ಮಂಗಳೂರು: ಕಾರು ಢಿಕ್ಕಿ; ದ್ವಿಚಕ್ರ ವಾಹನ ಸವಾರರಿಬ್ಬರಿಗೆ ಗಾಯ
ಮಂಗಳೂರು: ಝೊಮೆಟೊ ಡೆವಿವರಿ ನೀಡಲು ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಹಿಂಭಾಗದಿಂದ ಢಿಕ್ಕಿ ಹೊಡೆದು ಇಬ್ಬರು ಯುವಕರು ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಘಟನೆ ಶನಿವಾರ ತಡರಾತ್ರಿ ವರದಿಯಾಗಿದೆ.
ಗಾಯಗೊಂಡವರನ್ನು ಕಾಸರಗೋಡು ನಿವಾಸಿಗಳಾದ ಮುಹಮ್ಮದ್ ಅದ್ನಾನ್ ಮತ್ತು ಬಾಸಿಲ್ ಎಂದು ತಿಳಿದು ಬಂದಿದೆ.
ಯುವಕರು ಕಾಲೇಜು ವಿದ್ಯಾಭಾಸದ ಜೊತೆಗೆ ರಾತ್ರಿ ಸಮಯದಲ್ಲಿ ಝೊಮೆಟೊ ಡೆಲಿವರಿ ಬಾಯ್ ಗಳಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಪದುವಾ ಕಾಲೇಜು ಬಳಿ ಡೆಲಿವರಿ ಹಿಡಿದುಕೊಂಡು ಹೋಗುತ್ತಿದ್ದ ಸಂದರ್ಭ ಬುಲೆರೋ ವಾಹನದಲ್ಲಿ ಬಂದು ಎದುರಿನಿಂದ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳಿಂದ ಮಾಹಿತಿ ಪಡೆದು ಕೊಂಡಿದ್ದಾರೆ. ಗಾಯಾಳುಗಳು ನೀಡಿದ ಹೇಳಿಕೆಯಂತೆ ಆರೋಪಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.