಾಟೋಪ ಮುಂದುವರಿದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ‘ಘಟನೆಯ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News